ಬ್ಯಾಡಗಿ, ಜ.14- ಶ್ರೀ ಗುರು ಸಿದ್ಧರಾಮೇಶ್ವರರ ಮತ್ತು ಶ್ರೀ ಮರುಳಸಿದ್ಧರ ಕಾಲದ ನಂತರವೂ ಈ ಎರಡೂ ಸಮಾಜಗಳ ಅವಿನಾಭಾವ ಸಂಬಂಧ ಗಟ್ಟಿಯಾಗಿ ಉಳಿದುಕೊಂಡು ಬಂದಿದೆ ಎಂದು ಸಿರಿಗೆರೆ ಬೃಹನ್ಮಠದ ತರಳಬಾಳು ಜಗದ್ಗುರು ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಂತಸ ವ್ಯಕ್ತಪಡಿಸಿದರು.
ಅವರು, ಭಾನುವಾರ ಬ್ಯಾಡಗಿ ತಾಲ್ಲೂಕು ಚಿಕ್ಕಬಾಸೂರಿ ನಲ್ಲಿ ನೊಳಂಬ ಲಿಂಗಾಯತ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಗುರು ಸಿದ್ಧರಾಮೇಶ್ವರರ 851ನೇ ಜಯಂತಿ ಮಹೋತ್ಸವದ ಉದ್ಘಾಟನಾ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಮರುಳಸಿದ್ಧರು ರಚಿಸಿದ 68 ವಚನಗಳು ಕಳೆದು ಹೋಗಿ 1 ವಚನ ಮಾತ್ರ ಉಳಿದಿತ್ತು. ಆದರೆ, ನಮ್ಮ ಈ ಎರಡು ಸಮಾಜಗಳ ಸಂಬಂಧ ಕಳೆದು ಹೋಗದೆ ಉಳಿದಿದ್ದು, ನಾವು-ನೀವು ಸಂಘಟಿತರಾಗಿ ಹೋರಾಟ ಮಾಡಿದ್ದರಿಂದ ಈ ಮಟ್ಟಕ್ಕೆ ಬೆಳೆದು ಬಂದಿದ್ದೇವೆ. ಶ್ರೀ ಗುರು ಸಿದ್ಧರಾಮೇಶ್ವರರ ಜಯಂತಿಯನ್ನು ಪ್ರತಿವರ್ಷ ಆಚರಿಸುವಂತೆ ಹೇಳಿ ನೆರವು ನೀಡಿದವರು ಸಿರಿಗೆರೆ ಮಠದ ಶ್ರೀ ಶಿವಕುಮಾರ ಶ್ರೀಗಳ ಎಂಬುದನ್ನು ಹೇಳಲು ಸಂತೋಷವಾಗುತ್ತದೆ ಎಂದರು.
1915ರಲ್ಲಿ ಬಳ್ಳಾರಿಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಅಧಿವೇಶನ ಸೊಲ್ಲಾಪುರದ ವಾರದ ಮಲ್ಲಪ್ಪನವರ ಅಧ್ಯಕ್ಷತೆಯಲ್ಲಿ ನಡೆದಾಗ ತೆರೆಮರೆಯಲ್ಲಿ ತಂತ್ರಗಾರಿಕೆ ಮಾಡಿ, ವೀರಶೈವ ಸಮಾಜವನ್ನು 4 ವರ್ಣಗಳಿಂದ ಗುರುತಿಸಿ, ವಿಭಜಿಸುವ ಸಂಚು ರೂಪಿಸಲಾಗಿತ್ತು. ಜಂಗಮರನ್ನು ಬ್ರಾಹ್ಮಣರೆಂದು, ವ್ಯಾಪಾರಿಗಳನ್ನು ವೈಶ್ಯೆಯರೆಂದು, ದೇಸಾಯಿ – ದೇಶಪಾಂಡೆಯರನ್ನು ಕ್ಷತ್ರಿಯರೆಂದು ಮತ್ತು ಸಾದರು – ನೊಳಂಬರನ್ನು ಶೂದ್ರರೆಂದು ನಿರ್ಣಯ ಪಾಸ್ ಮಾಡಲು ಹೊರಟಿದ್ದರು. ಇದನ್ನು ತಿಳಿದ ಮೈಸೂರು ಬಸವಯ್ಯ ಅವರು ವಿರೋಧಿಸಿ, ಪತ್ರವನ್ನು ಹರಿದು ಹಾಕಿ ವಿರೋಧ ವ್ಯಕ್ತಪಡಿಸು ತ್ತಾರೆ. ಆಗ ಹಾನಗಲ್ ಶಿವಯೋಗಿಗಳೂ ಆ ಗೊತ್ತುವಳಿಯನ್ನು ನಿರಾಕರಿಸಿದರು. ನಂತರ ಈ ಎರಡೂ ಸಮಾಜಗಳನ್ನು ದುರ್ಬಲರೆಂದು ಕಾಣುತ್ತಿದ್ದರು. ಅದನ್ನು ಮೆಟ್ಟಿನಿಂತು ನಾವು ತೆಲೆ ಎತ್ತಿ ಬಾಳುವಂತೆ ಬೆಳೆದಿದ್ದೇವೆ. ನಿಮ್ಮನ್ನು ಎದುರಿಸುವ ತಾಕತ್ತು ಇಲ್ಲಿ ಯಾರಿಗೂ ಇಲ್ಲ ಎಂದಾಗ ಸಮಾರಂಭದಲ್ಲಿ ಜೋರಾಗಿ ಚಪ್ಪಾಳೆ ಕೇಳಿ ಬಂದವು.
ಈ ಭಾಗದಲ್ಲಿ ಈ ಹಿಂದೆ ಶ್ರೀ ಗುರುಸಿದ್ಧರಾಮೇಶ್ವರರು ಕಟ್ಟಿಸಿದ ಕೆರೆ – ಕಟ್ಟೆಗಳನ್ನು ಅಭಿವೃದ್ಧಿ ಪಡಿಸಿ, ಏತ ನೀರಾವರಿ ಯೋಜನೆಯ ಮೂಲಕ ನೀರು ಹರಿಸಿದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಮತ್ತು ಜೆ.ಸಿ.ಮಾಧುಸ್ವಾಮಿ ಅವರೂ ಈ ವೇದಿಕೆಯಲ್ಲಿದ್ದು, ರೈತರ ಪರವಾಗಿ ಅವರನ್ನು ಅಭಿನಂದಿಸುತ್ತೇವೆ.
ಅಷ್ಟೇ ಅಲ್ಲ, ದಾವಣಗೆರೆ, ಜಗಳೂರು ಮತ್ತು ಭರಮಸಾಗರ ಕೆರೆಗಳಿಗೆ ನೀರು ಹರಿಸಲು ಏತ ನೀರಾವರಿ ಯೋಜನೆಗೆ 1200 ಕೋಟಿ ರೂ. ಅನುದಾನ ಮತ್ತು ಹಳೇಬೀದಿನಲ್ಲಿ ನಡೆದ ತರಳಬಾಳು ಹುಣ್ಣಿಮೆಯಲ್ಲಿ ಕೊಟ್ಟ ಮಾತಿನಂತೆ ರಣಘಟ್ಟ ಯೋಜನೆ ಮೂಲಕ ಯಗಚಿ ಜಲಾಶಯದಿಂದ ಹಳೇಬೀಡು ಕೆರೆಗಳಿಗೆ ನೀರು ಹರಿಸಲು 145 ಕೋಟಿ ಅನುದಾನ ನೀಡಿದ ಯಡಿಯೂರಪ್ಪ ಅವರು, ಆಧುನಿಕ ಸಿದ್ಧರಾಮರಾಗಿದ್ದರೆಂದು ಶ್ರೀಗಳು ಹೇಳಿದರು.
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಮತ್ತು ಜೆ.ಸಿ.ಮಾಧುಸ್ವಾಮಿ ಕಾನೂನು ಸಚಿವರಾಗಿದ್ದಾಗ ತಾಂತ್ರಿಕ ಸಮಸ್ಯೆಯಿಂದ ನೆನೆಗುದಿಗೆ ಬಿದ್ದಿದ್ದ 362 ಪ್ರತಿಭಾವಂತ ವಿದ್ಯಾರ್ಥಿಗಳ ಕೆಎಎಸ್ ಪರೀಕ್ಷೆಯ ಫಲಿತಾಂಶವನ್ನು ಸರಿಪಡಿಸಿದ್ದರಿಂದ ಅವರೆಲ್ಲರೂ ಇಂದು ಉನ್ನತ ಹುದ್ದೆಯಲಿದ್ದಾರೆ ಎಂದು ಸಿರಿಗೆರೆ ಶ್ರೀಗಳು ಸ್ಮರಿಸಿದರು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಶ್ರೀ ಗುರು ಸಿದ್ಧರಾಮೇಶ್ವರರು ಚಿಕ್ಕಬಾಸೂರಿಗೆ ಆಗಮಿಸಿ, ಇಲ್ಲಿನ ಪಾಳೇಗಾರರ ಸಹಕಾರ ಪಡೆದು, ಕೆರೆ – ಕಟ್ಟೆ ನಿರ್ಮಿಸಿದ್ದರು. ಅದಕ್ಕಾಗಿ ಇಲ್ಲಿ ಸಿದ್ಧರಾಮೇಶ್ವರರ ದೇವಸ್ಥಾನವನ್ನು ಕಟ್ಟಿಸಲಾಗಿದೆ. ಅಲ್ಲದೇ, ಅವರು ಕಟ್ಟಿಸಿದ ಕೆರೆಗೆ ಏತ ನೀರಾವರಿ ಯೋಜನೆ ಮೂಲಕ ನೀರು ಹರಿಸಲಾಗುತ್ತಿದೆ ಎಂದು ಹೇಳಿದರು.
ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಸ್ವಾಭಿಮಾನ, ಪರಿಶ್ರಮದ ಸಂಕೇತವಾಗಿ ನೊಳಂಬ ಸಮಾಜ ಬೆಳೆದು ಬಂದಿದೆ. ನೊಳಂಬ ಸಮಾಜದ ಒಗ್ಗಟ್ಟಿನಲ್ಲಿ ನಾಡಿನ ಒಳಿತು ಕೂಡಾ ಇದೆ. ಆದರೆ, ವೀರಶೈವ ಲಿಂಗಾಯತ ಸಮಾಜದಲ್ಲಿ ವಿಷ ಬೀಜ ಬಿತ್ತುವ ಕೆಲಸವಾಗುತ್ತಿದ್ದು, ಈ ಬಗ್ಗೆ ಸಮಾಜದವರು ಜಾಗೃತರಾಗಬೇಕೆಂದು ಸೂಕ್ಷ್ಮವಾಗಿ ಹೇಳಿದರು.
ಜಯಂತ್ಯೋತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಸಿದ್ಧರಾಮೇಶ್ವರರನ್ನು ಪೂಜೆ ಮಾಡಿದರೆ ಮಳೆ ಬರುತ್ತದೆ ಎಂಬ ಪ್ರತೀತಿ ಇದೆ. ಅಂತಹ ಮಹಾಶಿವಯೋಗಿಗಳು ನಡೆದಾಡಿದ ಸ್ಥಳದಲ್ಲಿ ಅವರ ಜಯಂತಿ ಆಗುತ್ತಿರುವುದು ಸಂತೋಷ ತಂದಿದೆ. ರಾಜ್ಯದಲ್ಲಿ ಭೀಕರ ಬರಗಾಲದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಅವರಿಗೆ ಧೈರ್ಯ ತುಂಬಲು ರಾಜ್ಯ ಪ್ರವಾಸ ಮಾಡುವ ಉದ್ದೇಶ ಹೊಂದಿದ್ದೇನೆ. ಯಾವುದೇ ಸರ್ಕಾರವಾಗಲೀ ನೀರಾವರಿಗೆ ಹೆಚ್ಚು ಒತ್ತು ನೀಡಿ, ರೈತರಿಗೆ ನೀರು ಒದಗಿಸುವ ಕೆಲಸ ಮಾಡಬೇಕೆಂದು ಯಡಿಯೂರಪ್ಪ ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಶ್ರಮ ಜೀವನವನ್ನು ಪ್ರೀತಿಸದ ಹೊರತು ಬದುಕು ಸ್ಥಿರವಾಗಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಕೆರೆಗೊಡಿ – ರಂಗಾಪುರ ಸುಕ್ಷೇತ್ರದ ಶ್ರೀ ಗುರು ಪರದೇಶೀ ಕೇಂದ್ರ ಸ್ವಾಮೀಜಿ, ಯಲವಟ್ಟಿಯ ಶ್ರೀ ಗುರು ಸಿದ್ಧಾಶ್ರಮದ ಯೋಗಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.
ನಂದಿಗುಡಿ ಬೃಹನ್ಮಠದ ಶ್ರೀ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಮತ್ತು ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ದಿವ್ಯ ನೇತೃತ್ವ ವಹಿಸಿದ್ದರು. ಈ ವೇಳೆ ದಾವಣಗೆರೆಯ ಕಿರುವಾಡಿ ಸುರೇಂದ್ರಪ್ಪ ಅವರಿಗೆ `ನೊಳಂಬ ಶ್ರೀ’ ಪ್ರಶಸ್ತಿ ನೀಡಿ, ಗೌರವಿಸಲಾಯಿತು.
ನೊಳಂಬ ಲಿಂಗಾಯತ ಸಂಘದ ರಾಜ್ಯಾಧ್ಯಕ್ಷ ಎಸ್.ಆರ್.ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕರಾದ ಬಸವರಾಜ್ ಶಿವಣ್ಣನವರ್, ಬಿ.ಪಿ.ಹರೀಶ್, ಹೈಕೋರ್ಟ್ ವಕೀಲ ಸಂದೀಪ್ ಪಾಟೀಲ್, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಮಾಜಿ ಶಾಸಕ ಸುರೇಶ್ ಗೌಡ ಪಾಟೀಲ್, ಡಾ. ಡಿ.ಬಿ.ಗಂಗಪ್ಪ, ದಾವಣಗೆರೆಯ ಕಿರುವಾಡಿ ಸೋಮಶೇಖರ್, ಶಿಕಾರಿಪುರದ ಭೂಕಾಂತ್, ನೊಳಂಬ ಸಂಘದ ಉಪಾಧ್ಯಕ್ಷ ಬಿ.ಕೆ.ಚಂದ್ರಶೇಖರ್, ನಿರ್ದೇಶಕ ದಾವಣಗೆರೆಯ ಸಿ.ಬಿ.ಈಶ್ವರಪ್ಪ, ಜಿಗಳಿಯ ಇಂದೂಧರ್, ಜಿ.ಬೇವಿನಹಳ್ಳಿಯ ಬಿ.ಕೆ.ಮಹೇಶ್ವರಪ್ಪ, ಮಲೇಬೆನ್ನೂರಿನ ಬಿ.ವೀರಯ್ಯ, ಹರಿಹರ ಎಪಿಎಂಸಿ ಮಾಜಿ ಅಧ್ಯಕ್ಷ ಜಿ.ಮಂಜುನಾಥ್ ಪಟೇಲ್, ಹೊನ್ನಾಳಿ ಶಾಂತರಾಜ್ ಪಾಟೀಲ್, ನಿವೃತ್ತ ಡಿವೈಎಸ್ಪಿ ಸೊಲಭೇಶ್ವರಪ್ಪ, ಕುಕ್ಕವಾಡದ ರುದ್ರಗೌಡ ಸೇರಿದಂತೆ, ಇನ್ನೂ ಅನೇಕರು ಭಾಗವಹಿಸಿದ್ದರು.