ಹರಿಹರದಲ್ಲಿ ಪಾದಚಾರಿಗಳ ಹರಸಾಹಸ, ಅಪಘಾತಗಳ ಅಪಾಯ
ಹರಿಹರ, ಜ.24- ನಗರದಲ್ಲಿ ವಿವಿಧ ಬ್ಯಾಂಕ್ ಮತ್ತು ವ್ಯಾಪಾರ, ವಹಿವಾಟು ನಡೆಸುವ ಅಂಗಡಿ ಮುಂದೆ ರಸ್ತೆಯಲ್ಲಿ ಬೈಕ್ ನಿಲ್ಲಿಸುವುದರಿಂದ ಪಾದಚಾರಿಗಳಿಗೆ ಸರಾಗವಾಗಿ ಓಡಾಡಲು ತೊಂದರೆಯಾಗುತ್ತಿದೆ.
ನಗರದ ಜನನಿಬಿಡ ಪ್ರದೇಶವಾದ ಮುಖ್ಯ ರಸ್ತೆ, ಹರಪನಹಳ್ಳಿ ರಸ್ತೆ, ದೇವಸ್ಥಾನ ರಸ್ತೆ, ಹಳೆ ಪಿ.ಬಿ. ರಸ್ತೆ, ಬಸ್ ನಿಲ್ದಾಣ ರಸ್ತೆ, ಹೆಚ್. ಶಿವಪ್ಪ ಸರ್ಕಲ್, ಹೈಸ್ಕೂಲ್ ಬಡಾವಣೆಯ ಮುಖ್ಯ ರಸ್ತೆ, ಟಿ.ಬಿ. ರಸ್ತೆ ಸೇರಿದಂತೆ ವಿವಿಧ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ತೊಂದರೆಗಳು ಆಗುತ್ತಿದೆ.
ನಗರದಲ್ಲಿ ಕೆನರಾ, ಎಸ್.ಬಿ.ಐ. ಕಾರ್ಪೊರೇಷನ್, ಉಜ್ಜೀವನ್, ಆಕ್ಸಿಸ್, ವಿಜಯ ಬ್ಯಾಂಕ್ ಸೇರಿದಂತೆ ಅನೇಕ ಸಹಕಾರಿ ಮತ್ತು ಬ್ಯಾಂಕ್ ಕಟ್ಟಡಗಳು ಹಾಗೂ ವಿವಿಧ ಮಹಲ್, ಹೋಟೆಲ್, ಟಾಕೀಸ್ ಮತ್ತು ಪ್ರಸಿದ್ಧ ಎಸ್.ಜೆ.ವಿ.ಪಿ. ಕಾಲೇಜು, ಎಂ.ಆರ್.ಬಿ. ಪ್ರೌಢಶಾಲೆ, ಮರಿಯಾ ನಿವಾಸ್ ಶಾಲೆ, ತಹಶೀಲ್ದಾರರ ಕಚೇರಿ, ಹಳೇ ಪಿ.ಬಿ ರಸ್ತೆಯಲ್ಲಿ ಇರುವುದರಿಂದ ಇಲ್ಲಿಗೆ ಆಗಮಿಸುವ ಶಾಲೆ ಪೋಷಕರು ಮತ್ತು ಗ್ರಾಹಕರು ಹಾಗೂ ಇತರೆ ಕೆಲಸಕ್ಕೆ ಆಗಮಿಸುವವರು ತಮ್ಮ ವಾಹನಗಳನ್ನು ಗಂಟೆಗಳ ಕಾಲ ರಸ್ತೆಯಲ್ಲಿ ನಿಲ್ಲಿಸಿ ಹೋಗುತ್ತಾರೆ.
ನಗರದ ಪ್ರಮುಖ ರಸ್ತೆಗಳಲ್ಲಿ ಸಾರ್ವಜನಿಕರು ಎಲ್ಲೆಂದರಲ್ಲಿ ಬೈಕ್ ನಿಲ್ಲಿಸುವುದರಿಂದ ವೃದ್ಧರಿಗೆ, ಶಾಲೆ, ಕಾಲೇಜು ಮಕ್ಕಳಿಗೆ ಸುಗಮ ಸಂಚಾರಕ್ಕಾಗುವ ತೊಂದರೆಗಳನ್ನು ದಿನನಿತ್ಯವು ಕಾಣುತ್ತಿದ್ದೇವೆ. ಅಧಿಕಾರಿಗಳು ಸರಿಯಾದ ರೀತಿಯಲ್ಲಿ ತಮ್ಮ ಕರ್ತವ್ಯ ಪೂರೈಸಲು ಮುಂದಾದರೆ, ಜನರೂ ಸಹ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸುವುದಿಲ್ಲ.
– ಕುಮಾರ್ ಸ್ವಾಮಿ, ನಿವೃತ್ತ ನೌಕರರು, ಹರಿಹರ.
ಜನಪ್ರತಿನಿಧಿಗಳ ಮಧ್ಯಪ್ರವೇಶ
ನಗರದಲ್ಲಿನ ಅನೇಕ ವಾಣಿಜ್ಯ, ವ್ಯಾಪಾರ ವಹಿವಾಟು ಮಾಡುವ ಸ್ಥಳದಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸದಂತೆ ವಾಹನ ಸವಾರರ ಗಮನಕ್ಕೆ ತರಲಾಗಿದೆ. ಆದರೆ ಮಾರುಕಟ್ಟೆಯಲ್ಲಿ ಜನದಟ್ಟಣೆಯ ಪ್ರಮಾಣ ಹೆಚ್ಚಾದಾಗ ಸಾರ್ವಜನಿಕರು ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಿ ಹೋಗುತ್ತಾರೆ. ಇಂತಹ ವಾಹನ ಚಾಲಕರಿಗೆ ದಂಡ ಹಾಕುವುದಕ್ಕೆ ಮುಂದಾದರೆ ಸಾರ್ವಜನಿಕರು, ಸ್ಥಳೀಯ ಜನ ಪ್ರತಿನಿಧಿಗಳ ಹತ್ತಿರ ಹೋಗಿ ತಮ್ಮ ವಾಹನಗಳನ್ನು ಬಿಡಿಸಿಕೊಂಡು ಹೋಗುವುದಕ್ಕೆ ಶಿಫಾರಸ್ಸು ಮಾಡಿಸಲು ಮುಂದಾಗುತ್ತಾರೆ. ಇದರಿಂದಾಗಿ ಅನಿವಾರ್ಯವಾಗಿ ಅವರ ಮಾತಿಗೆ ಕಟ್ಟುಬಿದ್ದು ವಾಹನಗಳನ್ನು ಬಿಡುವ ಪ್ರಸಂಗಗಳು ಬಹಳ ನಡೆಯುತ್ತವೆ. ಸಣ್ಣ ಪುಟ್ಟ ವಿಚಾರಕ್ಕೆ ರಾಜಕೀಯ ವ್ಯಕ್ತಿಗಳು ಮಧ್ಯ ಪ್ರವೇಶ ಮಾಡದೇ ಇದ್ದರೆ, ಎಲ್ಲೆಂದರಲ್ಲಿ ವಾಹನ ನಿಲ್ಲಿಸುವುದನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಹೆಸರು ಹೇಳದ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇದರಿಂದಾಗಿ ಪಾದಚಾರಿಗಳಿಗೆ ಮತ್ತು ಬಸ್, ಲಾರಿ, ಟ್ಯಾಕ್ಸಿ ಮತ್ತು ಇತರೆ ವಾಹನಗಳು ರಸ್ತೆಯಲ್ಲಿ ಓಡಾಡುವ ಸಮಯದಲ್ಲಿ ಹರ ಸಾಹಸ ಪಡುತ್ತಾರೆ. ಸ್ವಲ್ಪ ಯಾಮಾರಿದರೆ ಅಪಘಾತ ಸಂಭವಿಸಿ, ಸಾವು-ನೋವುಗಳು ಆಗುವ ಸಂಭವ ಹೆಚ್ಚಿದೆ.
ಆದರೂ, ಸಂಬಂಧಿಸಿದ ಅಧಿಕಾರಿಗಳು ನೋಡಿಯೂ ನೋಡದ ರೀತಿಯಲ್ಲಿ ವರ್ತಿಸುತ್ತಿ ದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ನಗರಸಭೆ, ಪೊಲೀಸ್ ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳು ರಸ್ತೆಯಲ್ಲಿ ನಿಲ್ಲಿಸುವ ವಾಹನ ಸವಾರರ ಮೇಲೆ ಕ್ರಮ ಕೈಗೊಂಡು ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
– ಎಂ. ಚಿದಾನಂದ ಕಂಚಿಕೇರಿ,
[email protected]