ಜೋಕುಮಾರ ಬಂದಾನವ್ವ ದವಸ-ಧಾನ್ಯ ನೀಡವ್ವ

ಹಳ್ಳಿಯಲ್ಲಿ ತರ್ಲೆ ಮಾಡೋ ಹುಡುಗರಿಗೆ ”ಲೇ ಜೋಕುಮಾರ ಮಾಡ್ದಂಗೆ ಮಾಡ್ತಿಯಲ್ಲೋ” ಎನ್ನುವ  ಮಾತನ್ನು ನೀವು ಕೇಳಿರಬಹುದು. ಆ ಮಾತಿನಲ್ಲಿರುವ ಜೋಕುಮಾರ ಯಾರು? ಅವನ ಹಿನ್ನೆಲೆ ಏನು? ಎಂಬುದರ ಬಗ್ಗೆ ಎಷ್ಟೋ ಜನಕ್ಕೆ ಗೊತ್ತೇ ಇಲ್ಲ. ಗಣೇಶ ಹಬ್ಬ ಮುಗಿದು ಮೂರನೇ ದಿನದಂದು ವಿಸರ್ಜನೆಯಾದ ರಾತ್ರಿ ಜೋಕುಮಾರನನ್ನು ಪ್ರತಿಷ್ಠಾಪಿಸಲಾಗುತ್ತದೆ. ಗಣೇಶನನ್ನು ಮೂರನೇ ದಿನ ವಿಸರ್ಜಿಸಿದ ನಂತರ ಗಣೇಶ ಶಿವನ ಬಳಿ ಹೋಗುತ್ತಾನೆ, ನಂತರ ಜೋಕುಮಾರ ಭೂಮಿಗೆ ಬಂದು ಮಳೆ ಸುರಿಸುತ್ತಾನೆ ಎನ್ನುವುದು ಹಳ್ಳಿ ಜನರ ನಂಬಿಕೆ. 

ಗಣೇಶನನ್ನು ಪ್ರತಿಷ್ಠಾಪಿಸಿ ಮೂರು ದಿನವಾದ ಮೇಲೆ ವಿಸರ್ಜಿಸಿದ ರಾತ್ರಿ ಊರ ಬಾರಿಕರ (ಗಂಗಾಮತಸ್ಥ-ಬೆಸ್ತ)  ಮಹಿಳೆಯರು ಸೇರಿ ಜೋಕುಮಾರನನ್ನು ಎಣ್ಣೆ ಮತ್ತು ಹುತ್ತದ ಮಣ್ಣಿನಿಂದ ಪ್ರತಿಷ್ಠಾಪಿಸಿ, ಒಂದು ಬಿದಿರಿನ ಪುಟ್ಟಿಯಲ್ಲಿ ಬೇವಿನ ಎಲೆಗಳ ಮಧ್ಯ ಇಟ್ಟು, ಬಾಯಲ್ಲಿ ಬೆಣ್ಣೆ ಹುಂಡಿಯನ್ನು ತುರುಕುತ್ತಾರೆ. ನಂತರ ಬಾರಿಕರ ಐದು ಜನ ಮಹಿಳೆಯರು ಏಳು ದಿವಸ ಊರು ಊರು ತಿರುಗಿ ದವಸ-ಧಾನ್ಯ ಸಂಗ್ರಹಿಸಿ ಪ್ರತಿ ದಿನ ಊರು ತಲುಪಿದ ಮೇಲೆ ಸಂಜೆ ಊರಿನಲ್ಲಿರುವ ಆ ಜನಾಂಗದವರು ಮಾತ್ರ ಒಂದೆಡೆ ಸೇರಿ ಎಲ್ಲರೂ ಸಮ ಪಾಲಾಗಿ ಹಂಚಿಕೊಳ್ಳುತ್ತಾರೆ.

ಮಳೆ ಬಾರದೆ ಬರ ಬಡಿದು ಬೆಳೆ ನಾಶವಾಗುತ್ತಿರುವ ಹೊತ್ತಿನಲ್ಲಿ ಮಳೆರಾಯನ ಕರೆಯಲು ಹಳ್ಳಿಗಳಲ್ಲಿ ಪುರಾತನ ಹಾಗು ಸಾಂಪ್ರದಾಯಿಕವಾಗಿ ಜೋಕುಮಾರನನ್ನು ಪ್ರತಿಷ್ಠಾಪಿಸುವ ಪದ್ದತಿಗಳಲ್ಲಿ ಒಂದು ಇನ್ನೂ ಆಚರಣೆಯಲ್ಲಿದೆ.

ಹಾಗೆಯೇ ದಾವಣಗೆರೆ ತಾಲ್ಲೂಕಿನ ಕಕ್ಕರಗೊಳ್ಳ ಗ್ರಾಮದಲ್ಲಿ ಈ ಪದ್ಧತಿ ಇನ್ನೂ ಜೀವಂತವಾಗಿರುವುದು ಖುಷಿಯ ಸಂಗತಿ. ಕಕ್ಕರಗೊಳ್ಳ ಗ್ರಾಮದ ಬಾರಿಕರ ಕುಟುಂಬದವರು ಮನೆಗೊಬ್ಬ ಮಹಿಳೆ ಎಂದು ಐದು ಜನ ಸೇರಿಕೊಂಡು ಈ ಜೋಕುಮಾರನನ್ನು ಹೊಳೆಯಿಂದ ತಂದು ಹುತ್ತದ ಮಣ್ಣಿನಿಂದ ಪ್ರತಿಷ್ಠಾಪಿಸಿ, ಕಕ್ಕರಗೊಳ್ಳ ಸುತ್ತಮುತ್ತ ಇರುವ ಕೋಡಿಹಳ್ಳಿ, ಕೊಂಡಜ್ಜಿ, ಆವರಗೊಳ್ಳ, ಯರಗುಂಟೆ, ಅಮರಾವತಿ, ದುಗ್ಗತ್ತಿ ಮುಂತಾದ ಹಳ್ಳಿಗಳಲ್ಲಿ ಸಂಚರಿಸಿ ಪ್ರತಿ ಮನೆಯಲ್ಲೂ ಎಣ್ಣೆ, ಗೋಧಿ, ಜೋಳ, ಅಕ್ಕಿ, ಎಲೆ, ಕಾಳು-ಕಡಿ, ಅಡಿಕೆ, ಉಪ್ಪು, ಮೆಣಸಿನ ಕಾಯಿ, ಟೊಮ್ಯಾಟೋ ಹೀಗೆ ಪ್ರತಿಯೊಂದು ದವಸ-ಧಾನ್ಯಗಳನ್ನು ಸಂಗ್ರಹಿಸಿಕೊಂಡು ಬರುತ್ತಾರೆ. ಜೋಕುಮಾರನನ್ನು ಹೊತ್ತು ತಿರುಗುವ ಮಹಿಳೆಯರು ಸುಮಾರು 30 ಜನಪದ ಹಾಡುಗಳನ್ನು ಹಾಡುತ್ತಾರೆ.


– ಸುರೇಶ್ ಕಕ್ಕರಗೊಳ್ಳ

error: Content is protected !!