ವೀರಶೈವ ಲಿಂಗಾಯತ ಸಮಾಜದ ಮಹಾ ಅಧಿವೇಶನದ ಯಶಸ್ವಿಗೆ ಪಂಚಮಸಾಲಿ ಶ್ರೀ ಕರೆ

ವೀರಶೈವ ಲಿಂಗಾಯತ ಸಮಾಜದ ಮಹಾ ಅಧಿವೇಶನದ ಯಶಸ್ವಿಗೆ ಪಂಚಮಸಾಲಿ ಶ್ರೀ ಕರೆ

ಹರಿಹರ, ಡಿ.17- ದಾವಣಗೆರೆಯಲ್ಲಿ ಇದೇ ದಿನಾಂಕ 23, 24 ರಂದು ನಡೆಯುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಅಧಿವೇಶನದಲ್ಲಿ ಸಮಸ್ತ ಪಂಚಮಸಾಲಿ ಸಮಾಜದವರು ಹಾಗೂ ಲಿಂಗಾಯತ ಸಮಾಜದ ಎಲ್ಲಾ ಒಳಪಂಗಡಗಳ ಸಮಾಜದವರು `ನಾವೆಲ್ಲರೂ ಒಂದೇ’ ಎಂಬ ಭಾವದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅಧಿವೇಶನವನ್ನು ಯಶಸ್ವಿಯಾಗಿಸುವಂತೆ ಪಂಚಮಸಾಲಿ ಗುರುಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮೀಜಿ ಕರೆ ನೀಡಿದ್ದಾರೆ.

ನಗರದ ಹೊರವಲಯದ ಪಂಚಮಸಾಲಿ ಗುರುಪೀಠದ ಆವರಣದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಶ್ರೀಗಳು ಮಾತನಾಡಿದರು. 

ಈ ಅಧಿವೇಶನವು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾದ ಶಾಮನೂರು ಶಿವಶಂಕ್ರಪ್ಪನವರ ಅಧ್ಯಕ್ಷತೆಯಲ್ಲಿ  ನಡೆಯುತ್ತಿದ್ದು, ಧಾರ್ಮಿಕ, ಶೈಕ್ಷಣಿಕ, ಅಧ್ಯಾತ್ಮಿಕ, ಸಾಹಿತ್ಯಿಕ ಸೇರಿದಂತೆ ಅನೇಕ ಗೋಷ್ಠಿಗಳು, ಹಲವಾರು ಚಿಂತನ-ಮಂಥನ ಏರ್ಪಾಡಾಗಿವೆ.  ನಾಡಿನ ಎಲ್ಲಾ ವೀರಶೈವ ಲಿಂಗಾಯತ ಮಠಾಧೀಶರು, ವಿವಿಧ ಪೀಠದ ಜಗದ್ಗುರುಗಳು, ನಾವೆಲ್ಲರೂ ಒಂದಾಗಬೇಕು, ಮನಸ್ಸುಗಳು ಒಂದಾಗಬೇಕು. ಆ ಮೂಲಕ ನಾವು ಮೇಲು-ಕೀಳು ಎಂಬ ಭಾವನೆ ಬಿಟ್ಟು ನಾವೆಲ್ಲರೂ ಒಂದು ಎಂಬ ಭಾವ ಬರಬೇಕು ಎಂದು, ಒಂದು ಸೇತುವೆಯ ರೂಪದಲ್ಲಿ ವೀರಶೈವ ಮಹಾಸಭಾ ಕಾರ್ಯವನ್ನು ಮಾಡುತ್ತಾ ಸಾಗಿದೆ. ಅದಕ್ಕೆ ನಾವು ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸುತ್ತೇವೆ ಎಂದು ಹೇಳಿದರು.

ನಾಡಿನಾದ್ಯಂತ ಇರುವ ಪಂಚಮಸಾಲಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಜೊತೆಗೆ ಎಲ್ಲಾ ಒಳಪಂಗಡಗಳು, ನಾವೆಲ್ಲರೂ ಒಂದೇ ಎಂಬ ಭಾವದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು. ಸಮಾಜ ಎಂದು ಬಂದಾಗ ಅಖಂಡ ವೀರಶೈವ ಲಿಂಗಾಯತರು ಒಂದೇ ಎಂಬ ಭಾವದ ಅಡಿಯಲ್ಲಿ ಹೋದರೆ ಸಮುದಾಯಕ್ಕೆ ಮತ್ತು ಮುಂದೆ ಬರುವ ಮಕ್ಕಳಿಗೆ ನಾವೆಲ್ಲರೂ ಮಾರ್ಗದರ್ಶನ ಮಾಡುವ ಸಾಮರ್ಥ್ಯ ಬರುತ್ತದೆ ಎಂದು ಶ್ರೀಗಳು ಪ್ರತಿಪಾದಿಸಿದರು.

ಪಂಚಮಸಾಲಿ ಗುರುಪೀಠದ ಆಡಳಿತ ಅಧಿಕಾರಿ ಡಾ. ರಾಜಕುಮಾರ್ ಮಾತನಾಡಿ,   ಲಿಂಗಾಯತ ಧರ್ಮವನ್ನು ಕಟ್ಟುವಲ್ಲಿ ಅನೇಕರು ತಮ್ಮದೇ ಆದ ಕೊಡುಗೆಯನ್ನು ಕೊಟ್ಟಿದ್ದಾರೆ.  ಭೀಮಣ್ಣ ಖಂಡ್ರೆ ಅವರು ಸಮಾಜದ ಒಳಿತಿಗಾಗಿ ದೊಡ್ಡ ಮಟ್ಟದಲ್ಲಿ ಆಂದೋಲನವನ್ನು ಮಾಡಿದ್ದಾರೆ. ಒಕ್ಕೂಟ ವ್ಯವಸ್ಥೆಯ ಎಲ್ಲಾ ಒಳಪಂಗಡಗಳಲ್ಲಿ ಪಂಚಮಸಾಲಿ ಸಮುದಾಯ ತಾಯಿ ಸ್ಥಾನವನ್ನು ಪಡೆದಿದೆ ಎಂದರು. 

ಜಾತಿ ಗಣತಿ, ವಿಚಾರದಲ್ಲಿ ಪಂಚಮಸಾಲಿ ಸಮುದಾಯಕ್ಕೆ ಬಹಳ ದೊಡ್ಡ ಮಟ್ಟದಲ್ಲಿ ತಾರತಮ್ಯ ನಡೆಯುತ್ತಿದೆ.  ಜೊತೆಗೆ ಹಿಂದುಳಿದ ಆಯೋಗ ಕೊಟ್ಟಿರುವ ವರದಿ ವೈಜ್ಞಾನಿಕವಾಗಿ ಆಗಿಲ್ಲ, ಸರ್ಕಾರ ಇದನ್ನು ಒಪ್ಪದೇ ಕಾನೂನಾತ್ಮಕವಾಗಿ ಮಾಡಬೇಕು ಎಂದು ಅವರು ಹೇಳಿದರು.

ಧರ್ಮದರ್ಶಿ ಬಿ‌.ಸಿ. ಉಮಾಪತಿ ಮಾತನಾಡಿದರು. ಈ ಸಂದರ್ಭದಲ್ಲಿ ಪಂಚಮಸಾಲಿ ಗುರುಪೀಠದ ಧರ್ಮದರ್ಶಿ ಚಂದ್ರಶೇಖರ್ ಪೂಜಾರ್, ದೊಡ್ಡಪ್ಪ, ಬಾದಾಮಿ ಜಯಣ್ಣ, ಉಚ್ಚಂಗಿದುರ್ಗ ಬಸವರಾಜ್, ಕರಿಬಸಪ್ಪ ಗುತ್ತೂರು, ಪುರುವಂತರ ಮಂಜುನಾಥ್,  ಬೆಂಡಿಗೇರಿ ಅಶೋಕ, ಶಿವಪ್ಪ ಇತರರು ಹಾಜರಿದ್ದರು.

error: Content is protected !!