ಶತಮಾನದ ಸಂಭ್ರಮದಲ್ಲಿ ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ಮಹಾ ರಥೋತ್ಸವ

ಶತಮಾನದ ಸಂಭ್ರಮದಲ್ಲಿ ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ಮಹಾ ರಥೋತ್ಸವ

ನೂರು ವರ್ಷಗಳ ಅವಧಿ ಎಂದರೆ ಇದಕ್ಕೆ ಶತಕ, ಶತಮಾನ ಎಂದೆಲ್ಲಾ ವಿಶೇಷವಾಗಿ ಬಣ್ಣಿಸಲಾಗುತ್ತದೆ.  ಚೌಕಿಪೇಟೆಯ ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ಮಹಾಸ್ವಾಮಿಗಳ ಮಹಾ ರಥೋತ್ಸವಕ್ಕೆ ಈ ಬಾರಿ ಒಂದು ನೂರು ವರ್ಷ. ಆದರೆ, ಈ ರಥಕ್ಕೆ ನೂರಾರು ವರ್ಷಗಳ ಇತಿಹಾಸ ಇರುವುದು ಒಂದು ಸ್ವಾರಸ್ಯ.

ಬಕ್ಕೇಶ್ವರರ ಸಂಕ್ಷಿಪ್ತ ಇತಿಹಾಸ :

ದೇವತೆಗಳ ಅವತಾರಗಳು ವಿಶ್ವ ವ್ಯಾಪ್ತಿಯಲ್ಲಿ ಆಗುತ್ತವೆಯಾದರೂ ದೈವಾಂಶ ಸಂಭೂತರ ಅವ ತಾರಗಳು ಪ್ರಾದೇಶಿಕವಾಗಿ ಅಲ್ಲಲ್ಲಿ ಆದ ನಿದರ್ಶನ ಗಳು ಇವೆ. ಶ್ರೀ ಬಕ್ಕೇಶ್ವರರ ಜನ್ಮವು ದಾವಣಗೆರೆ ಸಮೀಪದ ಗುಮ್ಮನೂರಿನ ಹಿರೇಮಠದ ಬಸವ ಲಿಂಗಯ್ಯ ಪಾರ್ವತಮ್ಮನವರ ಗರ್ಭಾಂಬುದಿಯಲ್ಲಿ ಪಂಚಗಣಾಧೀಶರ ಕೃಪೆ ಹಾಗೂ ಹೆಬ್ಬಾಳದ ಶ್ರೀ ರುದ್ರೇಶ್ವರರ ಆಶೀರ್ವಾದದಿಂದ ಉಳವಿಯ ಶ್ರೀ ರೇಚಿ ತಂದೆಯವರ ಕಾರುಣ್ಯದೊಂದಿಗೆ 1770ರಲ್ಲಿ ಆಗುವಾಗ ಮಗುವಿನ ಬಲಗಿವಿಯ ಮೇಲೆ `ಬೊಕ್ಕೆ’ ಯೊಂದು ಅಂದರೆ `ಬಕ್ಕೆ’ಯೊಂದು ಇದ್ದದ್ದರಿಂದ `ಬಕ್ಕೇಶ’ ಎಂದು ನಾಮಕರಣ ಮಾಡಲಾಯಿತು. 

ಗುಮ್ಮನೂರಿನಲ್ಲಿ ಶ್ರೀ ಬಕ್ಕೇಶ್ವರರ ಗದ್ದುಗೆ ರೂಪದ ಸ್ಮಾರಕವಿದ್ದು, ಅವರ ಪೂರ್ವಾಶ್ರಮದ ವಂಶಸ್ಥರು ಅಲ್ಲಿದ್ದಾರೆ. ಆ ವಂಶದ ರುದ್ರಯ್ಯ – ರುದ್ರಮ್ಮನವರ ಪುತ್ರ ರುದ್ರೇಶ್‌ರವರು ನಿವೃತ್ತ ಶಿಕ್ಷಕರಾಗಿದ್ದು, ದೀಕ್ಷಿತ್ ರಸ್ತೆಯ ನಮ್ಮ ಮನೆಯ ಎದುರಿನಲ್ಲೇ ವಾಸವಾಗಿದ್ದಾರೆ. ಗುಮ್ಮನೂರಿನ ಆ ಮನೆಯಲ್ಲಿ ಒಂದಷ್ಟು ಗ್ರಂಥಗಳ ಕಟ್ಟು ಇತ್ತೆಂದೂ ಬಹಳ ಹಿಂದೆಯೇ ಕಣವಿ ಬಸ್ಸಜ್ಜರೆಂಬುವವರು ಅಧ್ಯಯನಕ್ಕಾಗಿ ಅದನ್ನು ತೆಗೆದುಕೊಂಡು ಹೋದ ರೆಂದು ಹೇಳುವರು. ಬಾಲಕ ಬಕ್ಕೇಶಗೆ ಸುಜ್ಞಾನಿ ಜಂಗಮ ಶಿವಾಚಾರ್ಯರಿಂದ ಶಿವ ದೀಕ್ಷೆ ದೊರೆತು, ಮುಂದೆ ಜಂಗಮಾವಸ್ಥೆಯಲ್ಲಿ ದೇಶ ಸಂಚಾರ ಹೊರಟು ಕೊಟ್ಟೂರು, ಸೊಂಡೂರು, ಉಜ್ಜಿನಿ, ಹೇಮಕೂಟ, ಗೋಕರ್ಣ, ಕಂಚಿ, ಕಾಳಹಸ್ತಿ, ಶ್ರೀಶೈಲ, ವಾರಣಾಸಿ (ಕಾಶಿ) ಮುಂತಾದ ಕ್ಷೇತ್ರಗಳ ಸಂದರ್ಶನ ಮಾಡಿ, ಹರಿಹರ ಸಮೀಪದ ಐರಣಿಗೆ ಬಂದು ಅಲ್ಲಿಂದ ತುಂಗಭದ್ರಾ ತೀರದ `ಶಂಕರ ನಾರಾಯಣ’ ಕ್ಷೇತ್ರ  ಅಂದರೆ ಈಗಿನ ಪರಿಸರಕ್ಕೆ ಚಿತ್ತೈಸಿ ಅಲ್ಲಿನ ಸದ್ಭಕ್ತ ಸತ್ಯಪ್ಪ (ಸತ್ಯನಾರಾಯಣ) ಶೆಟ್ಟರಲ್ಲಿ  ಕೆಲ ಕಾಲ ಇದ್ದು ಆಶೀರ್ವದಿಸಿ ನಂತರ ದಾವಣಗೆರೆಗೆ ಬಂದು ಹಳೆ ನಗರದ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಸಮೀಪದಲ್ಲಿ ಮಠ ಮಾಡಿಕೊಂಡು ಭಕ್ತ ಜನರ, ಪುರಜನರ, ಪರಿಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುತ್ತಾ ಚಿತ್ರದುರ್ಗದ ಶ್ರೀಮನ್ ನಿರಂಜನ ಜಗದ್ಗುರು ರಾಚವಟ್ಟಿ ಮುರುಘಾ ರಾಜೇಂದ್ರ ಸ್ವಾಮಿಗಳವರ ಲಿಂಗಾಂಗ ಸಾಮರಸ್ಯ ಸುಜ್ಞಾನ ಹೊಂದಿ, ಮೈಸೂರು ಸಂಸ್ಥಾನದ ಮಹಾರಾಜ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ ಮೇಲೂ ಅಧ್ಯಾತ್ಮಿಕ ಪ್ರಭಾವ ಬೀರಿ 1855ನೇ ಇಸ್ವಿಯ ಚೈತ್ರ ಶುದ್ಧ ಪಂಚಮಿಯಂದು ತಮ್ಮ ಇಹಲೋಕದ ಕಾರ್ಯ ಮುಗಿಸಿದಾಗ ಅವರ ಇಚ್ಛೆಯಂತೆ ಚೌಕಿಗುಂಡಿ ಅಂದರೆ ಈಗಿನ ಚೌಕಿಪೇಟೆಯಲ್ಲಿ ಕ್ರಿಯಾ ಕಟ್ಟಳೆಯಂತೆ ಗದ್ದುಗೆ ಮಾಡಲಾಯಿತು. ಈ ಸ್ಥಳದಲ್ಲಿ ದೇವಸ್ಥಾನವನ್ನು ಮಾಗಾನಹಳ್ಳಿ ವಂಶಸ್ಥರು ಆಗಿನ ಅನೇಕ ಗಣ್ಯರ ಸಹಾಯದಿಂದ ನಿರ್ಮಿಸಿದರು. ಗದ್ದುಗೆಯಲ್ಲಿ ಅಂತ ರ್ಧಾನರಾಗಿ ಈಗಲೂ ಭಕ್ತರನ್ನು ಹರಸುತ್ತಿದ್ದಾರೆ.

ಮಹಾರಥೋತ್ಸವಕ್ಕೆ ವಿಶೇಷತೆ

ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ಮಹಾಸ್ವಾಮಿಗಳವರ ಮಹಾರಥೋತ್ಸವವು ಪ್ರತಿ ವರ್ಷದ ಚೈತ್ರ ಶುದ್ಧ ಪಂಚಮಿಯಂದು ಪಾರಂಪರಿಕ ಭಕ್ತಿ ಶ್ರದ್ಧಾ ಸಂಭ್ರಮಗಳಿಂದ ನೆರವೇರುತ್ತಿದೆ. ಪ್ರಸ್ತುತ ಈ ಮಹಾರಥೋತ್ಸವಕ್ಕೆ ಒಂದು ನೂರು ವರ್ಷಗಳ ಸಂಭ್ರಮ. 

ರಥೋತ್ಸವಕ್ಕೆ ಒಂದು ನೂರು ವರ್ಷಗಳೇ ವಿನಃ ಈ ರಥವು ನೂರಾರು ವರ್ಷಗಳ ಇತಿಹಾಸ ಹೊಂದಿರುವ ಸಂಭವವಿದೆ. ಏಕೆಂದರೆ ಪೂರ್ವದಲ್ಲಿ ಈ ರಥವು ಹರಿಹರದ ಒಂದು ದೇವಿಯ ರಥವಾಗಿತ್ತು ಎಂದು ತಿಳಿದು ಬರುತ್ತದೆ. ಕಾರಣಾಂತರಗಳಿಂದ ಅದನ್ನು ಬಳಸದೇ ತುಂಗಭದ್ರಾ ನದಿಯ ಹಿನ್ನೀರಿನಲ್ಲಿ ಅಂದರೆ ನದಿ ಅಂಚಿನ ನೀರಿನಲ್ಲಿ ಮುಳುಗಿಸಿ ಇಡಲಾಗಿತ್ತೆಂದೂ, ಶತಮಾನಕ್ಕೂ ಹಿಂದೆ ಸುಮಾರು ಎರಡು ನೂರು ರೂಪಾಯಿಗಳ `ಭಕ್ತಿ ಧನ’ ಕೊಟ್ಟು ರಥವನ್ನು ದಾವಣಗೆರೆಗೆ ತಂದು ಶ್ರೀ ಬಕ್ಕೇಶ್ವರ ಸ್ವಾಮಿಯವರ ರಥವನ್ನಾಗಿ ಬಳಸಲಾಗುತ್ತಿದೆಯೆಂದೂ ಕೀರ್ತಿಶೇಷ ಮಾಗಾನಹಳ್ಳಿ ಗುರುಸಿದ್ದಪ್ಪನವರು ಹೇಳಿದ್ದು ನನಗೀಗಲೂ ನೆನಪಿದೆ.

ಹೀಗಾಗಿಯೇ ಈ ರಥೋತ್ಸವಕ್ಕೆ ನೂರು ವರ್ಷಗಳಾದರೂ ರಥಕ್ಕೆ ನೂರಾರು ವರ್ಷಗಳ ಐತಿಹ್ಯವಿದೆ. ಗಾತ್ರದಲ್ಲಿ ಭಾರೀ ದೊಡ್ಡದಲ್ಲದಿದ್ದರೂ ಲಕ್ಷಣದಲ್ಲಿ ಈ ರಥವು ಅತ್ಯಂತ ಸುಂದರವಾಗಿದೆ. ಕಾರಣ ರಥದ ಪಾದ ಭಾಗವಾಗಿರುವ ತೇರು ಗಡ್ಡೆಯು ಸಾಂಪ್ರದಾಯಿಕ ರೂಪ ಲಕ್ಷಣಗಳಲ್ಲಿ ಪೂರ್ವ ಭಾಗಕ್ಕೆ ಶ್ರೀ ಮಹಾಗಣಪತಿ, ಪಶ್ಚಿಮಕ್ಕೆ ಪರಾಶಕ್ತಿರೂಪೀ ಶ್ರೀ  ಲಕ್ಷ್ಮಿ, ಉತ್ತರಕ್ಕೆ ವೀಣಾಪಾಣಿ ಶ್ರೀ ಸರಸ್ವತಿ, ದಕ್ಷಿಣಕ್ಕೆ ಬಹುಶಃ ಶ್ರೀ ವೀರಭದ್ರ, ಈ ನಾಲ್ಕೂ ಮೇಲ್ಭಾಗಗಳಲ್ಲಿ ಸಪತ್ನೀಕ ರಾಗಿ ವಾಹನಾರೂಢರಾದ ಅಷ್ಟದಿಕ್ಪಾಲಕರು, ದಕ್ಷಿಣೋತ್ತರಗಳಲ್ಲಿ  ಬೆಸೆದುಕೊಂಡಂತಿರುವ ಚತುಷ್ ಚಕ್ರಗಳು, ಪೂರ್ವೋತ್ತರಗಳಲ್ಲಿ ಗಜ ಮಂಡಿ ಸಾಲು, ಆಮ್ರತೋರಣ ಹಿಡಿದೆತ್ತಿರುವ ಬಾಹುಕಿ ಬೊಂಬೆಗಳ ಸೂಕ್ಷ್ಮಕೆತ್ತನೆಗಳು ಇದ್ದು, ಪದೇ ಪದೇ ಹುರಿಮಂಜು ನಂತರದಲ್ಲಿ ಬಣ್ಣ ಹಚ್ಚುವುದರಿಂದಾಗಿ ಮುಚ್ಚಿ ಹೋಗಿದ್ದರೂ ಸಾಂಪ್ರದಾಯಿಕ ಮತ್ತು ಪಾರಂಪರಿಕ ಅಂದಮಾತ್ರ ರಥಗಡ್ಡೆಯಲ್ಲಿ ಅದ್ಭುತವಾಗಿದೆ. ರಥದ ಪಾದ ಭಾಗ ಅಂದರೆ ಕಟಿಭಾಗ, ಉದರಭಾಗ ನಾಲ್ಕು ದಿಕ್ಕುಗಳಿಗೆ ನಾಲ್ಕು ದ್ವಾರಗಳನ್ನು ಹೊಂದಿ ಹೃದಯ ಭಾಗವು ಆವರ್ತ ಮುಚ್ಚಲ್ಪಟ್ಟಿದ್ದು, ಈ ಎರಡೂ ಹಂತಗಳು ಹಿತ್ತಾಳೆಯ ಅದ್ಭುತ ಉಬ್ಬು ಚಿತ್ರಗಳ ಫಲಕಗಳನ್ನು ಹೊಂದಿದ್ದು, ರಥದ ಬಾಹುಭಾಗವು ಪಂಚವರ್ಣಾತ್ಮಕ ಧ್ವಜ ಸಹಸ್ರಗಳಿಂದ ತೂಗುತ್ತಿದ್ದರೆ ಶಿರೋಭಾಗವು ರಕ್ತವರ್ಣದ ಹಂಡೇವು, ಮೇಲೆ ಸುವರ್ಣ ವರ್ಣದ `ಕಳಶ’ ಮನೋಹರವಾಗಿದೆ. 

ನಾನಿಲ್ಲಿ ವಿವರಿಸಿರುವ ವಿಶೇಷತೆಗಳನ್ನೆಲ್ಲಾ ಕಣ್ತುಂಬಿಕೊಳ್ಳಬೇಕೆಂದರೆ, ಮಹಾರಥೋತ್ಸವದ ದಿನ ಮಧ್ಯಾಹ್ನದೊಳಗೆ ಹೋಗಿ ನೋಡಬೇಕು. ನಂತರವಾದರೆ, ಹೂವಿನ ಅಲಂಕಾರದಿಂದಾಗಿ ಮುಚ್ಚಿಹೋಗಿರುತ್ತದೆ. ಹಗಲು ಬೆಳಕೂ ಇರುವು ದಿಲ್ಲ, ಜನಜಂಗುಳಿಯೂ ಅಪಾರವಾಗಿರುತ್ತದೆ. ಈ ಮಹಾ ರಥದ ತೇರು ಗಡ್ಡೆಯು ತುಸು ಜೀರ್ಣಾ ವಸ್ಥೆಯಲ್ಲಿ ಇರುವುದರಿಂದ ಹೊಸ ತೇರುಗಡ್ಡೆಯ ನಿರ್ಮಾಣ ಪ್ರಕ್ರಿಯೆ ಆರಂಭವಾಗಿದ್ದು, ಬಹುಶಃ ಈ ನೂರಾರು ವರ್ಷದ ತೇರು ಗಡ್ಡೆಯನ್ನು ವೀಕ್ಷಿಸಲು ಈ ವರ್ಷದ ಮಹಾರಥೋತ್ಸವವೇ ಕೊನೆಯ ಅವಕಾಶವೆಂದು ಕಾಣುತ್ತದೆ. ಮುಂದಿನ ವರ್ಷ ಹೊಸ ತೇರುಗಡ್ಡೆ ಬರಬಹುದಾಗಿದೆ. 

ಸಂಪ್ರದಾಯದಂತೆ ಚೈತ್ರ ಶುದ್ಧ ಪಂಚಮಿ ಯಂದು ಈ ರಥೋತ್ಸವ ಜರುಗಬೇಕಾಗಿದ್ದರೂ ಈ ವರ್ಷ ಷಷ್ಟಿಯಂದು ನೆರವೇರುತ್ತಿದೆ. ಏಕೆಂದರೆ ಸೂರ್ಯನ ದಿನವಾದ ಆದಿತ್ಯವಾರದಂದು ಮಹಾ ರಥವನ್ನು ಪೂರ್ವ ದಿಕ್ಕಿಗೆ ಎಳೆಯುವಂತಿಲ್ಲವೆಂಬ ಪ್ರತೀತಿ ಕೆಲವೆಡೆ ಇದ್ದು, ಭಾನುವಾರದ ಬದಲು ಇಂದು ಸೋಮವಾರ ಈ ಮಹಾ ರಥೋತ್ಸವ ಜರುಗಲಿದೆ. ಮಹಾರಥೋತ್ಸವದ ಮುನ್ನಾದಿನ ಶ್ರೀ ಸ್ವಾಮಿಯ ಗಜವಾಹನೋತ್ಸವವೂ, ಮಹಾರ ಥೋತ್ಸವದ ಮಾರನೆಯ ದಿನ  ನಂದಿವಾಹನೋತ್ಸ ವವೂ ಇದ್ದು, ಸಾಲಂಕೃತ ಗಜ ವಿಗ್ರಹ ಮತ್ತು ಮನುಷ್ಯ ದೇಹ ನಂದಿ ಮುಖದ ನಂದಿ ವಿಗ್ರಹವು ಹಿತ್ತಾಳೆ ಹಾಗೂ ತಾಮ್ರಗಳಿಂದ ನಿರ್ಮಿಸಿದ್ದು, ಅತ್ಯಂತ ಕಲಾತ್ಮಕವಾಗಿ ನೋಡಲೇಬೇಕೆ ನ್ನುವಂತಿದೆ. 

ಶತಮಾನದ ಸಂಭ್ರಮದಲ್ಲಿ ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ಮಹಾ ರಥೋತ್ಸವ - Janathavani– ಹೆಚ್.ಬಿ.ಮಂಜುನಾಥ್‌ಹಿರಿಯ ಪತ್ರಕರ್ತ, ದಾವಣಗೆರೆ

error: Content is protected !!