ನೆಮ್ಮದಿ ಜೀವನಕ್ಕೆ ಕಾಂಗ್ರೆಸ್ ಅನಿವಾರ್ಯ

ಹರಿಹರದಲ್ಲಿ ಹೆಚ್.ಎ.ಎಂ.ಎಫ್ ಜಿಮ್‌ಗೆ ಚಾಲನೆ ನೀಡಿದ ಶಾಸಕ ರಾಮಪ್ಪ

ಹರಿಹರ, ಜ.30- ಸಾರ್ವಜನಿಕರು ಪ್ರೀತಿ, ವಿಶ್ವಾಸ, ನೆಮ್ಮದಿ ಜೀವನ ನಡೆಸಲು ಮುಂದಿನ ದಿನಗಳಲ್ಲಿ ರಾಜ್ಯ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತ ಅನಿವಾರ್ಯವಾಗಿದೆ ಎಂದು ಶಾಸಕ ಎಸ್. ರಾಮಪ್ಪ ಹೇಳಿದರು.

ನಗರದ ಹಳ್ಳದಕೇರಿ ಇಮಾಮ್ ಮೋಹಲ್ಲಾ ಬಡಾವಣೆಯಲ್ಲಿ ನಗರಸಭೆಯ ಸದಸ್ಯ ಶಂಕರ್ ಖಟಾವ್ಕಾರ್ ಅವರ ನಗರಸಭೆ ಅನುದಾನದಲ್ಲಿ ನವೀಕರಣಗೊಂಡ 8 ಲಕ್ಷ ರೂ. ವೆಚ್ಚದ ಹೆಚ್.ಎ.ಎಂ.ಎಫ್ ಜಿಮ್‌ಗೆ ಚಾಲನೆ ನೀಡಿ ಮಾತನಾಡಿದರು.

ರಾಜ್ಯ ಮತ್ತು ಕೇಂದ್ರದಲ್ಲಿನ ಬಿಜೆಪಿ ಸರ್ಕಾರದಲ್ಲಿ ಆಗುತ್ತಿರುವ ಬೆಲೆ ಏರಿಕೆ ನೋಡಿದರೆ ಸಾರ್ವಜನಿಕರು ಬಂಡವಾಳ ಶಾಹಿಗಳ ಬಳಿ ಕೈ ಕಟ್ಟಿ ಕುಳಿತುಕೊಳ್ಳು ವಂತಹ ದಿನಗಳು ಮರುಕಳಿಸುವ ಕಾಲ ದೂರದಲ್ಲಿಲ್ಲ ಎಂದು ಹೇಳಿದರು.

ಮುಂಬರುವ ದಿನಗಳಲ್ಲಿ ಸಲಕರಣೆಗೆ 5 ಲಕ್ಷ ರೂ. ಅನುದಾನ ಮತ್ತು ಮೇಲಿನ ಅಂತಸ್ತಿನಲ್ಲಿ ಟೈಲರಿಂಗ್ ಸೇರಿದಂತೆ ಇತರೆ ಕೆಲಸಕ್ಕೆ ಉಪಯುಕ್ತವಾಗಲು ಅನುದಾನ ಬಿಡುಗಡೆ ಮಾಡುವುದಾಗಿ ಅವರು ಹೇಳಿದರು.

ಬೆಂಕಿನಗರ ಮತ್ತು ಕಾಳಿದಾಸ ನಗರ ಜಿಮ್ ಸಹ 18 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲು ಮತ್ತು ನಗರದ ಗಾಂಧಿ ಮೈದಾನದಲ್ಲಿರುವ ಜಿಮ್ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತದೆ ಎಂದರು.

ನಗರಸಭೆ ಸದಸ್ಯ ಶಂಕರ್ ಖಟಾವ್ಕಾರ್ ಮಾತನಾಡಿ, ಶಾಸಕರು ಸೇರಿದಂತೆ ನಗರಸಭೆ ಪೌರಾಯುಕ್ತರಾದ ಎಸ್ .ಲಕ್ಷ್ಮಿ ಸಹಕಾರ ನೀಡಿದ್ದರಿಂದ ಜಿಮ್ ಬೇಗನೆ ಆರಂಭವಾಗಿದೆ. ಈ ಬಡಾವಣೆಯಲ್ಲಿ ಅನೇಕ ದಿನಗಳಿಂದ ನೆನೆಗುದಿಯಲ್ಲಿರುವ ಚರಂಡಿ, ರಸ್ತೆ, ವಿದ್ಯುತ್ ಪೂರೈಕೆ ಸೇರಿದಂತೆ ಹಲವಾರು ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಈಗಾಗಲೇ ಹೆಜ್ಜೆಗಳನ್ನು ಹಾಕಲಾಗಿದೆ ಎಂದರು.

ಸಮಾಜ ಸೇವಕ ನಂದಿಗಾವಿ ಶ್ರೀನಿವಾಸ್, ಮಾಜಿ ನಗರಸಭೆ ಅಧ್ಯಕ್ಷ ಬಿ. ರೇವಣಸಿದ್ದಪ್ಪ, ನಗರ ಸಭೆ ಮಾಜಿ ಸದಸ್ಯ ಮೊಹಮ್ಮದ್ ಫೈರೋಜ್  ಪೈಲ್ವಾನ್, ಆಸಿಫ್ ಆಲಿ, ಸಿ.ಎನ್. ಹುಲಗೇಶ್, ಲತಿಫ್ ಸಾಬ್ ಇತರರು ಮಾತನಾಡಿದರು.

ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಮೌಲಾನಾ ಹಿದಾಯತ್ತುಲ್ಲಾ ಸಾಬ್, ನಗರಸಭೆ ಉಪಾಧ್ಯಕ್ಷ ಎಂ. ಎಸ್. ಬಾಬುಲಾಲ್,
ನಗರಸಭೆ ಸದಸ್ಯ ಅಜೀಂ, ಮಾಜಿ ಸದಸ್ಯ ಏಜಾಜ್ ಆಹ್ಮದ್, ಮುಖಂಡರಾದ ದಾದಾಪೀರ್ ಭಾನುವಳ್ಳಿ, ಮನ್ಸೂರ್ ಮದ್ದಿ, ಪೈಲ್ವಾನ್ ರಹಮತ್ತುಲ್ಲಾ ಸಾಬ್, ಚಮನ್ ಷರೀಫ್‌, ಶಫಿ ಸಾಬ್, ತಲಿಗಿ ಶಬ್ಬೀರ್ ಸಾಬ್, ಅಬ್ಬು ಸಲೀಮ್, ಮುಲ್ಲಾ ಸಾಬ್, ಜಫ್ರುಲ್ಲಾ, ಶಿಕ್ಷಕ ರಿಯಾಜ್ ಅಹ್ಮದ್, ನಜೀರ್ ಹುಸೇನ್, ಬಿ.ಕೆ. ಮುಸ್ತು, ಉಮ್ಮರ ಬಾಷಾ, ಆಫ್ರೋಜ್ ಖಾನ್, ಅಂಗಡಿ ಕೃಷ್ಣಪ್ಪ, ಮೈನುದ್ದೀನ್ ಸಾಬ್, ರಫೀಕ್ ಸಾಬ್, ಆಶ್ಪಕ್ ಸಾಬ್, ಸಿಕಂದರ್ ಸಾಬ್, ಶಬ್ಬಿರ್ ಸಾಬ್, ಬಬ್ಲೂ ಪೈಲ್ವಾನ್, ಇಲಿಯಾಸ್ ಆಹ್ಮದ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!