ಉಗ್ರಪ್ಪ ಗಂಡಸಾಗಿದ್ದರೆ ನನ್ನ ವಿರುದ್ಧದ ಆರೋಪ ಸಾಬೀತುಪಡಿಸಲಿ: ಸಿಎಂ ಇಬ್ರಾಹಿಂ ಸವಾಲು

ಉಗ್ರಪ್ಪ ಗಂಡಸಾಗಿದ್ದರೆ ನನ್ನ ವಿರುದ್ಧದ ಆರೋಪ ಸಾಬೀತುಪಡಿಸಲಿ: ಸಿಎಂ ಇಬ್ರಾಹಿಂ ಸವಾಲು - Janathavaniದಾವಣಗೆರೆ, ಫೆ.13- ವಿ.ಎಸ್. ಉಗ್ರಪ್ಪ ಗಂಡಸೇ ಆಗಿದ್ದರೇ ನನ್ನ ವಿರುದ್ಧ ಮಾಡಿರುವ ವಕ್ಫ್‌ ಆಸ್ತಿ ಕಬಳಿಕೆ ಆರೋಪ ಸಾಬೀತು ಪಡಿಸಲಿ. ರಾಜ್ಯ ಸರ್ಕಾರ ಈ ಹಿಂದೆ ಅನ್ವರ್ ಮಾನ್ಪಡೆ ಅವರ ನೇತೃತ್ವದಲ್ಲಿ ಸಿದ್ಧ ಪಡಿಸಿದ ವರದಿಯನ್ನು ಸಿಬಿಐಗೆ ಕೊಡಲಿ ಎಂದು ವಿಧಾನ ಪರಿಷತ್ತು ಸದಸ್ಯ ಸಿ.ಎಂ. ಇಬ್ರಾಹಿಂ ಸವಾಲು ಹಾಕಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಉಗ್ರಪ್ಪನ ಮದ್ವೆ ಮಾಡಿದ್ದು ನಾನು, ಎಂಎಲ್‍ಸಿ ಮಾಡಿದ್ದು ನಾನು, ನಾನು ಕಾರ್ ಕೂಡಾ ಕೊಟ್ಟಿದ್ದೆ ಇದನ್ನ ಮರೆತಿದ್ದಾರೆ. ಅವರು ವಕೀಲರು, ನಾನು ಅವರ ಕಕ್ಷಿದಾರ ಆಗಿದ್ದೆ. 

ಆದರೆ ವಕೀಲನಾದ ವ್ಯಕ್ತಿ ಕಕ್ಷಿದಾರರ ಪರ ಇರಬೇಕು. ಇದನ್ನು ಬಿಟ್ಟು ಕಕ್ಷದಾರನ ವಿರುದ್ಧವೇ ವಾದ ಮಾಡುವುದು ಎಷ್ಟು ಸರಿ ಎಂದು ವ್ಯಂಗ್ಯವಾಡಿದರು.

ಉಗ್ರಪ್ಪ ಡಿಕೆಶಿ ಬಗ್ಗೆ ಕೂಡ ಮಾತ ನಾಡಿದ್ದಾರೆ, ಈತನನ್ನು ಸಸ್ಪೆಂಡ್ ಮಾಡಿಲ್ಲ, ಆದರೆ ಮುಸ್ಲಿಮರನ್ನು ಸಸ್ಪೆಂಡ್ ಮಾಡಿದ್ದಾರೆ. ಕಾಂಗ್ರೆಸ್‍ನಲ್ಲಿ ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಅಲ್ಲಿ ಯಾರೂ ಇರಲ್ಲ ಎಂದು ಹೇಳಿದರು.

ಗೋ ಹತ್ಯೆ ಬಿಲ್ ಮಂಡನೆ ಇದೆ. ನಾನು ರಾಜೀನಾಮೆ ನೀಡಿದರೆ ನನ್ನ ಮೇಲೆ ಗೂಬೆ ಕೂರಿಸುತ್ತಾರೆ. ಆದ್ದರಿಂದ ಅಧಿವೇಶನ ಮುಗಿದ ನಂತರ ರಾಜೀನಾಮೆ ಕೊಡಲು ನಿರ್ಧಾರ ಮಾಡಿದ್ದೇನೆ. ಇದಲ್ಲದೇ ನನಗೆ ಮಮತ
ಬ್ಯಾನರ್ಜಿ, ಅಖಿಲೇಶ್ ಯಾದವ್ ಸೇರಿದಂತೆ ಹಲವರು ಕರೆ ಮಾಡಿದ್ದಾರೆ ಎಂದರು.

ಮುಂದೆ ಸಮ್ಮಿಶ್ರ ಸರ್ಕಾರ ಬರುತ್ತದೆಯೇ ಹೊರತು ಪೂರ್ಣ ಬಹುಮತದ ಸರ್ಕಾರಗಳು ಯಾವುದೂ ಬರಲ್ಲ. ಕಾಂಗ್ರೆಸ್‍ನಲ್ಲಿ ನನ್ನನ್ನು ರಾಜಕೀಯ ಪ್ರಚಾರಕ್ಕಾಗಿ ಮಾತ್ರ ಬಳಸಿಕೊಂಡಿದ್ದಾರೆ. ಕೌನ್ಸಿಲ್‍ನಲ್ಲಿ 21 ಜನ ಇದ್ದರೂ 19 ಜನ ನನ್ನ ಪರ ಇದ್ದರು. ಆದರೆ ವಿರೋಧ ಪಕ್ಷ ಸ್ಥಾನದ ನೀಡದಿದ್ದಾಗ ಯಾವುದಕ್ಕೆ ಬಳಸಿಕೊಳ್ಳುತ್ತಾರೆ ಎನ್ನುವುದು ನಿಮಗೇ ಗೊತ್ತಾಗುತ್ತೆ. ನಮ್ಮ ಶಕ್ತಿಯೇ ನಮ್ಮ ಶತ್ರು ಆಗಿದೆ.  ಕಾಂಗ್ರೆಸ್‌ನಿಂದ ಬಹಳಷ್ಟು ಜನರು ಬರುವವರಿದ್ದಾರೆ. ಡ್ಯಾಂ ಒಡೆದಾಗ ಹೇಗೆ ನೀರು ಬರುತ್ತೋ ಅದೇ ರೀತಿ ಕಾಂಗ್ರೆಸ್‌ನಲ್ಲಿದ್ದವರು ಬರುತ್ತಾರೆ ಎಂದು ಬಹಿರಂಗ ಪಡಿಸಿದರು.

error: Content is protected !!