ಎಲೆಬೇತೂರಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ದಾವಣಗೆರೆ, ಮಾ. 11 – ಎಲೆಬೇತೂರು ಗ್ರಾಮದಲ್ಲಿ  11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಈ ಭಾಗದ ಕನ್ನಡಿ ಗರ ಸೌಭಾಗ್ಯವಾಗಿದೆ. ಬಿ ವಾಮದೇವಪ್ಪ ಅವರು ಹಿಂದೆ ತಾಲೂಕು ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ನಮ್ಮ ಗ್ರಾಮದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಮಾಡಲು ಕೇಳಿಕೊಂಡಿದ್ದೆವು. ಆದರೆ, ಆಗ ಆಗದಿದ್ದದ್ದು ಈಗ ನಮಗೆ ಜಿಲ್ಲಾ ಸಮ್ಮೇಳನ ಮಾಡುವ ಸೌಭಾಗ್ಯ ಒಲಿದುಬಂದಿದೆ ಎಂದು ಗ್ರಾಮದ ಮುಖಂಡ ಎಚ್. ಬಸವರಾಜಪ್ಪ ಅವರು ಸಂತೋಷ ವ್ಯಕ್ತಪಡಿಸಿದರು. 

ಎಲೆಬೇತೂರಿನಲ್ಲಿ ನಿನ್ನೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವ ಸಿದ್ದತಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಗ್ರಾಮದ ಮುಖಂಡರುಗಳಾದ ನಾಗಪ್ಪ,
ಬಿ. ಕರಿಬಸಪ್ಪ ಹಾಗೂ ಬಿ. ಜಿ. ಸಂಗನಗೌಡ್ರು ಮಾತನಾಡಿ, ಗ್ರಾಮಸ್ಥರು ಸಮ್ಮೇಳನವನ್ನು ಅದ್ಧೂರಿ ಮತ್ತು ಅರ್ಥಪೂರ್ಣವಾಗಿ ನೆರವೇರಿಸಿ ಕೊಡಲು  ಉತ್ಸುಕರಾಗಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ ಅವರು ಮಾತನಾಡಿ, ತಾವು ಜಿಲ್ಲಾ ಅಧ್ಯಕ್ಷರಾದ ಮೇಲೆ ಮೊದಲನೇ ಜಿಲ್ಲಾ ಸಮ್ಮೇಳನ ಇದಾಗಿದೆ. ಇದು ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿದ್ದು, ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಮಹಿಳೆಗೆ ನೀಡಿರುವುದು  ಔಚಿತ್ಯ ಪೂರ್ಣವಾಗಿದೆ ಎಂದರು. ಪ್ರತಿವರ್ಷ ದಾವಣಗೆರೆ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಜಿಲ್ಲಾ ಸಮ್ಮೇಳನವನ್ನು ಆಯೋಜಿಸಿ ಆ ಮೂಲಕ ಕನ್ನಡ ಕಟ್ಟುವ ಕೆಲಸವನ್ನು ಜಿಲ್ಲೆಯಾದ್ಯಂತ ಯಶ ಸ್ವಿಯಾಗಿ ನೆರವೇರಿಸುತ್ತೇನೆ ಎಂದು ಹೇಳಿದರು. 

ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎ.ಆರ್. ಉಜ್ಜಿನಪ್ಪ ಅವರು ಸಮ್ಮೇಳನದ ರೂಪುರೇಷೆಯನ್ನು ಗ್ರಾಮಸ್ಥರಿಗೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಬಿ ದಿಳ್ಯಪ್ಪ ಭಾಗವಹಿಸಿದ್ದರು. ಹಾಗೂ ಬೇತೂರು ಗ್ರಾಮದ ಎಂ. ನಾಗಪ್ಪ ಎಚ್. ಬಸವರಾಜಪ್ಪ, ಎಂ.ಬಸವರಾಜಪ್ಪ, ಎಂ.ಪತ್ರಿಬಸಪ್ಪ, ಬಿ.ಪ್ರಭು, ಬಿ.ಜಿ. ಸಂಗನ ಗೌಡ್ರು, ಬಿ. ವಿರೂಪಾಕ್ಷಪ್ಪ, ಬಿ.ಕರಿಬಸಪ್ಪ, ಬಿ.ರಾಜಪ್ಪ, ಬಿ.ಎಂ. ಬಸವರಾಜಯ್ಯ, ಎಂ.ಎಸ್. ಮಂಜುನಾಥ್, ಎ.ಕೆ. ಮಂಜಪ್ಪ, ಗೌಡ್ರು ಗುರುಮೂರ್ತಿ, ಬಿ.ಶಿವಕುಮಾರ್,  ಬಿ.ಕಲ್ಪನಹಳ್ಳಿ ಬಸವಲಿಂಗಪ್ಪ,   ನಾಗರಾಜ್ ಮತ್ತು ಇತರರು ಸಲಹೆ – ಸಹಕಾರ ನೀಡಿದರು.

error: Content is protected !!