ಪದವಿ ಅಂತಿಮ ಪರೀಕ್ಷೆ ಮುಂದೂಡುವ ಆದೇಶ ಅನುಮೋದಿಸಲು ಆಗ್ರಹ

ದಾವಣಗೆರೆ, ಫೆ.23- ಪದವಿ ಅಂತಿಮ ಪರೀಕ್ಷೆಗಳನ್ನು ಮುಂದೂಡುವಂತೆ ಆದೇಶಿಸಿರುವ ರಾಜ್ಯ ಸರ್ಕಾರದ ಸುತ್ತೋಲೆ ಯನ್ನು ಅನುಮೋದಿಸುವಂತೆ ದಾವಣಗೆರೆ ವಿಶ್ವವಿದ್ಯಾಲಯಕ್ಕೆ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್ (ಎಐಡಿಎಸ್‌ಓ) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಇಂದು ವಿದ್ಯಾರ್ಥಿ ಗಳು ಮನವಿ ಮಾಡಿದರು.

ರಾಜ್ಯದಲ್ಲಿ ಸರ್ಕಾರಿ ಕಾಲೇಜುಗಳ ಪದವಿ ವಿದ್ಯಾರ್ಥಿಗಳು ಶೈಕ್ಷಣಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಹಲವು ಸವಾಲುಗಳು ಮತ್ತು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕನಿಷ್ಟ ತರಗತಿಗಳು ನಡೆದಿರುವುದರಿಂದ ಪರೀಕ್ಷೆಯ ತಯಾರಿಗೆ ಸೂಕ್ತ ಕಾಲಾವಕಾಶ ನೀಡಿ, ನಂತರವೇ ಪರೀಕ್ಷೆಗಳನ್ನು ನಿಗದಿಪಡಿಸಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದರು.

ಈ ಕುರಿತು ವಿಶ್ವವಿದ್ಯಾಲಯ ಹಾಗೂ ರಾಜ್ಯ ಸರ್ಕಾರಕ್ಕೆ ಈಗಾಗಲೇ ವಿದ್ಯಾರ್ಥಿಗಳು ಮನವಿ ನೀಡಿದ್ದರು. ಈಗ ರಾಜ್ಯ ಸರ್ಕಾರವು ಪರೀಕ್ಷೆಗಳನ್ನು ಮುಂದೂಡುವಂತೆ ಆದೇಶ ಹೊರಡಿಸಿದೆ. 

ಆ ಮೂಲಕ ವಿದ್ಯಾರ್ಥಿಗಳ ಬೇಡಿಕೆಯನ್ನು ಎತ್ತಿ ಹಿಡಿದಿದೆ. ಈ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯವು ಕೂಡಲೇ ಪರಿಷ್ಕೃರಿತ ವೇಳಾಪಟ್ಟಿಯನ್ನು ಪ್ರಕಟಿಸಿ ವಿದ್ಯಾರ್ಥಿಗಳ ಗೊಂದಲವನ್ನು ಪರಿಹರಿಸುವಂತೆ ದಾವಣಗೆರೆ ವಿವಿ ಕುಲಪತಿ ಡಾ. ಎ.ಹೆಚ್. ಅನಿತಾ ಅವರಿಗೆ ಮನವಿ ಮಾಡಿದರು. 

ಮನವಿಗೆ ಸ್ಪಂದಿಸಿದ ಕುಲಪತಿಗಳು, ರಾಜ್ಯ ಸರ್ಕಾರದ ಆದೇಶದಂತೆ ಒಂದು ತಿಂಗಳು ಕಾಲ ಮುಂದೂಡುವುದಾಗಿ ಭರವಸೆ ನೀಡಿದರು.

error: Content is protected !!