ಕೊನೆಯ ಪ್ರಜೆ ಬರುವವರೆಗೂ ಸರ್ಕಾರದ ಪ್ರಯತ್ನ ನಿರಂತರ

ರಾಣೇಬೆನ್ನೂರು, ಮಾ. 2- ಯುಕ್ರೇನ್‌ನಲ್ಲಿ ಸಿಲುಕಿರುವ ಭಾರತದ ಕೊನೆಯ ಪ್ರಜೆಯನ್ನು ಕರೆ ತರುವವರೆಗೂ ಸರ್ಕಾರ ಪ್ರಯತ್ನ ನಡೆಸುತ್ತಿರುತ್ತದೆ. ಈ ಕಾರ್ಯದಲ್ಲಿ ನಾಲ್ವರು ಸಚಿವರು ಹಾಗೂ ಅಧಿಕಾರಿಗಳ ತಂಡ ಸಂಪೂರ್ಣ ತೊಡಗಿಕೊಂಡಿದೆ. ಪ್ರತಿ ನಿಮಿಷ ಸಹ ಮಹತ್ವದಿಂದ ಕೂಡಿದ್ದು, ಕಟ್ಟೆಚ್ಚರದಿಂದ ಕಾರ್ಯ ನಡೆದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದರು.

ಅವರು ನಿನ್ನೆ ರಷ್ಯಾ-ಯುಕ್ರೇನ್ ಸಂಘರ್ಷದಲ್ಲಿ ಬಲಿಯಾದ ವೈದ್ಯಕೀಯ ವಿದ್ಯಾರ್ಥಿ ಚಳಗೇರಿಯ ನವೀನ್ ಮನೆಗೆ ಆಗಮಿಸಿ, ಪಾಲಕರಿಗೆ ಸಾಂತ್ವನ ಹೇಳಿ ಮಾಧ್ಯಮಗೋಷ್ಠಿ ನಡೆಸಿದರು.

ಹಾರ್ಕಿವ್ ಬಂಕರ್‌ನಲ್ಲಿರುವ ವಿದ್ಯಾರ್ಥಿಗಳು ಹಾಗೂ ಇತರರು ರೈಲ್ವೆ ಮೂಲಕ ಗಡಿ ಪ್ರದೇಶಕ್ಕೆ ಬರಲು ವ್ಯವಸ್ಥೆ ಆಗಿದೆ. 20 ತಾಸುಗಳ ಪ್ರಯಾಣದ ನಂತರ ವಿಮಾನದಲ್ಲಿ  ಭಾರತಕ್ಕೆ ಬರುವ ಬಗ್ಗೆ ಮಾಹಿತಿ ಇದೆ. ಇನ್ಮುಂದೆ ಭಾರತೀಯನ ಜೀವಕ್ಕೂ ತೊಂದರೆ ಆಗದಂತೆ ಸರ್ಕಾರ ಎಚ್ಚರ ವಹಿಸುತ್ತದೆ ಎಂದು ಸಚಿವ ಜೋಷಿ  ಹೇಳಿದರು.

ಪಾಲಕರ ಬೇಡಿಕೆಯಂತೆ ಅವರ ಮಗನ ಕಳೇಬರ ಹಾಗೂ ಇತರೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುವ ಹಾಗೂ ಅವರ ವಿದ್ಯಾರ್ಜನೆಯಲ್ಲಿ ತೊಡಕು ಬಾರದಂತೆ, ನವೀನ್ ಸಹೋದರ ಹರ್ಷನಿಗೆ ಯೋಗ್ಯ ನೌಕರಿ ಕೊಡಿಸುವ ಮುಂತಾದವುಗಳ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಪ್ರಧಾನಿಗಳ ಜೊತೆ ಚರ್ಚಿಸು ವುದಾಗಿ ಸಚಿವ ಜೋಷಿ ವಿವರಿಸಿದರು.

ಶಾಸಕರಾದ ಅರುಣಕುಮಾರ ಪೂಜಾರ, ವಿರೂಪಾಕ್ಷಪ್ಪ ಬಳ್ಳಾರಿ, ಮಾಜಿ ಸಚಿವ ಕಾಂಗ್ರೆಸ್‌ನ ಬಸವರಾಜ ಶಿವಣ್ಣನವರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪ್ರಕಾಶ ಕೋಳಿವಾಡ, ಬಿಜೆಪಿ, ಕಾಂಗ್ರೆಸ್‌ನ ಜಿಲ್ಲೆಯ ವಿವಿಧ ಪದಾಧಿಕಾರಿಗಳು, ಜಿಲ್ಲಾಧಿಕಾರಿ ಶೆಟ್ಟೆಣ್ಣನವರ ಮತ್ತಿತರರು ನವೀನ್ ಪಾಲಕರಿಗೆ ಸಾಂತ್ವನ ಹೇಳಿದರು.

error: Content is protected !!