ಹರಿಹರ, ಫೆ. 9 – ಇಲ್ಲಿನ ಡಿ.ಆರ್.ಎಂ. ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್ ವಿವಾದ ಉಲ್ಬಣಿಸಿ ಪರಿಸ್ಥಿತಿ ವಿಕೋಪಕ್ಕೆ ಹೋಗಿ ಪೊಲೀಸರು ಲಾಠಿ ಪ್ರಹಾರ ನಡೆಸಿ ಅಶ್ರುವಾಯು ಸಿಡಿಸಿದ ಘಟನೆ ನಡೆದಿದೆ.
ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು ಕಾಲೇಜಿನ ಒಳಗೆ ಬರದಂತೆ ಕೆಲವರು ತಡೆದಿದ್ದಾರೆ. ಕಾಲೇಜು ಹೊರಗಡೆ ಇದ್ದ ಕೆಲ ಯುವಕರು ಹಿಜಾಬ್ ಧರಿಸಿದ ಯುವತಿಯರ ಪರ ನಿಂತಿದ್ದಾರೆ. ಈ ವೇಳೆ ಕಾಲೇಜಿನ ಹೊರಗಿನವರೂ ಸೇರಿಕೊಂಡಿ ರುವುದು ಪರಿಸ್ಥಿತಿ ಉಲ್ಬಣಿಸುವಂತೆ ಮಾಡಿದೆ.
ಎರಡೂ ಕೋಮುಗಳ ಯುವಕರ ನಡುವೆ ನಡೆದ ಘರ್ಷಣೆಯಲ್ಲಿ 15-20 ವಿದ್ಯಾರ್ಥಿಗಳು ಹಾಗೂ ಜನರಿಗೆ ಗಾಯಗಳಾಗಿವೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸುವ ಪ್ರಯತ್ನ ನಡೆಸಿದ್ದಾರೆ. ಘಟನೆಯ ನಂತರ ನಗರಾದ್ಯಂತ 144ನೇ ಸೆಕ್ಷನ್ ಜಾರಿಗೆ ತರಲಾಗಿದೆ.
ಜಾಲತಾಣದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಕ್ಕೆ ಸಂಬಂಧಿಸಿದಂತೆ ನಿನ್ನೆಯಷ್ಟೇ ಹರಿಹರದಲ್ಲಿ ಪ್ರಕ್ಷುಬ್ಧಿತ ಪರಿಸ್ಥಿತಿ ಉಂಟಾಗಿತ್ತು. ಪೊಲೀಸ್ ಠಾಣೆಯ ಎದುರು ಸೇರಿದ್ದ ಜನರನ್ನು ಚೆದುರಿಸಲು ಪೊಲೀಸರು ಹರಸಾಹಸ ಪಟ್ಟಿದ್ದರು.
ವಿಡಿಯೋ ಪರಿಶೀಲಿಸಿ ಕ್ರಮ: ಎಸ್ಪಿ ರಿಷ್ಯಂತ್
ಮಂಗಳವಾರ ನಡೆದ ಘಟನೆಯ ಸಂಪೂರ್ಣ ವಿಡಿಯೋ ಚಿತ್ರಣ ನಮ್ಮ ಬಳಿ ಇದೆ. ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಸ್ವಯಂ ಕಾನೂನು ಕ್ರಮಗಳನ್ನು ತೆಗೆದುಕೊಳ್ಳ
ಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ತಿಳಿಸಿದ್ದಾರೆ. ಅಮಾಯಕರ ವಿರುದ್ಧ ದೂರು ದಾಖಲಿಸುವುದಿಲ್ಲ. ಘಟನೆಯಲ್ಲಿ ನೊಂದವರು ದೂರು ನೀಡಿದರೆ ಅವುಗಳನ್ನೂ ಸ್ವೀಕರಿಸಲಾ ಗುವುದು. ಎಲ್ಲಾ ರೀತಿಯ ಮುಂಜಾ ಗ್ರತಾ ಕ್ರಮಗಳನ್ನು ತೆಗೆದುಕೊಳ್ಳ ಲಾಗಿದ್ದು, ಬಿಗಿ ಬಂದೋಬಸ್ತ್ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಪಾಕ್ ಪರ ಘೋಷಣೆ, ಹಲ್ಲೆ
ವೀರೇಶ್ ಹನಗವಾಡಿ ಖಂಡನೆ
ಹರಿಹರ, ಫೆ. 9 – ನಗರದಲ್ಲಿ ನಿನ್ನೆ ಪೊಲೀಸ್ ಠಾಣೆ ಎದುರು ನೂರಾರು ಜನರು ಸೇರಿದ್ದಾಗ ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗಲಾಗಿದೆ. ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್ ಒತ್ತಾಯಿಸಿದ್ದಾರೆ.
ಡಿ.ಆರ್.ಎಂ. ಕಾಲೇಜಿನಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿಗಳನ್ನು ಬೆಂಬಲಿಸಿದ ಕೆಲವರು, ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದಾರೆ. ಪೊಲೀಸರಿಗೂ ಕಲ್ಲು ತೂರಿ, ಅನೇಕ ವಾಹನ ಜಖಂ ಮಾಡಿದ್ದಾರೆ. ಇದನ್ನು ಖಂಡಿಸುವುದಾಗಿ ಅವರು ತಿಳಿಸಿದ್ದಾರೆ. ಪೊಲೀಸ್ ಇಲಾಖೆ ತಕ್ಷಣವೇ ಹೆಚ್ಚಿನ ಕ್ರಮ ತೆಗೆದುಕೊಳ್ಳಬೇಕು. ಅದರಲ್ಲೂ ಗ್ರಾಮೀಣ ಭಾಗದಿಂದ ಬಂದಿರುವ ವಿದ್ಯಾರ್ಥಿ – ವಿದ್ಯಾರ್ಥಿನಿಯರಿಗೆ ರಕ್ಷಣೆ ನೀಡಬೇಕು. ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದವರು ಆಗ್ರಹಿಸಿದ್ದಾರೆ.
ಪ್ರಚೋದನೆ; ಇಬ್ಬರ ಬಂಧನ
ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಮಾಹಿತಿ ಹರಡಿದ ಬಗ್ಗೆ ಹರಿಹರದಲ್ಲಿ ನಿನ್ನೆ ದೂರು ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ.
ಪ್ರಚೋದನಕಾರಿ ಮಾಹಿತಿ ಹರಡಿದ್ದ ತಾಹೇರ್ ಅಂಜುಮ್ ಹಾಗೂ ಮಾರುತಿ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಜಾಲತಾಣಗಳಲ್ಲಿ ಪ್ರಕಟವಾಗಿದ್ದ ಪೋಸ್ಟ್ಗಳು ನಗರದಲ್ಲಿ ಉದ್ವಿಗ್ನತೆಗೆ ಕಾರಣವಾದ ನಂತರ ದೂರು ದಾಖಲಿಸಲಾಗಿತ್ತು. ಕ್ರಮಕ್ಕೆ ಆಗ್ರಹಿಸಿ ದೊಡ್ಡ ಸಂಖ್ಯೆಯಲ್ಲಿ ಜನರು ನಗರ ಪೊಲೀಸ್ ಠಾಣೆ ಎದುರು ಜಮಾ ಯಿಸಿದ್ದ ಘಟನೆಯೂ ನಡೆದಿತ್ತು.
ಪೊಲೀಸ್ ಠಾಣೆಯ ಎದುರು ನೆರೆದಿದ್ದ ಕೆಲವರು ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾರೆ ಎಂದೂ ಆರೋಪಿಸಲಾಗಿತ್ತು. ನಿನ್ನೆ ನಡೆದ ಘಟನೆಗಳಿಗೆ ಸಂಬಂಧಿಸಿದಂತೆ ಠಾಣೆಯಲ್ಲಿ ನಾಲ್ಕು ಪ್ರಕರಣಗಳನ್ನು ದಾಖಲಿಸಲಾಗಿದೆ.
ಪೆಟ್ರೋಲ್ ಬಂಕ್ನಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ಎರಡು ಕೋಮುಗಳ ಯುವಕರ ನಡುವೆ ಘರ್ಷಣೆ ನಡೆದು ಒಬ್ಬರು ಗಾಯಗೊಂಡ ಘಟನೆಯೂ ನಡೆದಿತ್ತು.
ಈ ಘಟನೆಗಳ ಹಿನ್ನೆಲೆಯಲ್ಲಿ ನಗರದಲ್ಲಿ ಹೆಚ್ಚಿನ ಬಂದೋಬಸ್ತ್ ಮಾಡಲಾಗಿತ್ತು. ಈ ನಡುವೆಯೂ, ಡಿ.ಆರ್.ಎಂ. ಕಾಲೇಜಿನಲ್ಲಿ ನಡೆದ ಘಟನೆ ನಗರದ ಶಾಂತಿಯನ್ನು ಕದಡಿದೆ.
ಕಾಲೇಜಿನ ಕೆಲ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಒಳಗೆ ಬರಲು ಬಿಡದೇ ಇದ್ದಾಗ ಮುಸ್ಲಿಮ್ ಮುಖಂಡರು ಕಾಲೇಜಿನ ಹೊರಗೆ ಸೇರಿಕೊಂಡು ಆಕ್ಷೇಪಿಸಿದರು.
ಈ ಸಂದರ್ಭದಲ್ಲಿ ಶಾಸಕ ಎಸ್. ರಾಮಪ್ಪ ಅವರೂ ಇದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಸೇರಿದಂತೆ ಹಿರಿಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಶ್ರಮಿಸಿದ್ದಾರೆ. ಸಿಪಿಐ ಸತೀಶ್, ಪಿಎಸ್ಐ ಬಸವರಾಜ್, ಗ್ರಾಮಾಂತರ ಘಟಕದ ವೀರಬಸಪ್ಪ ಮತ್ತಿತರರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.
ನಗರದಲ್ಲಿ ಹೆಚ್ಚಿನ ಭದ್ರತೆಗಾಗಿ 4 ಡಿ.ಆರ್., 2 ಕೆ.ಎಸ್.ಆರ್.ಪಿ., 100 ಹೋಂ ಗಾರ್ಡ್, 50ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.