ಮಠದ ಪ್ರಗತಿಯ ತೀವ್ರತೆ ಹೆಚ್ಚಿಸಲು ಬಸವರಾಜನ್ ನೇಮಕ : ಶರಣರು

ಚಿತ್ರದುರ್ಗ, ಮಾ. 8- ರಾಗ, ದ್ವೇಷ ಒಳ್ಳೆಯದಲ್ಲ. ಪರಸ್ಪರ ಪ್ರೀತಿಯಿಂದ ಸಾಧನೆ ಮಾಡಬೇಕಿದೆ. ಇದನ್ನು ಗಮನಿಸಿ ಇದಕ್ಕೆ ಶಾಶ್ವತವಾದ ಇತಿಶ್ರೀ ಹಾಡಬೇಕೆಂದು, ಮಠವನ್ನು ಪ್ರಗತಿ ಹಾದಿಯಲ್ಲಿ ನಡೆಸಬೇ ಕೆಂದು ತೀರ್ಮಾನಿಸಿ, ಪ್ರಗತಿಯ ತೀವ್ರತೆ ಯನ್ನು ಹೆಚ್ಚಿಸುವ, ಸಮಸ್ಯೆಗಳನ್ನು ಬಗೆಹರಿ ಸುವ ನಿಟ್ಟಿನಲ್ಲಿ ಎಸ್.ಕೆ. ಬಸವರಾಜನ್ ಅವರನ್ನು ಆಡಳಿತಾಧಿಕಾರಿಯನ್ನಾಗಿ ಹಾಗು ವಿದ್ಯಾಪೀಠಕ್ಕೆ ಗೌರವ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ಡಾ. ಶಿವ ಮೂರ್ತಿ ಮುರುಘಾ ಶರಣರು ತಿಳಿಸಿದರು.

ಇಲ್ಲಿನ ಶ್ರೀ ಮಠದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶರಣರು, ಚಾರಿತ್ರ್ಯಿಕ ಹಿನ್ನೆಲೆ ಹೊಂದಿರುವ ಮುರುಘಾ ಮಠದಲ್ಲಿ ನನ್ನನ್ನು ಸೇರಿದಂತೆ 20 ಮಠಾಧೀಶರು ಆಗಿಹೋಗಿದ್ದಾರೆ. ಉಜ್ವಲ ಇತಿಹಾಸ ಹೊಂದಿರುವ ಮಠವನ್ನು 21ನೇ ಶತಮಾನದಲ್ಲಿ ಮುಂದುವರಿಸುತ್ತಾ ಹೋಗುತ್ತಿದ್ದೇವೆ. 14-15 ವರ್ಷಗಳಿಂದ ಶ್ರೀಮಠವನ್ನು ಕಟ್ಟಿದ್ದೇವೆ. ಅದರ ಕೀರ್ತಿ ಎಲ್ಲೆಡೆ ಪಸರಿಸುವಂತೆ ಮಾಡಿದ್ದೇವೆ. ನಾವು ಎಲ್ಲಾ ಆಡಳಿತವನ್ನು ಕೇಂದ್ರಿಕರಿಸಿಕೊಂಡಿದ್ದೆವು, ನಾವೇ ನಿರ್ವಹಿಸುತ್ತಿದ್ದೆವು. ಹಾಗಿದ್ದಾಗ್ಯೂ ಕಾನೂನು ಸಮರ ನಡೆಸಿದ್ದೆವು. ಇದು ಪ್ರಗತಿಗೆ ಅಡ್ಡಿ ಮಾಡಿತ್ತು ಎಂದು ಹೇಳಿದರು.

ಎಸ್.ಕೆ. ಬಸವರಾಜನ್ ಮಾತನಾಡಿ, ನನ್ನ ಸೇವೆಯನ್ನು ಗುರುತಿಸಿ ಶ್ರೀಗಳು ಎರಡನೇ ಬಾರಿ ಅವಕಾಶ ಮಾಡಿಕೊಟ್ಟಿದ್ದಾರೆ. ರಾಜಕೀಯಕ್ಕೆ ಹೋಗದೆ, ಅವರ ಆದೇಶದಂತೆ ನಡೆದುಕೊಳ್ಳುತ್ತೇನೆ ಎಂದು ಹೇಳಿದರು.

error: Content is protected !!