ರಾಗಿ ಖರೀದಿ ಕೇಂದ್ರ ಭ್ರಷ್ಟಾಚಾರದಿಂದ ಮುಕ್ತವಾಗಿರಲಿ-ಶಾಸಕ ಬಿ.ದೇವೇಂದ್ರಪ್ಪ ಅಧಿಕಾರಿಗಳಿಗೆ ಎಚ್ಚರಿಕೆ

ರಾಗಿ ಖರೀದಿ ಕೇಂದ್ರ ಭ್ರಷ್ಟಾಚಾರದಿಂದ ಮುಕ್ತವಾಗಿರಲಿ-ಶಾಸಕ ಬಿ.ದೇವೇಂದ್ರಪ್ಪ ಅಧಿಕಾರಿಗಳಿಗೆ ಎಚ್ಚರಿಕೆ

ಜಗಳೂರು, ಡಿ.21- ಖರೀದಿ ಕೇಂದ್ರ ಪಾರದರ್ಶಕವಾಗಿ ನಡೆಯಬೇಕು, ಭ್ರಷ್ಟಾಚಾರದ ಕಂಡುಬಂದರೆ ಕ್ಷಮಿಸುವುದಿಲ್ಲ ಎಂದು ಶಾಸಕ ಬಿ.ದೇವೇಂದ್ರಪ್ಪ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ರಾಗಿ ಖರೀದಿ ಕೇಂದ್ರದಲ್ಲಿ ರೈತರ ಆನ್‌ಲೈನ್ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು.

ಕಳೆದ ವರ್ಷದಲ್ಲಿ ಯಾರೋ ಕೆಲವರು ಮಾಡಿದ ಪ್ರಮಾದದಿಂದಲೋ ರಾಗಿ ಖರೀದಿ ಕೇಂದ್ರದಲ್ಲಿ ನಡೆದ ಅವ್ಯವಹಾರ, ಭ್ರಷ್ಟಾಚಾರದಿಂದ ಜಗಳೂರು ತಾಲ್ಲೂಕು ರಾಜ್ಯಕ್ಕೆ ಹೆಸರಾಗಿದೆ. ಕಳೆದ ವರ್ಷದ ಭ್ರಷ್ಟಾಚಾರದ ಕರಿಛಾಯೆ ಮರುಕಳಿಸದಿರಲಿ ಎಂದರು.

ನಾನು ಶಾಸಕನಾಗಿ ಆಯ್ಕೆಯಾದ ನಂತರ ರೈತರಿಗೆ ಧ್ವನಿಯಾಗಿರುವೆ, ಇದರಿಂದ ಅನ್ಯಾಯವಾಗಿದ್ದ ರಾಗಿ ಬೆಳೆಗಾರರ ಪೈಕಿ ಶೇ.75 ರಷ್ಟು ರೈತರಿಗೆ ಹಣಪಾವತಿಯಾಗಿದೆ. ಉಳಿದ 400 ಜನ ರೈತರಿಗೆ ಶೀಘ್ರ ಹಣಪಾವತಿ ಮಾಡಲಾಗುವುದು.

ರಾಗಿ ಖರೀದಿ ಕೇಂದ್ರ ರೈತರಿಗೆ ವರದಾನ: ಪ್ರಸಕ್ತವಾಗಿ ತಾಲ್ಲೂಕಿನಲ್ಲಿ ಬರ ಆವರಿಸಿ ಯಾವ ಬೆಳೆಯ ಫಸಲೂ ಕೈಗೆಟುಕದೆ ರಾಗಿ ಬೆಳೆಯೂ ಇಳಿಮುಖವಾಗಿ, ರೈತರು ಕಂಗಾಲಾಗಿದ್ದಾರೆ‌. ಹಿಂಗಾರು ಮಳೆಗೆ ರಾಗಿ ಬೆಳೆದ ರೈತರಿಗೆ ರಾಗಿ ಖರೀದಿ ಕೇಂದ್ರ ವರದಾನವಾಗಲಿದೆ. ಇದರ ಸದುಪಯೋಗಪಡೆದುಕೊಳ್ಳಬೇಕು. ಕ್ಷೇತ್ರದ ಅನ್ನದಾತರು ನೆಮ್ಮದಿ ಜೀವನ ಸಾಗಿಸಬೇಕು ಎಂದು  ಹೇಳಿದರು.

ರೈತರಿಂದ ಸನ್ಮಾನ ನಿರಾಕರಿಸಿದ ಶಾಸಕರು : ಅಧಿಕಾರಿಗಳು ಶಾಸಕರಿಗೆ ಸನ್ಮಾನಕ್ಕೆ ಮುಂದಾದರು. ಕಳೆದ ವರ್ಷದಲ್ಲಿನ ರಾಗಿ ಬೆಳೆಗಾರರಿಗೆ ಸಂಪೂರ್ಣ ಹಣ ಪಾವತಿಯಾದ ನಂತರ ರೈತರಿಂದ ಸನ್ಮಾನ ಸ್ವೀಕರಿಸುವೆ, ಆದರೆ ಈಗ ಬೇಡ ಎಂದು ಶಾಸಕರು ಸನ್ಮಾನ ನಿರಾಕರಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಸಯ್ಯದ್  ಕಲೀಂ ಉಲ್ಲಾ, ಎಪಿಎಂಸಿ ಉಪನಿರ್ದೇಶಕ ಸಿದ್ದರಾಮ ಮಾರಿಹಾಳ್, ಕೆಪಿಸಿಸಿ ಎಸ್‌ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ರೈತ ಮುಖಂಡರಾದ ಈಶ್ವರಪ್ಪ, ನಿಂಗಪ್ಪ, ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ  ಓಮಣ್ಣ ಮತ್ತಿತರರು ಇದ್ದರು.

error: Content is protected !!