ಜಿಗಳಿ ಶಾಲೆಗೆ ಸ್ಮಾರ್ಟ್‌ ಕ್ಲಾಸ್‌ ಕೊಡುಗೆ

ಮಲೆಬೇನ್ನೂರು, ಜ.28- ಬೆಂಗಳೂರಿನ ಮಾರುತಿ ಮೆಡಿಕಲ್ಸ್‌ ಮಾಲೀಕರಾದ ಮಹೇಂದ್ರ ಮುಣೋತ ಅವರು ಹರಿಹರ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆ ಮಕ್ಕಳಿಗೆ 50 ಸಾವಿರ ನೋಟ್‌ ಬುಕ್‌ಗಳನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದು ಬೆಂಗಳೂರಿನ ಹೆಲ್ಪಿಂಗ್ ಗ್ರೂಪ್‌ ಚಾರಿಟೆಬಲ್‌ ಟ್ರಸ್ಟ್‌ನ ಅಧ್ಯಕ್ಷ ನರಸಿಂಹಮೂರ್ತಿ ಹೇಳಿದರು.

ಜಿಗಳಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವ ದಿನದಂದು ನೋಟ್‌ ಬುಕ್‌, ಜ್ಯಾಮಿಟ್ರಿ ಬಾಕ್ಸ್‌ ಹಾಗೂ ಲೇಖನಿ ಸಾಮಗ್ರಿ ಮತ್ತು ಪ್ರಸಿದ್ಧ ವ್ಯಕ್ತಿಗಳ ಪರಿಚಯ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಅವರು ಮಾತನಾಡಿದರು.

ಹರಿಹರ ತಾಲ್ಲೂಕು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ನಕಲಿ ಕೊಠಡಿ ನಿರ್ಮಾಣ ಮತ್ತು ಈ ತಾಲ್ಲೂಕಿನ 25 ಸರ್ಕಾರಿ ಶಾಲೆಗಳಿಗೆ ಕಂಪ್ಯೂಟರ್‌ ಮತ್ತು 5 ಶಾಲೆಗಳಿಗೆ ಧ್ವನಿವರ್ಧಕ ವಿತರಿಸಲಾಗಿದೆ. 

ಜಿಗಳಿ ಶಾಲೆಗೆ ಶಿಕ್ಷಕರ ಹಾಗೂ ಎಸ್‌ಡಿಎಂಸಿಯವರ ಕೋರಿಕೆಯಂತೆ ಸ್ಮಾರ್ಟ್‌ ಕ್ಲಾಸ್‌ ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿದ ನರಸಿಂಹಮೂರ್ತಿ ಅವರು, ಸರ್ಕಾರಿ ಶಾಲೆಗಳ ಬಗ್ಗೆ ಎಲ್ಲರೂ ನಿಗಾ ವಹಿಸುವಂತೆ ಮನವಿ ಮಾಡಿದರು.

ಹರಿಹರ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಹಾಗೂ ಧೂಳೆಹೊಳೆ ಸ.ಹಿ.ಪ್ರಾ. ಶಾಲೆ ಶಿಕ್ಷಕ ಶರಣ್‌ಕುಮಾರ್‌ ಹೆಗಡೆ ಮಾತನಾಡಿ, ಬೆಂಗಳೂರಿನ ಯೂತ್‌ ಫಾರ್‌ ಸೇವಾ ಸಂಸ್ಥೆಯವರು ಹರಿಹರ ತಾಲ್ಲೂಕಿಗೆ 250 ಜಾಮಿಟ್ರಿ ಬಾಕ್ಸ್‌ ಹಾಗೂ ಲೇಖನಿ ಸಾಮಗ್ರಿ, ಸ್ಯಾನಿಟೈಜರ್‌, ಮಾಸ್ಕ್‌ ಮತ್ತು ಕ್ರಿಬ್ಕೋ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಮಕೃಷ್ಣ ಅವರು ಪ್ರಸಿದ್ಧ ವ್ಯಕ್ತಿಗಳ 500 ಪರಿಚಯ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದರು. 

ಶಿಕ್ಷಕ ಗುಡ್ಡಪ್ಪ ಅವರು ಗಣರಾಜ್ಯೋತ್ಸವ ಕುರಿತು ಮಾತನಾಡಿದರು.

ಎಸ್‌ಡಿಎಂಸಿ ಅಧ್ಯಕ್ಷ ಎಂ.ಆರ್‌. ನಾಗರಾಜ್‌, ಶಾಲಾ ಮುಖ್ಯ ಶಿಕ್ಷಕ ಕರಿಬಸಪ್ಪ, ಪತ್ರಕರ್ತ ಪ್ರಕಾಶ್‌ ಅವರು ದಾನಿಗಳನ್ನು ಸನ್ಮಾನಿಸಿದರು. 

ಗ್ರಾ.ಪಂ. ಅಧ್ಯಕ್ಷರಾದ ಶ್ರೀಮತಿ ರೇಣುಕಾ ಪೂಜಾರ್‌ ನಾಗರಾಜ್‌, ಸಿ.ಎನ್‌. ಪರಮೇಶ್ವರಪ್ಪ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಜಿ.ಆರ್‌. ಚಂದ್ರಪ್ಪ, ಹೆಲ್ಪಿಂಗ್‌ ಗ್ರೂಪ್‌ ಟ್ರಸ್ಟ್‌ ಕಾರ್ಯದರ್ಶಿ ಮಂಜುನಾಥ್‌, ಸದಸ್ಯ ರಮೇಶ್‌, ಶಿಕ್ಷಕ ಟಿ.ಹೆಚ್‌. ಹನುಮಂತರೆಡ್ಡಿ, ಎಸ್‌ಡಿಎಂಸಿ ಉಪಾಧ್ಯಕ್ಷೆ ಸುನೀತಾ ನಾಗರಾಜ್‌, ಸದಸ್ಯರಾದ ಗಂಗಾಧರ ಚಾರಿ, ಬಿ. ಪ್ರಭಾಕರ್‌, ರತ್ನಮ್ಮ ಬಸವರಾಜ್‌, ಪ್ರಿಯಾ ಮಧು, ನೂರ್‌ಜಹಾನ್‌ ಚಮನ್‌ಸಾಹ್‌, ಕವಿತಾ ಚೌಡಪ್ಪ, ಪುಷ್ಪಾ ಮುನಿಯಪ್ಪ, ರೇಣುಕಾ ನಿಂಗಪ್ಪ ಮತ್ತು ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಶಿಕ್ಷಕ ಶ್ರೀನಿವಾಸ್‌ರೆಡ್ಡಿ ಸ್ವಾಗತಿಸಿದರು. ಶಿಕ್ಷಕ ನಾಗೇಶ್‌ ನಿರೂಪಿಸಿದರೆ, ಶಿಕ್ಷಕ ಮಲ್ಲಿಕಾರ್ಜುನ್‌ ವಂದಿಸಿದರು.

error: Content is protected !!