ವಿದ್ಯಾರ್ಥಿ ಮಿತ್ರರಿಗೊಂದು ಪತ್ರ…

ವಿದ್ಯಾರ್ಥಿ ಮಿತ್ರರಿಗೊಂದು ಪತ್ರ…

ನನ್ನ ನಲ್ಮೆಯ ವಿದ್ಯಾರ್ಥಿ ಮಿತ್ರರಿಗೆ ಶುಭ ಹಾರೈಕೆಗಳು.. ಎಲ್ಲರೂ ಹೇಗಿದ್ದೀರಿ. ಇನ್ನೇನು ಪಿಯುಸಿ, ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭಕ್ಕೆ ಕೆಲವೇ ದಿನಗಳು ಮಾತ್ರ ಬಾಕಿ. ಇಂತಹ ಸಮಯದಲ್ಲಿ ನೀವೆಲ್ಲರೂ ಆತ್ಮವಿಶ್ವಾಸದಿಂದ ಸಕಲ ಸಿದ್ಧತೆ ಮಾಡಿಕೊಂಡಿರುವಿರೆಂದು  ಭಾವಿಸಿರುವೆ.

ಒಂದೆಡೆ ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎಂಬ ನಾಣ್ಣುಡಿಯ ಸಾರ್ವಕಾಲಿಕವಾದುದು. ಮೊಗ್ಗಿನ ಮನಸಿನ ಮಕ್ಕಳನ್ನು ಜ್ಞಾನದ ಪರಿಮಳವ ಬೀರುವ ಹೂಗಳಂತಾಗಿಸುವ ಕೆಲಸವನ್ನು ಶಿಕ್ಷಣವು ಮಾಡುತ್ತದೆ. ನಾಲ್ಕು ಗೋಡೆಗಳ ಮಧ್ಯೆ, ಕಪ್ಪು/ಹಸಿರು ಹಲಗೆಯ ಮೇಲೆ, ಪುಸ್ತಕ ರಾಶಿಗಳ ನಡುವೆ, ಶಿಕ್ಷಕರ ಮನಮುಟ್ಟುವ ಬೋಧನೆಯನ್ನು ಶೈಕ್ಷಣಿಕ ವರ್ಷದಲ್ಲಿ ಕಲಿತ ವಿದ್ಯಾರ್ಥಿಗಳು ಕಲಿಕೆಯ ಫಲಿತವನ್ನು ಅಳೆಯಲು ಇರುವ ಮಾನದಂಡಗಳೇ ಪರೀಕ್ಷೆಗಳು.

ಪೋಷಕರು ಮತ್ತು ಶಿಕ್ಷಕರ ಕನಸುಗಳನ್ನು ನನಸಾಗಿಸುವ ಹೊಣೆ ಹೊತ್ತು, ವರ್ಷವೆಲ್ಲಾ ಕಲಿತಿದ್ದನ್ನು ಮೂರು ಗಂಟೆಗಳ ಅವಧಿಗಳೊಳಗೆ, ಎಂಬತ್ತು ಅಥವಾ ನೂರು ಅಂಕಗಳ ಪ್ರಶ್ನೆಗಳನ್ನು ವಿದ್ಯಾರ್ಥಿಗಳು ಅರ್ಥೈಸಿಕೊಂಡು ಉತ್ತರ ಬರೆಯುತ್ತಾರೆ. ಪರೀಕ್ಷೆಯ ನಂತರ ಫಲಿತಾಂಶ ಬಂದೇ ಬರುತ್ತದೆ. ಕೆಲವರು ಉತ್ತೀರ್ಣಗೊಂಡರೆ, ಕೆಲವರು ಅನುತ್ತೀರ್ಣಗೊಳ್ಳುವ ವಿದ್ಯಾರ್ಥಿಗಳಿರುತ್ತಾರೆ.

ಪರೀಕ್ಷೆಯೆಂದರೆ ಸಾಕು  ಕಲಿಕೆಯಲ್ಲಿ ಹಿಂದುಳಿದ ಕೆಲವು ವಿದ್ಯಾರ್ಥಿಗಳಿಗೆ ಭಯದ ವಾತಾವರಣ ನಿರ್ಮಾಣವಾಗಿರುತ್ತದೆ. ಆದರೆ ಶೈಕ್ಷಣಿಕ ವರ್ಷದಲ್ಲಿ ಕಲಿತ ಜ್ಞಾನದ ಮಟ್ಟವನ್ನು ನಿರ್ಧರಿಸುವ ಔಪಚಾರಿಕ ಪರೀಕ್ಷೆಗಳ ಬಗ್ಗೆ ವಿದ್ಯಾರ್ಥಿಗಳು ಭಯ ಪಡದೇ ಎದುರಿಸುವ ಕಲೆಯನ್ನು ರೂಪಿಸುವ ಜವಾಬ್ದಾರಿ ಪೋಷಕರು ಮತ್ತು ಶಿಕ್ಷಕರ ಮೇಲಿದೆ. ಮತ್ತೊಂದೆಡೆ ವಿದ್ಯಾರ್ಥಿಗಳು ಸಹ ಮೊದಲು ಪರೀಕ್ಷೆಯನ್ನು ಎದುರಿಸುವ ಆತ್ಮವಿಶ್ವಾಸವನ್ನು ಹೊಂದಿರಬೇಕು.

ಆತ್ಮೀಯ ವಿದ್ಯಾರ್ಥಿ ಮಿತ್ರರೇ, ಪರೀಕ್ಷೆಯೆಂಬ ಯುದ್ಧದ ಸಮಯ ಹತ್ತಿರವಿರುವ ಸಮಯದಲ್ಲಿ ಶಸ್ತ್ರಾಸ್ತ್ರ ಅಭ್ಯಾಸ ಮಾಡುವ ಬದಲಾಗಿ ಶೈಕ್ಷಣಿಕ ವರ್ಷದ ಆರಂಭದಿಂದಲೇ ನಿಗದಿತ ವೇಳಾಪಟ್ಟಿ ಹಾಕಿಕೊಂಡು, ಆಯಾ ದಿನದ ಪಾಠಗಳಿಗೆ  ಸಂಬಂಧಿಸಿದ ಅನುಮಾನ, ಗೊಂದಲಗಳನ್ನು ಶಿಕ್ಷಕರು, ಪೋಷಕರು, ಸ್ನೇಹಿತರ ಜೊತೆ ಚರ್ಚಿಸಿ, ಬಗೆಹರಿಸಿಕೊಳ್ಳಿರಿ. ಆಗ ಕಲಿಕೆಯಲ್ಲಿ ಪ್ರಗತಿ ಕಂಡು ಬರುತ್ತದೆ.

ಇನ್ನು ಪರೀಕ್ಷೆಗಳು ಸಮೀಪಿಸಿದಾಗ ವಿದ್ಯಾರ್ಥಿ ಗಳು ಪರೀಕ್ಷೆಯ ಬಗ್ಗೆ ಭಯ ಪಡುವ ಅಗತ್ಯವಿಲ್ಲ. ಪರೀಕ್ಷೆಗಳಿರುವುದು ನಮ್ಮ ಕಲಿಕೆಯ ಜ್ಞಾನ ಮಟ್ಟವನ್ನು ಅಳೆಯುವ ಮಾಪನಗಳೇ ವಿನಃ ನಮ್ಮ ವೈಯಕ್ತಿಕ ಪ್ರತಿಭೆಗಳನ್ನು, ಕೌಶಲ್ಯಗಳನ್ನು ಅಳೆ ಯುವ ಮಾನದಂಡಗಳಲ್ಲ ಎಂಬುದನ್ನು ಅರಿತಿರ ಬೇಕು. ಪರೀಕ್ಷಾ ಕೇಂದ್ರಗಳಿಗೆ ತೆರಳುವ ಮುನ್ನ ಪರೀಕ್ಷೆಯ ಭಯವನ್ನು ಮರೆತು ಹೋಗಬೇಕು.

ಪ್ರಶ್ನೆ ಪತ್ರಿಕೆಗಳನ್ನು ಸಾವಧಾನವಾಗಿ ನೋಡಿಕೊಂಡು ಗೊತ್ತಿರುವ ಪ್ರಶ್ನೆಗಳಿಗೆ ಮೊದಲು ನಿರ್ದಿಷ್ಟ ಹಾಗೂ ನಿಖರವಾದ ಉತ್ತರವನ್ನು ಸ್ಪಷ್ಟವಾಗಿ ಬರೆಯುವ ಮನೋಭಾವ ರೂಢಿಸಿಕೊಳ್ಳಿ. ನಕಲು ಮಾಡುವ ಆಲೋಚನೆ ಹೊಂದದೆ, ಗೊತ್ತಿರುವುದನ್ನು ಪ್ರಾಮಾಣಿಕವಾಗಿ ಬರೆಯಿರಿ. ಪರೀಕ್ಷೆಯಲ್ಲಿ ಏನಾದರೂ ಕಡಿಮೆ ಅಂಕ ಬಂದರೆ ಅಥವಾ ಅನುತ್ತೀರ್ಣಗೊಳ್ಳುವ ಪೂರ್ವಾಗ್ರಹ ಪೀಡಿತ ಮನೋಭಾವದಿಂದ ಹೊರಬಂದು ಆತ್ಮಸ್ಥೈರ್ಯದಿಂದ ಪರೀಕ್ಷೆಯನ್ನು ಎದುರಿಸಿ. ಪರೀಕ್ಷೆಯೆಂದರೆ ಯುದ್ಧಭೂಮಿಯಲ್ಲ, ನಮ್ಮ ಜ್ಞಾನ ಮಟ್ಟವನ್ನು ಪರೀಕ್ಷಿಸುವ ಪ್ರಯೋಗಾಲಯವಷ್ಟೇ ಎಂದು ಭಾವಿಸಿರಿ. ಪೋಷಕರ ಹಾಗೂ ಶಿಕ್ಷಕರ ಭರವಸೆಗಳನ್ನು ಹುಸಿಗೊಳಿಸದೆ ಸಾಕಾರ ಮಾಡೇ ಮಾಡ್ತೀನಿ ಎಂಬ ದೃಢ  ಸಂಕಲ್ಪವನ್ನು ರೂಢಿಸಿಕೊಂಡರೆ ಸಾಕು ಪರೀಕ್ಷೆ ಭಯದ ಪೆಡಂಭೂತ ದೂರವಾಗಿ ಹೋಗುತ್ತದೆ.

ಶಾಲೆಯಲ್ಲಿ ಶಿಕ್ಷಕರು ನೀಡಿರುವ ಸಲಹೆ ಸೂಚನೆಗಳನ್ನು ಚಾಚೂ ತಪ್ಪದೇ ಪಾಲಿಸಿರಿ. ಪರೀಕ್ಷೆ ಮುಗಿಯುವರೆಗೂ ಸಾಮಾಜಿಕ ಜಾಲ ತಾಣಗಳಿಂದ, ಮನಸ್ಸನ್ನು ವಿಚಲಿತಗೊಳಿಸುವ ಮೊಬೈಲು, ಆರೋಗ್ಯ ಹದಗೆಡಿಸುವ ತಿಂಡಿ ತಿನಿಸುಗಳಿಂದ ದೂರವಿರಿ. ಪರೀಕ್ಷೆ ಸಮಯದಲ್ಲಿ ಪೋಷಕರೊಂದಿಗೆ ವಾಹನದಲ್ಲಿ ಪರೀಕ್ಷೆ ಕೇಂದ್ರಗಳಿಗೆ ಹೋಗಿ ಬನ್ನಿರಿ. ಪರೀಕ್ಷೆ ಮುಗಿದ ನಂತರ ಆ ದಿನದ ಪ್ರಶ್ನೆ ಪತ್ರಿಕೆಯ ಬಗ್ಗೆ ಚಿಂತಿಸದೆ, ಮುಂದಿನ ವಿಷಯದ ಬಗ್ಗೆ ಹೆಚ್ಚು ಗಮನ ನೀಡಿರಿ. ಪ್ರಶ್ನೆ ಪತ್ರಿಕೆಗಳ ಸೋರಿಕೆಯ ವದಂತಿಗಳ ಬಗ್ಗೆ ಗಮನ ನೀಡದಿರಿ. ಪರೀಕ್ಷಾ ಕೇಂದ್ರಗಳಿಗೆ ತೆರಳುವ ಮುನ್ನ ತಂದೆ-ತಾಯಿಯರ ಆಶೀರ್ವಾದ, ದೇವರ ದರ್ಶನ ಮಾಡಿಕೊಂಡು, ಪರೀಕ್ಷೆಯ ಸಮಯ ಆರಂಭವಾಗುವ ಮುಂಚೆಯೇ ಹೋಗಿರಿ. ಪರೀಕ್ಷೆ ಕೊಠಡಿಯಲ್ಲಿ ಏಕಾಗ್ರತೆಯಿಂದ ಪ್ರಶ್ನೆಗಳನ್ನು ಅರ್ಥ ಮಾಡಿಕೊಂಡು ಸೂಕ್ತವಾದ ಹಾಗೂ ನಿರ್ದಿಷ್ಟ ಉತ್ತರ ಬರೆಯಿರಿ. ಪ್ರಮುಖ ಮುಖ್ಯಾಂಶ ಗಳಿಗೆ ಅಡಿಗೆರೆ ಹಾಕಿರಿ. ಬರೆದಾದ ಮೇಲೆ ಉತ್ತರಗಳನ್ನು ಒಮ್ಮೆ ಗಮನಿಸಿರಿ. ಪರೀಕ್ಷೆ ಕೇಂದ್ರಗಳಲ್ಲಿ ಏನಾದರೂ ಅಕ್ರಮಗಳು ಕಂಡು ಬಂದರೆ ಪೋಷಕರು ಹಾಗೂ ಶಿಕ್ಷಕರ ಗಮನಕ್ಕೆ ತನ್ನಿರಿ.

ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ ಬರೆಯಲು ಸಿದ್ಧವಾಗಿರುವ ಎಲ್ಲಾ ವಿದ್ಯಾರ್ಥಿ ಮಿತ್ರರೇ ಪರೀಕ್ಷೆ ಭಯ ಬಿಟ್ಟು, ಜೀವನದ ಮುಂದಿನ ಹಂತಕ್ಕೆ ಪರೀಕ್ಷೆಗಳು ಸೂಕ್ತ ವೇದಿಕೆಯೆಂದು ಭಾವಿಸಿ, ಸಿಕ್ಕಿರುವ ವೇದಿಕೆಯನ್ನು ಸಮರ್ಪಕವಾಗಿ ಬಳಸಿ ಕೊಂಡರೆ ವಿದ್ಯಾರ್ಥಿ ಜೀವನವು ಸಾರ್ಥಕತೆಯನ್ನು ಪಡೆಯುತ್ತದೆಂಬುದನ್ನು ಮರೆಯದಿರಿ.

ಅಂತಿಮವಾಗಿ ವಿದ್ಯಾರ್ಥಿ ಮಿತ್ರರೇ ಪರೀಕ್ಷೆಗಳ ಫಲಿತಾಂಶ ಬರುವ ದಿನದಂದು ಭಾವನಾತ್ಮಕ ಒತ್ತಡಗಳಿಗೆ ಒಳಗಾಗದಿರಿ. ಪರೀಕ್ಷೆಯೆಂದ ಮೇಲೆ ಉತ್ತೀರ್ಣ ಹಾಗೂ ಅನುತ್ತೀರ್ಣ ಸಹಜ. ಆಕಸ್ಮಾತ್ ಕಡಿಮೆ ಅಂಕಗಳು ಬಂದರೆ ಅಥವಾ ಅನುತ್ತೀರ್ಣಗೊಂಡಾಗ ಪೋಷಕರು, ಬಂಧು ಬಾಂಧವರು, ಸ್ನೇಹಿತರು, ಶಿಕ್ಷಕರು ಏನಾದರೂ ಅನ್ನುವರು, ಅವಮಾನಿಸುವರೆಂದು ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆಯಂತಹ ಕೆಟ್ಟ ಆಲೋಚನೆ ಮಾಡದಿರಿ. ಎಷ್ಟೋ ಮಹನೀಯರು  ಮೊದಲ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡರೂ ಮುಂದೆ ಮರು ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು ಜೀವನದಲ್ಲಿ ಮಹಾನ್ ಸಾಧನೆ  ಮಾಡಿರುವರೆಂಬುದನ್ನು  ಮರೆಯದಿರಿ.

ಈಸಬೇಕು ಇದ್ದು ಜೈಸಬೇಕು. ನಿಮ್ಮೆಲ್ಲರ ಕನ ಸುಗಳು ಸಾಕಾರಗೊಳ್ಳುವ ಸಮಯವಿದು. ಶುಭ ಹಾರೈಕೆಗಳು ನಿಮಗೆ.. ಒಳ್ಳೆಯದಾಗಲಿ ನಿಮಗೆ.


ವಿದ್ಯಾರ್ಥಿ ಮಿತ್ರರಿಗೊಂದು ಪತ್ರ... - Janathavani– ಶಿವಮೂರ್ತಿ ಹೆಚ್., ಕನ್ನಡ ಶಿಕ್ಷಕರು,  ಶ್ರೀ ತರಳಬಾಳು ಸೆಂಟ್ರಲ್ ಸ್ಕೂಲ್, ಅನುಭವ ಮಂಟಪ, ದಾವಣಗೆರೆ. 95914 17815.

error: Content is protected !!