ತ್ವರಿತಗತಿಯಲ್ಲಿ ರಸ್ತೆ ಅಗಲೀಕರಣದ ಕಾಮಗಾರಿ ಕೈಗೊಳ್ಳದಿದ್ದರೆ ಕ್ರಮ

ನ್ಯಾಮತಿ, ಮೇ 5-  ಪಟ್ಟಣದ ಕುಂಬಾರ ಬೀದಿ ರಸ್ತೆ ಹಾಗೂ ಆಂಜನೇಯ ದೇವಸ್ಥಾನದ ರಸ್ತೆ ಅಗಲೀಕರಣ ಕಾಮಗಾರಿಗಳ ವೇಗವನ್ನು ಹೆಚ್ಚಿಸದೇ ಇದ್ದರೆ, ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಿಎಂ ರಾಜ ಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾ ಚಾರ್ಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. 

ರಸ್ತೆ ಅಗಲೀಕರಣ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದ ಕುಂಬಾರ ಬೀದಿಗೆ ಇಂದು ಭೇಟಿ ನೀಡಿದ್ದ ಅವರು, ಕಾಮಗಾರಿ ಪರಿಶೀಲನೆ ನಡೆಸಿ ಮಾತನಾಡಿದರು.

ಜನರು ನನ್ನ ಮಾತಿಗೆ ಬೆಲೆ ಕೊಟ್ಟು ರಸ್ತೆ ಅಗಲೀಕರಣ ಮಾಡಲು ಅವರೇ ಮನೆಗಳನ್ನು ತೆರವು ಮಾಡಿಕೊಟ್ಟಿದ್ದಾರೆ. ಆದರೆ ಗುತ್ತಿಗೆದಾರರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದು, ನಾನು ಜನರಿಗೆ ಹೇಗೆ ಮುಖ ತೋರಿಸಲಿ ಎಂದು ಬೇಸರ ವ್ಯಕ್ತ ಪಡಿಸಿದರು.

ಇದೀಗ ಮಳೆಗಾಲ ಆರಂಭವಾಗಿದ್ದು ಹಬ್ಬ, ಹರಿದಿನಗಳು ಬರುತ್ತಿವೆ. ಜನರು ಹಬ್ಬವನ್ನು ಹೇಗೆ ಮಾಡುತ್ತಾರೆ ಎಂದ ರೇಣುಕಾಚಾರ್ಯ ಅವರು, ಅಧಿಕಾರಿಗಳ ನಿರ್ಲಕ್ಷ್ಯದಿಂದ ನಾನು ಜನರ ಬಳಿ ಚೀಮಾರಿ ಹಾಕಿಸಿಕೊಳ್ಳಬೇಕಾ ಎಂದು ಆಕ್ರೋಶ ಹೊರ ಹಾಕಿದರು. 

ವಾಲ್ಮೀಕಿ ರಸ್ತೆ ಹಾಗೂ ವೀರಭದ್ರೇಶ್ವರ ದೇವಸ್ಥಾನ ರಸ್ತೆ ಅಗಲೀಕರಣ ಕಾಮಗಾರಿ ಪೆಂಡಿಂಗ್ ಇದೇ ಎಂದ ರೇಣುಕಾಚಾರ್ಯ, ಕಾಮಗಾರಿಯನ್ನು ನಿಧಾನಗತಿಯಿಂದ ಮಾಡುತ್ತಿದ್ದು, ನಾನು ಜನರಿಗೆ ಹೇಗೆ ಉತ್ತರ ನೀಡಲಿ ಎಂದು ಪ್ರಶ್ನಿಸಿದರು.

25 ಕೋಟಿ ರೂ. ವೆಚ್ಚದಲ್ಲಿ ನ್ಯಾಮತಿ ಪಟ್ಟಣದ ಕುಂಬಾರ ಬೀದಿ, ಆಂಜನೇಯ ದೇವಸ್ಥಾನದ ರಸ್ತೆ, ವಾಲ್ಮೀಕಿ ರಸ್ತೆ ಹಾಗೂ ವೀರಭದ್ರೇಶ್ವರ ದೇವಸ್ಥಾನದ ರಸ್ತೆ ಅಗಲೀಕರಣ ಕಾಮಗಾರಿಯ ಜೊತೆಗೆ ಹೊನ್ನಾಳಿ -ನ್ಯಾಮತಿ ಅವಳಿ ತಾಲ್ಲೂಕಿನ ಅಲಂಕಾರಿಕ ವಿದ್ಯುತ್ ದೀಪಗಳ ಅಳವಡಿಕೆ ಕಾಮಗಾರಿ ಮಾಡಲಾಗುತ್ತಿದೆ.

ನಾನು ಅನುದಾನ ತಂದು ಕೆಲಸ ಹಾಕಿಸಿದರೆ ಸರಿಯಾಗಿ ಕಾಮಗಾರಿಯಾಗುತ್ತಿಲ್ಲಾ ಅಂದರೇ ಏನರ್ಥ. ಕೂಡಲೇ ಗುತ್ತಿಗೆದಾರ ನಿಗದಿತ ಸಮಯದ ಒಳಗಾಗಿ ಗುಣಮಟ್ಟದ ಕಾಮಗಾರಿ ಮುಗಿಸಿ ಜನರಿಗೆ ಅನುಕೂಲ ಮಾಡಿಕೊಂಡುವಂತೆ ರೇಣುಕಾಚಾರ್ಯ ಸೂಚನೆ ನೀಡಿದರು. 

ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಸೂಚನೆ : ಸಾರ್ವಜನಿಕರಿಂದ ಸಾಲು ಸಾಲು ದೂರು ಬಂದ ಹಿನ್ನೆಲೆಯಲ್ಲಿ ನ್ಯಾಮತಿ ಪಟ್ಟಣದ ಕುಂಬಾರ್ ಬೀದಿಗೆ ಭೇಟಿ ನೀಡಿದ ರೇಣುಕಾಚಾರ್ಯ ಅಧಿಕಾರಿಗಳಿಗೆ ಪೋನ್ ಮಾಡಿ ಗುತ್ತಿಗೆದಾರ ಹಾಗೂ ಸಂಬಂಧ ಪಟ್ಟ ಇಲಾಖೆಯ ಎಂಡಿ, ಸಿಇಒ ಶನಿವಾರ ಬೆಳಗ್ಗೆ 10.30 ಕ್ಕೆ ಸ್ಥಳಕ್ಕೆ ಬರುವಂತೆ ಸೂಚನೆ ನೀಡಿದರು. 

ಒಂದು ವೇಳೆ ಗುತ್ತಿಗೆದಾರ ಸ್ಥಳಕ್ಕೆ ಬಾರದೇ ಇದ್ದರೆ ಆತನನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ರೇಣುಕಾಚಾರ್ಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ರೇಣುಕಾ, ತಾ.ಪಂ. ಮಾಜಿ ಅಧ್ಯಕ್ಷ ರವಿಕು ಮಾರ್, ಮುಖಂಡರಾದ ಸಿ.ಕೆ. ರವಿಕುಮಾರ್ ಸೇರಿದಂತೆ ಕುಂಬಾರ್ ಬೀದಿಯ ನಿವಾಸಿಗಳು ಹಾಗೂ ಅಧಿಕಾರಿಗಳಿದ್ದರು.

error: Content is protected !!