ಅಯ್ಯಪ್ಪ ಸ್ವಾಮಿ ಸರಳ ರಥೋತ್ಸವ

ಹರಪನಹಳ್ಳಿ, ಜ.18- ರಾಜ್ಯದಲ್ಲಿ ಕೊವೀಡ್ ರೂಪಾಂತರಿ ಓಮಿಕ್ರೋನ್ ವೈರಸ್ ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದ ಮೇಗಳಪೇಟೆಯ ಸಮೀಪದಲ್ಲಿರುವ ಭಾರತಿ ನಗರದ ಅಯ್ಯಪ್ಪಸ್ವಾಮಿ ಸನ್ನಿಧಿಯಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಈ ಬಾರಿ ಮೊದಲ ವರ್ಷದ ರಥೋತ್ಸವ, ದೀಪಾರಾಧನೆ, ಮಹಾ ಮಂಗಳಾರತಿ ಹಾಗೂ ಧರ್ಮಸಭೆ ಸರಳವಾಗಿ ಜರುಗಿತು.

ಪಟ್ಟಣದ ತೆಗ್ಗಿನಮಠ ಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ, ಹಡಗಲಿ ಗವಿಸಿದ್ದೇಶ್ವರ ಶಾಖಾಮಠದ ಡಾ.ಹಿರಿಶಾಂತ ವೀರಸ್ವಾಮೀಜಿ, ನೀಲಗುಂದ ಗುಡ್ಡದ ವಿರಕ್ತ ಮಠದ ಶ್ರೀ ಚನ್ನಬಸವ ಶಿವಯೋಗಿ ಸ್ವಾಮೀಜಿ, ಹೊಳಗುಂದಿ ಸಿದ್ದೇಶ್ವರ ಸಂಸ್ಥಾನಮಠದ ಶ್ರೀ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಇಟ್ಟಿಗಿ ಹಿರೇಮಠದ ಶ್ರೀ ಗುರುಶಾಂತವೀರ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. 

ನಿವೃತ್ತ ಶಿಕ್ಷಕಿ, ದಾನ ಚಿಂತಾಮಣಿ, ಮದರ್ ತೆರೆಸಾ ಪ್ರಶಸ್ತಿ ಪುರಸ್ಕೃತರಾದ ಹೆಚ್.ಎಂ. ಲಲಿತಮ್ಮ ಸೋಮಲಿಂಗಯ್ಯ ಅವರು ಅಂದಾಜು ಒಂದು ಲಕ್ಷ ರೂ. ಮೌಲ್ಯದಲ್ಲಿ ಅಯ್ಯಪ್ಪ ಸ್ವಾಮಿಗೆ ಲೋಹದಲ್ಲಿ ತಯಾರಿಸಿದ ರಥವನ್ನು ದಾನವಾಗಿ ನೀಡಿದ್ದಾರೆ.

ಈ ಬಾರಿಯ ಅಯ್ಯಪ್ಪಸ್ವಾಮಿ ಪ್ರಶಸ್ತಿಯನ್ನು ಕಿರಾಣಿ ವರ್ತಕರು ಹಾಗೂ ಸಂಸ್ಕಾರ ಭಾರತಿ ಅಧ್ಯಕ್ಷ ಮಹಾವೀರ ಭಂಡಾರಿ ಮತ್ತು ಸುಂಕದಕಲ್ಲು ಕೊಟ್ರೇಶ್ ಅವರಿಗೆ ನೀಡಿ ಗೌರವಿಸಲಾಯಿತು. 

ಜಿಲ್ಲಾ ಬಿಜೆಪಿ ಎಸ್ಟಿ ಮೋರ್ಚಾ ಕಾರ್ಯದರ್ಶಿ ಆರ್. ಲೋಕೇಶ್ ಅವರು ಇಪ್ಪತ್ತೆರಡು ಸಾವಿರದ ಒಂದುನೂರಾ ಒಂದು ರೂಪಾಯಿಗೆ ಅಯ್ಯಪ್ಪ ಸ್ವಾಮಿಯ ರುದ್ರಾಕ್ಷಿ ಮಾಲೆಯನ್ನು ಮತ್ತು ಎಪಿಎಂಸಿ ವರ್ತಕ ಮಟ್ಟೇರ ಹನುಮಂತಪ್ಪ ಅವರು ಆರು ಸಾವಿರದ ಐದುನೂರಾ ಒಂದು ರೂಪಾಯಿಗೆ ಪಟಾಕ್ಷಿಯನ್ನು ತಮ್ಮದಾಗಿಸಿಕೊಂಡರು.  

ಪುರಸಭೆ ಅಧ್ಯಕ್ಷ ಮಂಜುನಾಥ ಇಜಂತ್ಕರ್, ಪುರಸಭೆ ಮಾಜಿ ಸದಸ್ಯ ಬಂಗ್ಲಿ ಸೋಮಶೇಖರ್, ಬೆಸ್ಕಾಂ ನಿವೃತ್ತ ಇಂಜಿನಿಯರ್ ಎಸ್.ಭೀಮಪ್ಪ, ತರಕಾರಿ ಈರಣ್ಣ, ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಉಪಾಧ್ಯಕ್ಷ ಕೆ.ಆರ್.ಗಿರೀಶ್, ಖಜಾಂಚಿ ಕೌಟಿ ಮಂಜುನಾಥ, ಆಟೋ ಕೌಟಿ ಮಂಜುನಾಥ, ಶಿಕ್ಷಕ ರಾಜಶೇಖರ್, ಪ್ರವೀಣ, ಮೃತ್ಯುಂಜಯ, ಮಟ್ಟೇರ ಪ್ರಕಾಶ್, ಸತೀಶ್, ಹುಚ್ಚಪ್ಪ, ಕೊಟ್ರಗೌಡ, ಕೊಟ್ಗಿ ಈಶಣ್ಣ, ಸುರೇಂದ್ರ ಮಂಚಾಲಿ, ಸಿದ್ದಯ್ಯ ಕೆಂಬಾವಿಮಠ, ವೀರಾಗಾಸೆ ಕಲಾವಿದ ಜಿ.ಮಲ್ಲಿಕಾರ್ಜುನ, ಸುಂಕದಕಲ್ಲು ಉಮೇಶ್ ಸೇರಿದಂತೆ, ಭಕ್ತರು ಉಪಸ್ಥಿತರಿದ್ದರು.

error: Content is protected !!