ಯುವ ಶಿಕ್ಷಣಕ್ಕೆ ಅಂಬೇಡ್ಕರ್ ಆದರ್ಶವಾಗಲಿ

ಡಾ. ಬಿ. ಆರ್. ಅಂಬೇಡ್ಕರ್ ಎಂದಾಕ್ಷಣ ಎಲ್ಲರ ಮನಸ್ಸಿನಲ್ಲಿ ಹಾಗೂ ತಲೆಯಲ್ಲಿ ಬರುವ ಪದಗಳೆಂದರೆ ಸಂವಿಧಾನಶಿಲ್ಪಿ, ವಿಶ್ವ ಜ್ಞಾನಿ ಮಹಾನಾಯಕ ಬುದ್ಧಿವಂತ ಪುಸ್ತಕ ಪ್ರೇಮಿ ಜ್ಞಾನ ಭಂಡಾರ ಗ್ರಂಥಾಲಯ ಹೀಗೆ ಶಿಕ್ಷಣ, ಕಲಿಕೆಗೆ ಸಂಬಂಧಿಸಿದ ಪದಗಳು ಥಟ್ಟನೆ ಬರುತ್ತವೆ. ನಮ್ಮ ದೇಶದಲ್ಲಿ ಪ್ರತಿಯೊಂದು ನಿರ್ಧಾರಗಳು ಚುನಾವಣೆ ಆಧಾರಿತವಾಗಿವೆ. ಚುನಾವಣೆಯಲ್ಲಿ ಗೆಲ್ಲುವುದೆ ಮುಖ್ಯವಾಗಿರುವ ಈ ಸಂದರ್ಭದಲ್ಲಿ ದೇಶದಲ್ಲಿರುವ ಜ್ಞಾನಿಗಳು ವಿದ್ಯಾವಂತರು ವೈಚಾರಿಕ ಹಾಗೂ ವೈಜ್ಞಾನಿಕ ನಿಲುವಿನಿಂದ ಯೋಚಿಸದೆ ಜಾತಿ ಧರ್ಮ ಪಕ್ಷ ಲಿಂಗ ಎಂಬ ವಿವಿಧ ಸ್ತರಗಳಲ್ಲಿ ಯೋಚಿಸುತ್ತಾ ಇದ್ದಾರೆ.  ಇಂತಹ ಸಂದರ್ಭದಲ್ಲಿ ಅಂಬೇಡ್ಕರ್ ರಚಿಸಿದ ಸಂವಿಧಾನದ ಓದು ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಅವಶ್ಯಕ ಅದರ ಓದಿನಿಂದ ದೇಶದಲ್ಲಿರುವ ಸಮಸ್ಯೆಗಳನ್ನು ಹೋಗಲಾಡಿಸಲು ಸಾಧ್ಯ ಎಂಬುದನ್ನು ಕಾಲೇಜು ವಿದ್ಯಾರ್ಥಿಗಳು ಅರಿತುಕೊಳ್ಳಬೇಕಾಗಿದೆ.

ಭೀಮ್ ರಾವ್ ರವರು ಭಾರತದ ಸಮಾಜದ ಸುಧಾರಕ, ಭಾರತದಲ್ಲಿರುವ ಪ್ರತಿಯೊಂದು ಗುಲಾಮಗಿರಿ ಪದ್ಧತಿಯನ್ನು ತೊಡೆದು ಹಾಕುವಲ್ಲಿ ಪ್ರಯತ್ನ ಉತ್ತರ ಕಂಡುಕೊಂಡ ನಾಯಕ ಅವರು ನಂಬಿದ್ದು ಶಿಕ್ಷಣ. ಶಿಕ್ಷಣ ಒಂದಿದ್ದರೆ ದೇಶ ಸಮಾಜ ವ್ಯಕ್ತಿ ಈ ಮೂರು ಸುಧಾರಣೆಯಾಗುತ್ತದೆ. ಶಿಕ್ಷಣ ಪ್ರತಿಯೊಂದನ್ನು ಸುಧಾರಿಸುತ್ತದೆ ಎಂದು ನಂಬಿದ ವ್ಯಕ್ತಿ.  

ದೇಶದ ಪ್ರತಿಯೊಬ್ಬ ಪ್ರಜೆಯೂ ಸಾಕ್ಷರತೆಯನ್ನು ಪಡೆಯಬೇಕು. ಶಿಕ್ಷಣವು ತಮ್ಮ ಸ್ವಾತಂತ್ರ್ಯವನ್ನು ರಕ್ಷಿಸುತ್ತದೆ ಹಾಗೆ ಸಮಾಜದಲ್ಲಿ ತುಳಿತಕ್ಕೊಳಗಾದವರನ್ನು ಮೇಲೆತ್ತಲು ಹಿಂದಿರುವವರು ಮುಂದೆ ಬರಲು ಇರುವ ಅತ್ಯಂತ ಅದ್ಭುತವಾದ ಸಾಧನವಾಗಿದೆ. ಶಿಕ್ಷಣದಿಂದ ಪ್ರತಿಯೊಬ್ಬ ವ್ಯಕ್ತಿಗೆ ಜೀವನದಲ್ಲಿ ಉತ್ತಮವಾದ ಬೆಳಕನ್ನು ಕಾಣಬಹುದು. ಶಿಕ್ಷಣವು ಮನುಷ್ಯನಲ್ಲಿ ವ್ಯಕ್ತಿತ್ವ ಬುದ್ಧಿವಂತಿಕೆ ದೂರ ದೃಷ್ಟಿಕೋನ ಸಾಮಾಜಿಕ ಸಂಬಂಧಗಳು ಮಾನವತೆ ಮೌಲ್ಯ ಎಲ್ಲವನ್ನು ಬೆಳೆಸುತ್ತದೆ.  ಶಿಕ್ಷಣವನ್ನು ಬರಿ ಜ್ಞಾನಕ್ಕಾಗಿ ಪಡೆಯಬರದು, ಇದರಿಂದ ಕೌಶಲ್ಯ ಅಭಿವೃದ್ಧಿ ವಿನಯ, ವಿವೇಕ, ಸಂಸ್ಕೃತಿ, ಎಲ್ಲವನ್ನೂ ಕಲಿಯಬಹುದು. 

ಶಿಕ್ಷಣದ ಪಡೆದ ವ್ಯಕ್ತಿ ಸಮಾಜದಲ್ಲಿ ಸಾಮಾಜಿಕವಾಗಿ ರಾಜಕೀಯವಾಗಿ ಆರ್ಥಿಕವಾಗಿ ಹಾಗೂ ನೈತಿಕವಾಗಿ ಬೆಳೆಯಲು ಸಾಧ್ಯ ಇದರಿಂದ ಸದೃಢ ಸಮಾಜ ಉತ್ತಮ ರಾಷ್ಟ್ರ ನಿರ್ಮಾಣ ಆಗುತ್ತದೆ. ಅಂಬೇಡ್ಕರ್ ದೃಷ್ಟಿಯಲ್ಲಿ ಶಿಕ್ಷಣ ಎಂದರೆ ಒಬ್ಬ ವ್ಯಕ್ತಿ ಸಮಾಜದಲ್ಲಿ ಉತ್ತಮ ಸ್ಥಾನವನ್ನು ಗಳಿಸಿ ಆರ್ಥಿಕ ಸುಧಾರಣೆಯಲ್ಲಿ ರಾಜಕೀಯ ಸ್ವಾತಂತ್ರ್ಯವನ್ನು ಪಡೆದು ಸಮಾಜಕ್ಕೆ ಕೊಡುಗೆಯನ್ನು ನೀಡುವಂತೆ ಮಾಡುವ ಶಕ್ತಿ ಸಾಧನವೇ ಶಿಕ್ಷಣ. ಆಸ್ತಿ ಗಳಿಸಲಷ್ಟೇ ಶಿಕ್ಷಣವನ್ನು ಬಳಸದೆ ಸಮಾಜದ ಮತ್ತು ಇತರರ ಹಿತಕ್ಕಾಗಿ ಸುಧಾರಣೆಗಾಗಿ ಶಿಕ್ಷಣವನ್ನು ಬಳಸಿದರೆ ಶಿಕ್ಷಣದ ಮಹತ್ವ ಹೆಚ್ಚುತ್ತದೆ.

ಇಂದಿನ ಯುವ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚು ಮಹತ್ವವನ್ನು ನೀಡದೆ ಇತರ ಕೆಲಸಗಳಿಗೆ ಹೆಚ್ಚು ಸಮಯವನ್ನು ಮೀಸಲಿಟ್ಟು ತಮ್ಮ ಅತ್ಯಂತ ಅಮೂಲ್ಯವಾದ ಜೀವನವನ್ನು    ಯೌವ್ವನದ ಸಮಯದಲ್ಲಿ  ಹಾಳುಮಾಡಿಕೊಳ್ಳುತ್ತಿದ್ದಾರೆ. ಯುವಕರಲ್ಲಿ ಶಿಕ್ಷಣ ಎಂದರೆ ಕಾಲೇಜಿಗೆ ಹೋಗಿ ಬಂದು ಪರೀಕ್ಷೆಯನ್ನು ಬರೆದು ಫಲಿತಾಂಶವನ್ನು ಮೊಬೈಲ್ ಮೂಲಕ ನೋಡಿ ಇತರರಿಗೆ ಶೇರ್ ಮಾಡಿದರೆ ಅಲ್ಲಿಗೆ ಕಾಲೇಜು ಶಿಕ್ಷಣ ಮುಕ್ತಾಯವಾಯಿತು ಎಂಬ ನಂಬಿಕೆ. ಶಿಕ್ಷಣದ ಉದ್ದೇಶ ಪರಿಪೂರ್ಣವಾಗಬೇಕಾದರೆ ಪ್ರತಿಯೊಬ್ಬ ಯುವಕರು ಅಥವಾ ವಿದ್ಯಾರ್ಥಿಗಳು ತಮ್ಮ ಕಲಿಕೆ ಸಂದರ್ಭದಲ್ಲಿ ಪಠ್ಯಗಳ ಜೊತೆಗೆ ದೇಶ ಸಮಾಜ ವ್ಯಕ್ತಿಗೆ ಇತರೆ ವಿಷಯಗಳು ಕುರಿತು ಕೂಡ ಹೆಚ್ಚೆಚ್ಚು ಜ್ಞಾನವನ್ನು ಸಂಪಾದಿಸಬೇಕು ಬೆಳೆಸಿಕೊಳ್ಳಬೇಕು ಅಂಬೇಡ್ಕರ್ ಜೀವನ   ಅವರಿಗೆ ಆದರ್ಶವಾಗಬೇಕು. ಅವರಲ್ಲಿದ್ದ ಪುಸ್ತಕ ಪ್ರೇಮ ಓದಿನ ಹುಚ್ಚು ತಿಳಿದುಕೊಳ್ಳುವ ಛಲ ಇವುಗಳೆಲ್ಲವನ್ನು ವಿದ್ಯಾರ್ಥಿಗಳು ತಿಳಿದುಕೊಂಡು ಅವರಂತೆ ಹೆಚ್ಚು ಜ್ಞಾನವಂತರೆ ಆದರೆ ದೇಶವು ಉತ್ತಮವಾಗಿ ಸದೃಢವಾಗಿ ಬೆಳೆಯಲು ಸಹಾಯವಾಗುತ್ತದೆ. 

ಇಂದಿನ ಯುವ ಪೀಳಿಗೆ ಅಂಬೇಡ್ಕರರ ಜೀವನವನ್ನು ಆದರ್ಶವಾಗಿ ತೆಗೆದುಕೊಳ್ಳಬೇಕು ಅವರು ಜ್ಞಾನಾರ್ಜನೆಗೆ ತೋರಿಸುತ್ತಿದ್ದ ಆಸಕ್ತಿ ಅವರು ಇರುವ ಸಂಪನ್ಮೂಲಗಳನ್ನು ಬಳಸಿಕೊಂಡು ಸಮಾಜದ ಹಾಗೂ ದೇಶದ ಬೆಳವಣಿಗೆಗೆ ಶಿಕ್ಷಣವನ್ನು ಉಪಯೋಗಿಸಿಕೊಂಡ ಬಗ್ಗೆ ಹಾಗೂ ಅವರ ದೇಶಪ್ರೇಮಕ್ಕೆ ತೋರಿಸಿದರು ದೇಶದ ಆರ್ಥಿಕ ವ್ಯವಸ್ಥೆಗೆ ನೀಡಿದ ಕೊಡುಗೆ ಇವೆಲ್ಲವೂ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಹಾಗೂ  ಶಿಕ್ಷಣದ ಬಗ್ಗೆ ಅವರಿಗಿದ್ದ ಕಾಳಜಿ ಪ್ರತಿಯೊಬ್ಬರಿಗೂ ಆದರ್ಶವಾಗಬೇಕು ಓದುಬರಹ, ಶಿಕ್ಷಣ, ಜ್ಞಾನ ಎಂದಾಗ ಥಟ್ಟನೆ ಅಂಬೇಡ್ಕರ್ ನೆನಪಾಗಬೇಕು.

ಪ್ರತಿಯೊಬ್ಬ ವಿದ್ಯಾರ್ಥಿಯು ಶಿಕ್ಷಣದ ಜೊತೆಗೆ ಕೌಶಲ್ಯವನ್ನು ಕೂಡ ಬೆಳೆಸಿಕೊಳ್ಳುವುದು ಮುಖ್ಯ ಕೌಶಲ್ಯವಿಲ್ಲದ ಶಿಕ್ಷಣ ಯಾವುದಕ್ಕೂ ಪ್ರಯೋಜನವಿಲ್ಲ ಎಂಬ ಸಂದರ್ಭ ಉಂಟಾಗಿದೆ. ಬರೀ ಕೌಶಲ್ಯವಿದ್ದರೆ ಜೀವನ ಸಾಗಿಸಬಹುದು. ಆದರೆ ಕೌಶಲ್ಯದೊಂದಿಗೆ ಶಿಕ್ಷಣವಿದ್ದರೆ ಜೀವನದಲ್ಲಿ ಎತ್ತರಕ್ಕೆ ಹೋಗಬಹುದು, ಬಹು ಎತ್ತರದ ಅದ್ಭುತವನ್ನು ಸಾಧಿಸಬಹುದು. ಶಿಕ್ಷಣವಿದ್ದರೆ ಕೌಶಲ್ಯದ ಉಪಯೋಗ ಹೆಚ್ಚು ಹಾಗಾಗಿ ಕಲಿಕೆ ನಿರಂತರ ಕಲಿಯುವ ಮನಸ್ಸು ಪ್ರತಿಯೊಬ್ಬರು ಮಾಡಬೇಕು ಮನಸ್ಸು ಮಾಡಲು ಒಂದು ಸ್ಪೂರ್ತಿ ಆದರ್ಶ ಇರಬೇಕು, ಆದರ್ಶ ಸ್ಫೂರ್ತಿಯನ್ನು ನಾವು ಅಂಬೇಡ್ಕರರ ರೂಪದಲ್ಲಿ ತೆಗೆದುಕೊಂಡು ಪ್ರತಿಯೊಬ್ಬ ವಿದ್ಯಾರ್ಥಿಗಳು ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡುವಂತೆ ಶಿಕ್ಷಣವನ್ನು ಪಡೆಯುವಂತಾಗಲಿ.


ವೆಂಕಟೇಶ್ ಬಾಬು ಎಸ್.
ಸಹಾಯಕ ಪ್ರಾಧ್ಯಾಪಕರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದಾವಣಗೆರೆ .
[email protected]

error: Content is protected !!