ಹಳ್ಳಿಗಳಲ್ಲಿ ಮೌಢ್ಯ ವಿನಾಶದ ಕ್ರಾಂತಿಯಾದಾಗ ಪ್ರಗತಿ ಸಾಧ್ಯ

ದೇವರ ಬಗ್ಗೆ ಗೊತ್ತಿಲ್ಲ ಎಂದವರು ಬುದ್ಧರಾದರೆ ಸ್ವರ್ಗ, ನರಕ, ಗುಡಿ – ಗುಂಡಾರ ನಿರಾಕರಿಸಿ ಕಾಯಕವೇ ಕೈಲಾಸ ಎಂದವರು ಬಸವಣ್ಣ. ಇವರಿ ಬ್ಬರ ಚಿಂತನೆಗಳನ್ನು ಸಾಮಾಜಿಕ ರಿಸಿದವರು ಡಾ. ಅಂಬೇಡ್ಕರ್.

– ಡಾ. ಎ.ಬಿ. ರಾಮಚಂದ್ರಪ್ಪ

ಮಲೇಬೆನ್ನೂರು, ಜ.6- ಮೌಢ್ಯವನ್ನು ಬಹಳವಾಗಿ ವಿರೋಧಿಸಿದ ಬುದ್ಧ, ಬಸವ, ಅಂಬೇಡ್ಕರ್ ಅವರ ಹೆಸರನ್ನು ಸ್ಮಶಾನಕ್ಕೆ ನಾಮಕರಣ ಮಾಡಿರುವುದು ಶ್ಲಾಘನೀಯ ಎಂದು ನಿವೃತ್ತ ಪ್ರಾಧ್ಯಾಪಕ ಡಾ. ಎಂ.ಬಿ.ರಾಮಚಂದ್ರಪ್ಪ ಹೇಳಿದರು.

ಉಕ್ಕಡಗಾತ್ರಿ ಗ್ರಾಮದಲ್ಲಿ ಇಂದು ಹಮ್ಮಿಕೊಂಡಿದ್ದ ಸಾರ್ವಜನಿಕ ರುದ್ರ ಭೂಮಿಗೆ ಬುದ್ಧ, ಬಸವ, ಅಂಬೇಡ್ಕರ್ ಮುಕ್ತಿಧಾಮ ಎಂಬ ನಾಮಫಲಕ ಅನಾವ ರಣ ಮತ್ತು ಸಸಿ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಸಮಾಜದಲ್ಲಿ ಅನೇಕರು ಮೌಢ್ಯಕ್ಕೆ ಒಳಗಾಗಿ ಮನೆ – ಸಂಪತ್ತು, ಊರು – ಕೇರಿ ಕಳೆದುಕೊಂಡಿದ್ದಾರೆ. ಅಂತಹ ಮೌಢ್ಯ ವಿನಾಶದ ಕ್ರಾಂತಿ ಪ್ರತಿ ಹಳ್ಳಿಯಲ್ಲೂ ಆಗಬೇಕು. ರಾಷ್ಟ್ರಕವಿ ಕುವೆಂಪು ಅವರು ಹೇಳಿದಂತೆ ನಮ್ಮ ಹಣೆ ಬರಹವನ್ನು ನಾವೇ ಬರೆದುಕೊಳ್ಳಬೇಕೆಂದ ರಾಮಚಂದ್ರಪ್ಪ ಅವರು, ದೇವರ ಹೆಸರಿನಲ್ಲಿ ನಡೆಯುತ್ತಿರುವ ಬೆತ್ತಲು ಸೇವೆ, ವೇಶ್ಯಾವಾಟಿಕೆ ವಿರುದ್ಧ ಜನ ಜಾಗೃತಿರಾಗಬೇಕೆಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಹೈಕೋರ್ಟಿನ ವಕೀಲ ಅನಂತ್‌ನಾಯ್ಕ, ಜಾತಿ, ಧರ್ಮಗಳ ಸಂಕೋಲೆಗಳನ್ನು ಮೀರಿ ತತ್ವ – ನೀತಿಗಳನ್ನು ತುಂಬಿದ ಬುದ್ಧ – ಬಸವ – ಅಂಬೇಡ್ಕರ್ ಅವರು ಜೀವ ಪ್ರೀತಿ, ಮನುಷ್ಯ ಪ್ರೀತಿಯನ್ನು ಕಲಿಸಿಕೊಟ್ಟಿದ್ದಾರೆ. ಯಾವುದು ಮೌಢ್ಯ, ಯಾವುದು ಅಧ್ಯಾತ್ಮ ಎಂಬುದು ಗೊತ್ತಿಲ್ಲದೆ, ಅನೇಕ ಜನ ಮೋಸಕ್ಕೆ ಒಳಗಾಗುತ್ತಿದ್ದಾರೆ. ಮೂಢನಂಬಿಕೆ ಮೀರಿದ ವಿಚಾರ ಧಾರೆಗಳನ್ನು ಸತೀಶ್ ಜಾರಕಿಹೊಳಿ ಅವರು ಮಾನವ ಬಂಧುತ್ವ ವೇದಿಕೆ ಮೂಲಕ ಸಮಾಜಕ್ಕೆ ತಿಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅದರ ಪರಿಣಾಮದಿಂದಾಗಿ ಉಕ್ಕಡಗಾತ್ರಿಯಲ್ಲಿ ಸ್ಮಶಾನಕ್ಕೆ ಬುದ್ಧ – ಬಸವ – ಅಂಬೇಡ್ಕರ್ – ಮುಕ್ತಿಧಾಮ ಸ್ಥಾಪನೆ ಆಗಿದೆ ಎಂದು ಅನಂತ್‌ನಾಯ್ಕ ಮೆಚ್ಚುಗೆ ವ್ಯಕ್ತಪಡಿಸಿದರು.

ಶ್ರೀ ಗುರು ಕರಿಬಸವೇಶ್ವರ ಗದ್ದುಗೆ ಟ್ರಸ್ಟ್ ಕಮಿಟಿ ಕಾರ್ಯದರ್ಶಿ ಎಸ್.ಸುರೇಶ್ ಮಾತನಾಡಿ, ಗ್ರಾಮದಲ್ಲಿ ಇದೊಂದು ಉತ್ತಮ ಕಾರ್ಯಕ್ರಮವಾಗಿದ್ದು, ಜನರು ಮೌಢ್ಯದಿಂದ ಹೊರಬರಲು ಸಹಕಾರಿಯಾಗಲಿದೆ ಎಂದರು.

ಎಪಿಎಂಸಿ ಅಧ್ಯಕ್ಷ ಜಿ.ಮಂಜುನಾಥ್ ಪಟೇಲ್ ಮಾತನಾಡಿ, ಭೂಮಿ ಇರುವವರೆಗೂ ಬುದ್ಧ, ಬಸವ, ಅಂಬೇಡ್ಕರ್ ಅವರ ವಿಚಾರ ಧಾರೆಗಳು ಜೀವಂತವಾಗಿರುತ್ತವೆ ಎಂದರು.

ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ವಾಸನದ ಎಸ್.ಕೆ.ಬಸವರಾಜ್, ವೈದ್ಯ ಜಿಗಳಿಯ ಡಾ. ಎನ್.ನಾಗರಾಜ್, ಗ್ರಾ.ಪಂ. ಕಾರ್ಯದರ್ಶಿ ಮಹೇಶ್ವರಪ್ಪ, ಮಲೇಬೆನ್ನೂರು ಪುರಸಭೆ ಸದಸ್ಯ ಸಾಬೀರ್ ಅಲಿ ಮಾತನಾಡಿದರು.

ಗ್ರಾ.ಪಂ. ಅಧ್ಯಕ್ಷರಾದ ಶ್ರೀಮತಿ ಕರಿಬಸಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಉಪಾಧ್ಯಕ್ಷರಾದ ಶ್ರೀಮತಿ ದೇವೇಂದ್ರಪ್ಪ, ಸದಸ್ಯರಾದ ಶಿವಪೂಜಿ ಭರಮಗೌಡ, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಸುವರ್ಣಮ್ಮ, ಮರಿಯಮ್ಮ, ಚಂದ್ರಮ್ಮ, ಗೋವಿನಹಾಳ್ ಚಂದ್ರಪ್ಪ, ತಾಲ್ಲೂಕು ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಕುಂಬಳೂರು ವಾಸು, ಹರಿಹರದ ಜನಪರ ಹೋರಾಟಗಾರ ಹರೀಶ್ ನೋಟದ್, ಗ್ರಾಮದ ಪದ್ಮಪ್ಪ ಪೂಜಾರ್, ಗದಿಗೆಪ್ಪ, ಎ.ಕೆ.ಮಾಯಪ್ಪ, ನಾಗಪ್ಪ ದೋಣಿ, ಭರಮಪ್ಪ ಕಟಿಗೇರ ಮತ್ತಿತರರು ಈ ವೇಳೆ ಹಾಜರಿದ್ದರು.

ಮಾನವ ಬಂಧುತ್ವ ವೇದಿಕೆಯ ಮಂಜು ದೊಡ್ಮನಿ ಸ್ವಾಗತಿಸಿದರು. ಜನತಾವಾಣಿ ವರದಿಗಾರ ಜಿಗಳಿ ಪ್ರಕಾಶ್ ವಂದಿಸಿದರು.

error: Content is protected !!