ಭದ್ರಾ ಐಸಿಸಿ ಸಭೆ ಕರೆದು ನೀರು ಹರಿಸಲು ರೈತರ ಒಕ್ಕೂಟ ಆಗ್ರಹ

ಭದ್ರಾ ಐಸಿಸಿ ಸಭೆ ಕರೆದು ನೀರು ಹರಿಸಲು ರೈತರ ಒಕ್ಕೂಟ ಆಗ್ರಹ

ದಾವಣಗೆರೆ, ಡಿ. 21 – ಜಿಲ್ಲೆಯ ಜೀವನಾಡಿ ಭದ್ರಾ ಜಲಾಶಯದಲ್ಲಿ ಪ್ರಸ್ತುತ 151 ಅಡಿ 5 ಇಂಚು ನೀರು ಸಂಗ್ರಹ ಇದೆ. ಜಲಾಶಯದ ಗರಿಷ್ಠ ಸಂಗ್ರಹಣೆ ಸಾಮರ್ಥ್ಯ 71.535 ಇದ್ದು, ಪ್ರಸ್ತುತ ಸಂಗ್ರಹ ಪ್ರಮಾಣ 35.37 ಟಿ.ಎಂ.ಸಿ ಇದೆ. ಇದರಲ್ಲಿ 13.83 ಟಿಎಂಸಿ ಪ್ರಮಾಣದಷ್ಟು ಡೆಡ್ ಸ್ಟೋರೇಜ್ ಇದ್ದು, ಬಳಕೆಗೆ ಬರುವುದಿಲ್ಲ. ಇನ್ನುಳಿದ 21.54 ಟಿ.ಎಂ.ಸಿ ನೀರು ಬಳಕೆಗೆ ಬರುತ್ತದೆ. ಅಧಿಕಾರಿಗಳು ಇದರಲ್ಲಿ ಕುಡಿಯುವ ನೀರಿಗಾಗಿ ಮತ್ತು ಕೈಗಾರಿಕೆಗಳಿಗೆಂದು ನೆಪ ಮಾಡಿಕೊಂಡು ಪೋಲು ಮಾಡುತ್ತಾರೆ. ಇದು ಸರಿಯಲ್ಲ. ನಾಲೆಯಲ್ಲಿ ನೀರು ಹರಿಸಿದಾಗ ಕುಡಿ ಯುವ ನೀರಿಗಾಗಿ ದಾವಣಗೆರೆ ಟಿವಿ ಸ್ಟೇಷನ್ ಕೆರೆ ಮತ್ತು ಕುಂದುವಾಡದ ಕೆರೆ ತುಂಬಿಸಿಕೊಳ್ಳಬಹುದು. ಆದ್ದರಿಂದ ಬಳಸಬಹುದಾದ 21.54 ಟಿ.ಎಂ.ಸಿ ನೀರನ್ನು 72 ದಿನ ನಾಲೆಯಲ್ಲಿ ಹರಿಸಬಹುದು. ಆದ್ದರಿಂದ ತಕ್ಷಣ ಐಸಿಸಿ ಸಭೆ ನಡೆಸಿ, ನೀರು ಹರಿಸುವ ವೇಳಾಪಟ್ಟಿ ಪ್ರಕಟಿಸಬೇಕು. 

ಇದರಿಂದ ರೈತರು ನೀರು ಹರಿಸುವ ವೇಳಾ ಪಟ್ಟಿ ನೋಡಿಕೊಂಡು ಯಾವ ಬೆಳೆ ಬೆಳೆಯಬೇಕು ಎಂದು ಅವರೇ ತೀರ್ಮಾನಿಸಿಕೊಳ್ಳುತ್ತಾರೆ. ಬೇಸಿಗೆ ಯಲ್ಲಿ ಕುಡಿಯುವ ನೀರಿಗಾಗಿ ಭದ್ರಾ ನೀರು ಅವಲಂ ಬಿಸಿಕೊಂಡಿರುವ ದಾವಣಗೆರೆ ಮತ್ತು ಇತರೆ ನಗರ ಗಳು ನಾಲೆಯಲ್ಲಿ ನೀರು ಹರಿಸಿದಾಗ ಕುಡಿಯುವ ನೀರಿನ ಕೆರೆಗಳನ್ನು ತುಂಬಿಸಿಕೊಳ್ಳಬಹುದಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಕೊಳೇನಹಳ್ಳಿ ಬಿ.ಎಂ. ಸತೀಶ್, ಹಿಂದಿನ ಹಂಗಾಮಿನಲ್ಲಿ ಡ್ಯಾಂನಲ್ಲಿ ನೀರು ಇದೆ ಹರಿಯಲು ಬಿಡಿ ಎಂದು ಹೇಳಿದಾಗ, ನಮ್ಮನ್ನು ನೀರು ಎಲ್ಲಿದೆ ? ಎಂದು ಅಪಹಾಸ್ಯ ಮಾಡಿದ್ದರು. ನಾವು ಹೋರಾಟ ಮಾಡಿ ನೀರು ‌ಬಿಡಿಸಿದ್ದೇವು. 

ಬೆಳವನೂರು ನಾಗೇಶ್ವರರಾವ್ ಮಾತನಾಡಿ, ಈಗ ಬೇಸಿಗೆಯಲ್ಲಿ ನೀರು ಹರಿಸಿದರೆ ರೈತರು ನೀರಿನ ಲಭ್ಯತೆ ನೋಡಿಕೊಂಡು ಯಾವುದಾದರೂ ಬೆಳೆ ಬೆಳೆಯುತ್ತಾರೆ ಮತ್ತು ಬೋರ್‌ವೆಲ್ ರಿಚಾರ್ಜ್ ಆಗುತ್ತವೆ ಎಂದರು.

ಧನಂಜಯ ಕಡ್ಲೇಬಾಳ್ ಮಾತನಾಡಿ, ಹಿಂದಿನ ಹಂಗಾಮಿನಲ್ಲಿ ಕೊಳ್ಳೇನಹಳ್ಳಿ ಬಿ.ಎಂ.ಸತೀಶ್, ಬೆಳವನೂರು ನಾಗೇಶ್ವರರಾವ್ ಮುಂತಾದವರ ಹೋರಾಟದಿಂದ ನೀರು ಲಭಿಸಿ ರೈತರು ಒಳ್ಳೆಯ ಭತ್ತದ ಇಳುವರಿಗೆ ಉತ್ತಮ ಬೆಲೆ ಪಡೆದರು. ರೈತ ಸಮುದಾಯದ ಪರವಾಗಿ ಅವರಿಗೆ ಧನ್ಯವಾದ ಅರ್ಪಿಸಿದರು.

ಬೇಡಿಕೆಗಳು: ಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ಕರೆದು 72 ದಿನ ನೀರು ಹರಿಸುವ ವೇಳಾಪಟ್ಟಿ ನಿರ್ಣಯಿಸಿ, ಪ್ರಕಟಣೆ ಮಾಡಬೇಕು. 

ಭದ್ರಾ ಜಲಾಶಯದಲ್ಲಿ ಪ್ರತಿದಿನ ನೀರಿನ ಸೋರಿಕೆಯಾಗುತ್ತಿದ್ದು, ನಿತ್ಯ ಸುಮಾರು 300 ರಿಂದ 400 ಕ್ಯೂಸೆಕ್ಸ್ ನೀರು ಪೋಲಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಶೀಲಿಸಿ, ಸೋರಿಕೆ ನಿಯಂತ್ರಣ ಮಾಡಬೇಕು. ಭದ್ರಾ ನೀರು ಹರಿಸಿದಾಗ ಹಿರೇಕೋಗಲೂರು ಸೂಪರ್ ಪ್ಯಾಸೇಜ್ ಒಡೆದು ಮತ್ತು ಬೆಳ್ಳಿಗನೂಡು, ಮತ್ತಿ, ಸಂತೇಬೆನ್ನೂರು ಮುಂತಾದ ಕಡೆಗಳಲ್ಲಿ ಕಾಲುವೆಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಗಳು ಶಿಥಿಲಗೊಂಡು ಬಹಳಷ್ಟು ಪ್ರಮಾಣದ ನೀರು ರಸ್ತೆಯಲ್ಲಿ ಹರಿದು ಪೋಲಾಗುತ್ತಿದೆ. ಇದು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ತಕ್ಷಣವೇ ಕ್ರಮ ಕೈಗೊಂಡು, ನಾಲೆಯಲ್ಲಿ ಹರಿಯುವ ನೀರು ಪೋಲಾಗದಂತೆ ದುರಸ್ಥಿ ಕಾರ್ಯ ಕೈಗೊಳ್ಳಬೇಕು.

ರೈತ ಮುಖಂಡ ಲೋಕಿಕೆರೆ ನಾಗರಾಜ್,  ಬಲ್ಲೂರು ಬಸವರಾಜ್, ಕುಂದುವಾಡದ ಗಣೇಶಪ್ಪ, ಬೆಳಲಗೆರೆ ಶಿವಣ್ಣ, ಕನ್ನಡ ಪರ ಹೋರಾಟಗಾರ ಎನ್ ಹೆಚ್ ಹಾಲೇಶ್, ಬಾತಿ ವಿರೇಶ್ ದೊಗ್ಗಳ್ಳಿ, ರೇವಣಸಿದ್ದಪ್ಪ, ಬಿ.ಕೆ. ಶಿವಕುಮಾರ್, ಮಳಲ್ಕೆರೆ ಕಲ್ಲಪ್ಪಗುಡ್ಡದ್ರ, ಕಾಶಿಪುರ ಸುರೇಶ್, ನಿಜಲಿಂಗಪ್ಪ, ಕಲ್ಪನಹಳ್ಳಿ ಉಜ್ಜಪ್ಪ, ಸತೀಶ್, ಆರನೇಕಲ್ಲು ವಿಜಯಕುಮಾರ, ಹೊಸಹಳ್ಳಿ ಶಿವಮೂರ್ತಿ, ವಾಸನ ಬಸವರಾಜ, ಮತ್ತಿ ಜಯಣ್ಣ ಮುಂತಾದವರು ಉಪಸ್ಥಿತರಿದ್ದರು

error: Content is protected !!