ಗಿಡಗಳನ್ನು ಮಕ್ಕಳಂತೆ ಪೋಷಿಸಿ ಬೆಳೆಸಬೇಕು

ಗಿಡಗಳನ್ನು ಮಕ್ಕಳಂತೆ ಪೋಷಿಸಿ ಬೆಳೆಸಬೇಕು

ಕೆ.ಎಚ್.ಬಿ. ತುಂಗಭದ್ರಾ ಬಡಾವಣೆಯಲ್ಲಿನ ವನಮಹೋತ್ಸವದಲ್ಲಿ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಕರೆ

ದಾವಣಗೆರೆ, ಆ.4- ಧೂಳು ಮುಕ್ತ ನಗರ ಎಂಬ ಕಳಂಕವನ್ನು ತೊಡೆದು ಹಾಕಲು ನಾವು ಹೆಚ್ಚು ಮರ ಗಿಡಗಳನ್ನು ಬೆಳೆಸಬೇಕು ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಕರೆ ನೀಡಿದರು.

ನಗರದ ಕೆ.ಎಚ್.ಬಿ. ತುಂಗಭದ್ರಾ  ಬಡಾವಣೆಯಲ್ಲಿ ಶುಕ್ರವಾರ ಜರುಗಿದ ವನಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿಶಿಷ್ಟ ಜೀವ ವೈವಿಧ್ಯದ ಹಸಿರು ನಗರವನ್ನಾಗಿ ಮಾಡಲು ಪಣ ತೊಡಲು ಹಾಗೂ ಮಾಲಿನ್ಯ ಮುಕ್ತ ನಗರ ಮಾಡಲು ಎಲ್ಲರ ಸಹಕಾರ ಅಗತ್ಯ. ನಾಗರಿಕ ಸಮಾಜದ ಪ್ರತಿಯೊಬ್ಬರೂ ಸಹ ಗಿಡಗಳನ್ನು ಮಕ್ಕಳಂತೆ ಪೋಷಿಸಿ ಬೆಳೆಸಬೇಕಾಗಿದೆ. ಉತ್ತಮ ಪರಿಸರದಿಂದ ಜನರ ಆರೋಗ್ಯ ರಕ್ಷಣೆ ಸಾಧ್ಯವಾಗಲಿದ್ದು, ಈ ನಿಟ್ಟಿನಲ್ಲಿ ಪ್ರತಿಯೊಬ್ಬ ನಾಗರೀಕರು ಗಿಡ, ಮರಗಳನ್ನು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆ ಮಾಡಲು ಮುಂದಾಗಬೇಕು ಎಂದು ಕರೆ ನೀಡಿದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ಮಾತನಾಡಿ, ಮನುಷ್ಯ ಬದುಕಲು ಮಣ್ಣು, ನೀರು ಮತ್ತು  ಗಾಳಿ ಬಹಳ ಮುಖ್ಯ. ಮನುಷ್ಯನಿಗೆ ಅರಿವಿಲ್ಲದೆಯೇ ಕಾಡು ಕಡಿಯುತ್ತಾ ತನ್ನ ಅವಸಾನವನ್ನು ತಾನೇ ತಂದುಕೊಳ್ಳುತ್ತಿದ್ದಾನೆ ಎಂದರು.

ಈಗಾಗಲೇ ಸ್ಮಾರ್ಟ್ ಸಿಟಿ ಎಂದು ಹೆಸರಾದ ದಾವಣಗೆರೆ ನಗರ  ಇಂದು ಮಾಲಿನ್ಯ ನಗರದ ಪಟ್ಟಿಗೆ ಸೇರಿದೆ. ದೇಶದ ಮಾಲಿನ್ಯ ಮುಕ್ತ ನಗರದ ಶ್ರೇಯಾಂಕದಲ್ಲಿ 136 ನೇ ಸ್ಥಾನದಲ್ಲಿರುವುದು ವಿಷಾದದ ಸಂಗತಿ. ನಮ್ಮ ನಾಳೆಗಳನ್ನು ನಾವು ಮುಂದಿನ ಪೀಳಿಗೆಗೆ ಉಳಿಸಬೇಕಿದೆ. ಈ ದಿಸೆಯಲ್ಲಿ ಗ್ರಾಸಿಂ ಇಂಡಸ್ಟ್ರೀಸ್ ರವರು ಪರಿಸರ ಉಳಿಸುವಲ್ಲಿ ಸಾಮಾಜಿಕ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.

ವನಮಹೋತ್ಸವ ಅಂಗವಾಗಿ ಕೆ.ಎಚ್.ಬಿ. ತುಂಗಭದ್ರಾ ಬಡಾವಣೆಯಲ್ಲಿ ನಾಲ್ಕೂವರೆ ಎಕರೆ ವಿಸ್ತಾರದ ಜಾಗದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಡಲಾಯಿತು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಕರಣ್ಣನವರ, ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀಮತಿ  ರೇಣುಕಾ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅರುಣಕುಮಾರ್ ಎಲ್. ಹೆಚ್, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಡಾ.ಲಕ್ಷ್ಮಿಕಾಂತ, ಡಾ.ಮಂಜು ನಾಥ, ಪೊಲೀಸ್ ಅಧಿಕಾರಿ ಯಶವಂತ್, ಗ್ರಾಸಿಂ ಇಂಡಸ್ಟ್ರೀಸ್ ನ ಮುಖ್ಯಸ್ಥ ಡಾ.ಅಜಯ್ ಗುಪ್ತಾ ಉಪಸ್ಥಿತರಿದ್ದರು.

error: Content is protected !!