ಅನೇಕ ಸಂಕಷ್ಟಗಳನ್ನು ಎದುರಿಸಿ, ಕೃಷಿ ಮಾಡಿ ಮಠ ಕಟ್ಟಿದ ಕುಂಚಿಟಿಗ ಸ್ವಾಮೀಜಿ

ಹೊನ್ನಾಳಿ, ಫೆ.28- ಯಾವುದೇ ಪೀಠದ ಸ್ವಾಮೀಜಿ ಹಾಗೂ ಸಮಾಜದ ಮುಖಂಡರು ತಮ್ಮ ಸಮಾಜದಲ್ಲಿನ ನೊಂದವರ ಧ್ವನಿಯಾಗಿ ಕೆಲಸ ಮಾಡುವುದು ಅತೀ ಮುಖ್ಯವಾದ ಹಾಗೂ ಪವಿತ್ರವಾದ ಕಾರ್ಯವಾಗಲಿದೆ ಎಂದು ರಾಜ್ಯ ಸರ್ಕಾರದ ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.

ತಾಲ್ಲೂಕು ಕುಂಚಿಟಿಗ ಸಮಾಜ ಮತ್ತು ದಾವಣಗೆರೆ, ಶಿವಮೊಗ್ಗ ಹಾಗೂ ಹಾವೇರಿ ಜಿಲ್ಲಾ ಕುಂಚಿಟಿಗ ಸಮಾಜದ ವತಿಯಿಂದ ನಗರದ ಶಿವಮೊಗ್ಗ ಮುಖ್ಯ ರಸ್ತೆಯ ಎಡಭಾಗದಲ್ಲಿ ಸೋಮವಾರ  32ನೇ ವಿಜಯರಾಯ ಸಂಗಮೇ ಶ್ವರ ಜಯಂತಿ ಹಾಗೂ ಕುಂಚಿಟಿಗ ಸಮುದಾಯ  ಭವನದ ಭೂಮಿ ಪೂಜೆ ನೆರವೇರಿಸಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸಮಾಜದ ಪ್ರತಿಭಾನ್ವಿತ ಮಕ್ಕಳಿಗೆ ಐಎಎಸ್ ಮತ್ತು ಐಪಿಎಸ್ ವ್ಯಾಸಂಗ ಸೇರಿದಂತೆ ಇತರೆ ಉನ್ನತ ಶಿಕ್ಷಣಕ್ಕೆ ಆದ್ಯತೆ ನೀಡುವ ಹಾಗೂ ಹಾಸ್ಟೆಲ್ ಸೌಲಭ್ಯ ಕಲ್ಪಿಸುವುದರ ಮೂಲಕ ಸಮಾಜದ ಸಂಘಟನೆ. ಇದು ಒಂದು ಶಕ್ತಿ ಹಾಗೂ ಪ್ರೇರಣೆಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಶಾಸಕ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಹೊನ್ನಾಳಿ ಕುಂಚಿಟಿಗ ಸಮಾಜದವರು ನಿರ್ಮಿಸಲು ಮುಂದಾಗಿರುವ ಸಮುದಾಯ ಭವನಕ್ಕೆ ಸರ್ಕಾರದಿಂದ 5 ಕೋಟಿ ರೂ.ಗಳ ಅನುದಾನ ಕೊಡಿಸುವ ಭರವಸೆ ನೀಡಿ, ಮುಂದೆ ಅವಶ್ಯವಿರುವ ಕಟ್ಟಡಕ್ಕೆ ಸಮಾಜದೊಂದಿಗೆ ಚರ್ಚಿಸಿ, ವಯಕ್ತಿಕವಾಗಿ ಧನ ಸಹಾಯ ಮಾಡುವುದಾಗಿ ಹೇಳಿದರು. 

ಕೂಡಲಸಂಗಮದ ಶ್ರೀ ಪಂಚಮಸಾಲಿ ಜಯಮೃತುಂಜಯ ಸ್ವಾಮೀಜಿ ಮಾತನಾಡಿ, ಒಂದು ಮಠದ ಸ್ವಾಮೀಜಿ ತಮ್ಮ ಸಂಪೂರ್ಣ ಬದುಕನ್ನು ಜನಾಂಗಕ್ಕೆ ಮೀಸಲಿಟ್ಟಿರುವವರೆಂದರೆ ಅದು ಕುಂಚಿಗ ಸ್ವಾಮೀಜಿ ಮಾತ್ರ ಎಂದು ಹೆಮ್ಮೆಯಿಂದ ಹೇಳಬೇಕಿದೆ. ಶ್ರೀ ಶಾಂತವೀರ ಸ್ವಾಮೀಜಿಗಳಲ್ಲಿ ಬಹುಜ್ಞಾನದ ಪಾಂಡಿತ್ಯ ಹಾಗೂ ಮುಂದಾಲೋಚನೆ ಇದ್ದು, ಹೊರ ರಾಜ್ಯದಲ್ಲೂ ಸಮಾಜ ಸಂಘಟಿಸಿದ ಹಿರಿಮೆ ಅವರದ್ದಾಗಿದೆ ಎಂದು ವಿವರಿಸಿದರು.

ಕನಕ ಗುರು ಪೀಠದ ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ಹರಿದು ಹಂಚಿಹೋಗಿದ್ದ ಕುಂಚಿಟಿಗ ಸಮಾಜವನ್ನು ಸಂಘಟಿಸಿದ ಅವರು ಸ್ವಯಂ ಕೃಷಿ ಮಾಡಿ ಮಠ ಕಟ್ಟಿದ ಸ್ವಾಮೀಜಿ ಇದ್ದರೆ ಅವರು ಕುಂಚಿಟಿಗ ಸಮಾಜದ ಶಾಂತವೀರ ಸ್ವಾಮೀಜಿ, ಅವರು  ಕರ್ನಾಟಕ ಉದ್ದಗಲಕ್ಕೂ ಸಂಚರಿಸಿ ಸಮಾಜ ಸಂಘಟನೆ ಮಾಡಿ ಅನೇಕ ಸಂಕಷ್ಟ ಗಳನ್ನು ಎದುರಿಸಿ ಈದೀಗ  ಹೊಸದುರ್ಗದಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಪೀಠದ ಅಭಿವೃದ್ದಿ ಕಾಮಗಾರಿಗೆ ಮುಂದಾಗಿದ್ದಾರೆ ಎಂದರು. 

ಸಭೆಯ ಅಧ್ಯಕ್ಷತೆ ವಹಿಸಿದ್ದ ಕುಂಚಿಟಿಗ ಸಮಾಜದ ಅಧ್ಯಕ್ಷ ಸುರೇಶ್ ಮಾತನಾಡಿ, 1992ರಲ್ಲೇ ಕುಂಚಿಟಿಗ ಸಮಾಜ ಸಂಘಟನೆಗೊಂಡು ನೊಳಂಬ ವಿದ್ಯಾಸಂಸ್ಥೆ ಆರಂಭಿಸಿದ್ದು, ರೇಣುಕಾಚಾರ್ಯ ಸಚಿವರಾಗಿದ್ದ ಅವಧಿಯಲ್ಲಿ ಶಾಲೆಗೆ ಸರ್ಕಾರದ ಅನುದಾನ ಕಲ್ಪಿಸಿದ್ದು, ಮಾಜಿ ಶಾಸಕ ಶಾಂತನಗೌಡ ತಮ್ಮ ಅವಧಿಯಲ್ಲಿ  13 ಲಕ್ಷ ರೂ. ಗಳ ವೆಚ್ಚದಲ್ಲಿ 5 ರೂಮುಗಳ ನಿರ್ಮಾಣಕ್ಕೆ ಅನುದಾನ ಕಲ್ಪಿಸಿದ್ದನ್ನು ಸ್ಮರಿಸಿ, ಸಮಾಜದಲ್ಲಿ ರಾಜಕೀಯ ಬಾರದಿರಲಿ ಸಮಾಜ ಮತ್ತಷ್ಟು ಬಲಗೊಂಡು ಸಮುದಾಯ ಭವನ ಮತ್ತು ಮಠಗಳ ನಿರ್ಮಾಣ ಮಾಡಲು ಸಮಾಜದವರು ಕೈ ಜೋಡಿಸಬೇಕು ಎಂದರು.

ಕಾರ್ಯಕ್ರಮದ ಸಾನ್ನಿಧ್ಯವನ್ನು  ಹೊಸದುರ್ಗ ಕುಂಚಗಿರಿಯ ಕುಂಚಿಟಿಗ ಮಹಾ ಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ಜಗದ್ಗುರು ಡಾ. ಶಾಂತವೀರ ಮಹಾಸ್ವಾಮೀಜಿ ವಹಿಸಿದ್ದರು. ಕಾಗಿನಲೆ ಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ, ಹಡಪದ ಶ್ರೀ ಅಪ್ಪಣ್ಣ ಸ್ವಾಮೀಜಿ, ಶ್ರೀ ಇಮ್ಮಡಿ ಸ್ವಾಮೀಜಿ, ಶ್ರೀ ಯಾದವ ಸ್ವಾಮೀಜಿ ಇದ್ದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ  ಭೈರತಿ ಬಸವರಾಜ್, ಕರ್ನಾಟಕ ಖನಿಜ ನಿಗಮ ನಿಯಮಿತ  ಬೆಂಗಳೂರು ಇದರ ಅಧ್ಯಕ್ಷ ಎಸ್.ಲಿಂಗಮೂರ್ತಿ, ಹೊನ್ನಾಳಿ ಕ್ಷೇತ್ರದ ಮಾಜಿ ಶಾಸಕ ಡಿ.ಜಿ.ಶಾಂತನಗೌಡ,  ಕೌಶಲ್ಯಾಭಿವೃದ್ದಿ ನಿಗಮ, ಬೆಂಗಳೂರು ಅಧ್ಯಕ್ಷ ಮುರುಳೀಧರ ಹಾಲಪ್ಪ, ಗುತ್ತಿಗೆದಾರ ಸುಂಕದಕಟ್ಟೆ ನರಸಿಂಹಮೂರ್ತಿ, ರುದ್ರೇಶ್ ಕುಂಕುವ, ರಾಜೇಶ್ ಜಿ. ಹರೀಶ್, ಸಮಾಜದ ಮುಖಂಡ ವರದರಾಜಪ್ಪ ಇನ್ನಿತರರು ಇದ್ದರು.

error: Content is protected !!