ಮಹಾವೀರನೆಂಬ ಮಹಾಪುರುಷ…

ಅಸತ್ಯಕ್ಕೆ ಆ ಕ್ಷಣಕ್ಕೆ ಗೆಲ್ಲುವ ಶಕ್ತಿಯಿದೆ. ಆದರೆ ಸತ್ಯವೊಂದೇ ನಿತ್ಯ ಭಯವಿಲ್ಲದೆ ಬದುಕು ನಡೆಸಲು ಇರುವ ಸಾಧನ ಅಸ್ತೇಯ ಅಂದರೆ ಕಳ್ಳತನ. ನಿನ್ನದೇ ನಿನ್ನ ಬಳಿ ಉಳಿಯಲಾರದು, ಪರರ ಗಂಟು ಉಳಿಯಬಹುದೇ.

ಸಮಾಜ ಸುಧಾರಣೆಯಾಗಬೇಕು, ಜನರಲ್ಲಿ ಮೌಢ್ಯ ನಿವಾರಣೆಯಾಗದೆ ಅವರ ಆತ್ಮ ಕಲ್ಯಾಣ ಸಾಧ್ಯವಿಲ್ಲ. `ಅಹಿಂಸಾ ಪರಮೋ ಧರ್ಮಃ’ ಎಂಬ ಜೈನ ಧರ್ಮದ ಮೂಲ ಮಂತ್ರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ತ್ಯಾಗ ಪ್ರಧಾನವಾದ ಜೈನ ಧರ್ಮದಲ್ಲಿ ಇಪ್ಪತ್ನಾಲ್ಕನೇ ತೀರ್ಥಂಕರಾಗಿ ಮಹಾವೀರ ಜನಿಸುತ್ತಾರೆ.

ತನ್ನ ಹಿಂದಿನ ಇಪ್ಪತ್ಮೂರು ತೀರ್ಥಂಕರರುಗಳೂ ಪಾಲಿಸಿಕೊಂಡು ಬಂದಂತಹ ಆಹಿಂಸೆ, ತ್ಯಾಗ ಮೂಲವಾದ ಸಂಪ್ರದಾಯಕ್ಕೆ ಸ್ಪಷ್ಟ ನಿಲುವು, ಸಮಕಾಲೀನ ವಿಚಾರಗಳನ್ನು ಅಳವಡಿಸುವುದರ ಮೂಲಕ ಜನ ಸಾಮಾನ್ಯರನ್ನು ಜೈನಧರ್ಮಕ್ಕೆ ಆಕರ್ಷಿಸಿದ ಕೀರ್ತಿ ಮಹಾವೀರರಿಗೆ ಸಲ್ಲಬೇಕು.

ವರ್ಧಮಾನ, ಸನ್ಮತಿ, ವೀರ, ಅತೀವೀರ ಎಂದೆಲ್ಲಾ ಹೆಸರುಗಳಿಂದ ಗುರುತಿಸಲ್ಪಡುವ ಮಹಾವೀರ ಹುಟ್ಟಿದ್ದು ಕ್ರಿ.ಪೂ. 599 ರಲ್ಲಿ, ಈಗಿನ ಬಿಹಾರದ ಬಸಾಥ (ಇದಕ್ಕೆ ವೈಶಾಲಿ ಎಂದೂ ಹೆಸರಿತ್ತು) ಈ ನಗರದ ದೊರೆ ಸಿದ್ದಾರ್ಥ ಹಾಗೂ ತ್ರಿಶಲಾ ದೇವಿಯ ಮಗುವಾಗಿ ಜನಿಸಿದ, ಹುಟ್ಟಿದಾಗ `ವರ್ಧಮಾನ` ಎಂದೇ ನಾಮಕರಣ ಮಾಡಲಾಗಿತ್ತು. ರಾಜನ ಮಗುವಾಗಿದ್ದರೂ ವೈಭೋಗದಲ್ಲಿ ಆಸಕ್ತಿ ವಹಿಸದೇ ತನ್ನ ಧರ್ಮದ ಬಗ್ಗೆ ತಿಳಿದುಕೊಳ್ಳಲಾರಂಭಿಸಿದ, ಸಂಸಾರ ಬಂಧನ ಎನಿಸಲು ಪ್ರಾರಂಭವಾದ ಕೂಡಲೇ ತನ್ನ 30ನೇ ವಯಸ್ಸಿನಲ್ಲಿ ಮನೆ ತೊರೆದು ಸುತ್ತಮುತ್ತಲಿನ ಆಗು ಹೋಗು ಗಳ ಕಡೆ ಗಮನಹರಿಸಿ ದೇಶ ಸಂಚಾರ ಕೈಗೊಂಡರು.

ತನ್ನ ತಂದೆ ಸಿದ್ದಾರ್ಥ ಪ್ರಜಾಪ್ರಭುತ್ವದ ತಳಹದಿಯ ಮೂಲಕ ಆರಿಸಿ ಬಂದಿದ್ದನ್ನು ನೋಡಿದ್ದ ಮಹಾವೀರ, ಸ್ವತಂತ್ರ್ಯದ ಕಲ್ಪನೆಯನ್ನು ಅಂದೇ ಮನಗಂಡಿದ್ದನು. ತಾನು ಸ್ವಾತಂತ್ರನಾಗುವುದು ಎಂದರೆ ತನ್ನ ವಸ್ತ್ರವನ್ನು ತ್ಯಾಗ ಮಾಡಿದರು. ದಿಗಂಬರತ್ವದ ಮಹತ್ವ ಬಯಲಾಗುವುದು. ಬೆತ್ತಲಾಗುವುದೇನೆಂದರೆ ಕಿಂಚಿತ್ತೂ ತನ್ನದಲ್ಲದ ಭಾವನೆಯ ಮೊದಲು ತಿಳಿದಾದರೆ, ತನ್ನ ದೇಹದ ಮೇಲಿನ ಮಹತ್ವವನ್ನು ಬಿಟ್ಟು, ಒಳಗಿನ ಆತ್ಮದ ಬಗ್ಗೆ ಸದಾ ಚಿಂತಿಸುವುದು. ಎರಡನೆಯದು ಮಲ, ಮೂತ್ರ, ಕ್ರಿಮಿ-ಕೀಟಗಳ ಈ ದೇಹಕ್ಕೆ ನಿರಂತರ ಅಲಂಕರಿಸುವ ನಾವು ಒಳಗಿನ ಸ್ವಚ್ಚತೆಯ ಅರಿವು ಅರಿಯದಾಗಿರುತ್ತೇವೆ ಎಂಬುದನ್ನು ಮನಗಂಡು, ಮಹಾವೀರರು ತನ್ನನ್ನು ತಾನು ತಿಳಿದುಕೊಳ್ಳಲು ಸುಮಾರು ಹನ್ನೆರಡು ವರ್ಷ ತಪಸ್ಸು ಮಾಡುತ್ತಾರೆ. ತನ್ನೊಳಗಿನ ಅನೇಕ ಪ್ರಶ್ನೆಗಳಿಗೆ ತನ್ನಲ್ಲಿಯೇ ಮನನವಾಗಿ ಇತರರ ಆತ್ಮ ಕಲ್ಯಾಣದ ಮಾರ್ಗವನ್ನು ಯಾರು ತೋರುತ್ತಾರೋ ಅವರು ತೀರ್ಥಂಕರರಾಗುತ್ತಾರೆ.

ಹನ್ನೆರೆಡು ವರ್ಷಗಳ ತಮ್ಮ ಅರಿವನ್ನು ವಿಸ್ತರಿಸಲು ಬಿಹಾರದ ಸುತ್ತ 30 ವರ್ಷಗಳ ಕಾಲ ಸಂಚರಿಸುವ ಮಹಾ ವೀರರು ಜಾತಿ, ಉಪ ಜಾತಿಗಳನ್ನು ವಿರೋಧಿಸುತ್ತಾರೆ. ಯಜ್ಞ-ಯಾಗಾದಿಗಳಿಗೆ ಬಲಿ ಕೊಡುವುದನ್ನು ಖಂಡಿಸಿ, ಈ ಜಗತ್ತಿನಲ್ಲಿ ಮನುಷ್ಯನಿಗೆ ಬದುಕುವಷ್ಟೇ ಹಕ್ಕು ಎಲ್ಲಾ ಪ್ರಾಣಿ, ಕ್ರಿಮಿ-ಕೀಟಗಳಿಗೂ ಇದೆ. ಆದ್ದರಿಂದ ಯಾವುದನ್ನೂ ಹಿಂಸಿಸಬೇಡ ‘ನೀನು ಜೀವಿಸು, ಇತರರನ್ನೂ, ಜೀವಿಸಲು ಬೀಡು’ ಎಂಬ ಅವರ ಮಾತು ಲಕ್ಷಾಂತರ ಜನರ ಮನಗೆಲ್ಲುತ್ತದೆ. ಜನರಿಗೆ ಅರ್ಥವಾಗುವಂತೆ ಅರ್ಥ ಮಾಡಿ, ಭಾಷೆಗಳಲ್ಲಿಯೇ ಮಾತುಗಳನ್ನು ಜನರಿಗೆ ತಲುಪಿಸುತ್ತಾ ಅವರ ಪ್ರೀತಿ ಗಳಿಸುತ್ತಾರೆ.

ಮಹಾವೀರರಿಗಿಂತ ಹಿಂದಿನ ತೀರ್ಥಂಕರರಾದ ಪಾರ್ಶ್ವನಾಥರು ನಾಲ್ಕು ವ್ರತಗಳನ್ನು ಪಾಲಿಸಲು ಕರೆ ಕೊಟ್ಟಿದ್ದು, ಆದರೆ ಮಹಾವೀರರು ಪಂಚಾಣು ವ್ರತಗಳನ್ನು ಜನರಿಗೆ ತಿಳಿಸಿ ಹೇಳುತ್ತಾರೆ ಅಹಿಂಸೆ, ಸತ್ಯ, ಅಸ್ತೇಯ ಬ್ರಹ್ಮಚರ್ಯ ಮತ್ತು ಅಪರಿಗ್ರಹ ಈ ತತ್ವಗಳು ಜೈನಧರ್ಮವು ವಿಶ್ವಧರ್ಮವೆಂದು ಜಗತ್ತಿಗೆ ತಿಳಿಸುವಲ್ಲಿ ಮಹತ್ತರವಾಗಿದೆ. ಅಹಿಂಸೆಯನ್ನು ಇಂದಿಗೂ ಸೂಕ್ಷ್ಮಾತೀ ಸೂಕ್ಷ್ಮವಾಗಿ ಪಾಲಿಸಿಕೊಂಡು ಬರಲಾಗುತ್ತಿದೆ. ದಿಗಂಬರ ಮುನಿಗಳು ತಮ್ಮ ಕೈಯಲ್ಲಿ ಬಿದ್ದ ನವಿಲು ಗರಿಗಳಿಂದ ಮೂಡಿದ ‘ಫಿಂಛ’ ದಿಂದ ತಾವು ಕುಳಿತುಕೊಳ್ಳುವ ಜಾಗದಲ್ಲಿ ಸೂಕ್ಷ್ಮಜೀವಿಗಳ ಸಾವಾಗದಂತೆ ಸಾವರಸಿ ಕುಳಿತುಕೊಳ್ಳುತ್ತಾರೆ. ಅಸತ್ಯಕ್ಕೆ ಆ ಕ್ಷಣಕ್ಕೆ ಗೆಲ್ಲುವ ಶಕ್ತಿಯಿದೆ. ಆದರೆ ಸತ್ಯವೊಂದೇ ನಿತ್ಯ ಭಯವಿಲ್ಲದೆ ಬದುಕು ನಡೆಸಲು ಇರುವ ಸಾಧನ ಅಸ್ತೇಯ ಅಂದರೆ ಕಳ್ಳತನ. ನಿನ್ನದೇ ನಿನ್ನ ಬಳಿ ಉಳಿಯಲಾರದು, ಪರರ ಗಂಟು ಉಳಿಯಬಹುದೇ ಎಂದು ಅರಿತು ನಡೆಯುವುದು ಕಷ್ಟಸಾಧ್ಯ. ಆದರೆ ಸತತ ಮನನ ಚಿಂತನೆ ಹಾಗೂ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೌಲ್ಯಗಳಿಂದಾಗಿ ಇದು ಅಸಾಧ್ಯವಿಲ್ಲ ಬ್ರಹ್ಮಚರ್ಯ ಎಂದರೆ ಮದುವೆಯಾಗದಿರುವುದು ಎಂಬ ಒಂದೇ ಅರ್ಥವಲ್ಲ. ಮದುವೆಯಾದ ಮೇಲೆಯೂ ತನ್ನ ಪತ್ನಿಯನ್ನು ಬಿಟ್ಟು ಬೇರೆ ಹೆಣ್ಣು ಮಕ್ಕಳನ್ನು ಗೌರವಿಸುವ ಹಾಗೂ ಅವರನ್ನು ಅಕ್ಕ ತಂಗಿಯರೆಂದು ತಿಳಿದುಕೊಳ್ಳುವುದು ಮುಖ್ಯ. 

ಸಮ್ಯಕ್ ದರ್ಶನ್, ಸಮ್ಯಕ್ ಜ್ಞಾನ, ಸಮ್ಯಕ್ ಚಾರಿತ್ರ್ಯ ಇವು ಜೈನ ಧರ್ಮದ ಪ್ರಮುಖ ತತ್ವಗಳು. ಇದನ್ನು ಮಹಾವೀರರು ಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ತಿಳಿಸುತ್ತಾರೆ. ಸದಾಕಾಲ ಒಳ್ಳೆಯದನ್ನೇ ನೋಡು, ಅದರಿಂದಾಗಿ ಒಳ್ಳೆಯ ಜ್ಞಾನ ಸಂಚಯವಾಗುತ್ತದೆ. ಒಳ್ಳೆಯ ಜ್ಞಾನ ನಿನ್ನ ಒಳ್ಳೆಯ ನಡತೆಗೆ ಕಾರಣವಾಗುತ್ತದೆ ಎಂಬ ಅಂದಿನ ಮಾತುಗಳು ನಂತರದ ಕಾಲಘಟ್ಟದಲ್ಲಿಯೂ ಮತ್ತೆ ಮತ್ತೆ ಚಿಂತನೆಗೆ ಒಳಪಡಿಸುತ್ತವೆ. ಅಪರಿಗ್ರಹ ಪರಿಕಲ್ಪನೆ ವಿಶಿಷ್ಟವಾದದು ಲೌಕಿಕ ಮತ್ತು ಧಾರ್ಮಿಕ ಎರಡು ಸ್ತರಗಳಲ್ಲಿಯೂ ಇದರ ವಿವೇಚನೆಯಿದೆ. ಬದುಕನ್ನು ಸಾಗಿಸಲು ಬೇಕಾಗುವ ಸಾಮಗ್ರಿಗಳನ್ನು ಸಂಗ್ರಹಿಸಿ ಸಂರಕ್ಷಿಸುವುದು ಪರಿಗ್ರಹವಾಗಿದೆ. ಇವುಗಳ ಸಂಗ್ರಹಣೆಗೆ ಸ್ವ-ಇಚ್ಚೆಯಿಂದ ಮಿತಿಯನ್ನು ಹಾಕಿಕೊಳ್ಳುವುದು ಅಪರಿಗ್ರಹ. ಹೊರಗಿನ ಬದುಕಿನಲ್ಲಿ ಭೂಮಿ, ಮನೆ, ಚಿನ್ನ, ಬೆಳ್ಳಿ, ಧನ, ಧಾನ್ಯ ಹೀಗೆ ಸಂಸಾರಕ್ಕೆ ಬೇಕಾದದ್ದನ್ನೆಲ್ಲಾ ಬೇಕು ಬೇಕು ಎನ್ನುವುದಕ್ಕೆ ಕಡಿವಾಣ ಹಾಕದೆ ಸಂಗ್ರಹಿಸುವುದು ಒಂದು ರೀತಿಯಾದರೆ, ಅಂತರಂಗದಲ್ಲಿ ನಾನು, ನನ್ನವು, ನನಗೆ, ನಮ್ಮವರು ಎಂಬ ಭಾವನೆಗಳನ್ನು ತ್ಯಜಿಸುವುದು. ಅಪರಿಗ್ರಹವೆಂದು ಮಹಾವೀರರು ನಂಬಿದ್ದರು ಮನುಷ್ಯ ದುರಾಸೆಯಿಂದಲೇ ಇಂದು  ಈ ಜಗತ್ತು ಅಳಿವಿನಂಚಿಗೆ ಸರಿಯುತ್ತಿದೆ. ತನ್ನ ಸ್ವಾರ್ಥಕ್ಕೆ ತನ್ನ ಸುತ್ತಲಿನ ಪರಿಸರ, ನೆಲ, ಜಲ, ವಾಯುವನ್ನು ಮಲಿನಗೊಳಿಸುತ್ತಿರುವ ನಮಗೆ, ಮಹಾವೀರರ ಮಾತುಗಳು ಮಾರ್ಗದರ್ಶಕವಾಗಬೇಕು. ಸಮಾಜ ಮತ್ತು ಧರ್ಮದ ಸುಧಾರಣೆ ಕಾಲದಿಂದ ಕಾಲಕ್ಕೆ ನಡೆಯುತ್ತಲೇ ಇದೆ. ಬುದ್ದ, ಬಸವ, ಅಂಬೇಡ್ಕ ರಂತವರು ತಮ್ಮ ತಮ್ಮ ಕಾಲಘಟ್ಟದಲ್ಲಿ ಕಂಡ ಸಾಮಾಜಿಕ, ಧಾರ್ಮಿಕ ಅನಿಷ್ಟಗಳನ್ನು ಹೋಗಲಾಡಿಸುವಲ್ಲಿ ಮಹತ್ತರ ಪಾತ್ರ ವಹಿಸಿದರು.

ವೈಭವ ಜೀವನದಲ್ಲಿ ಬದುಕು ನಡೆಸಬಹುದಾದ ಎಲ್ಲಾ ಬಾಗಿಲುಗಳನ್ನು ಮುಚ್ಚಿ, ತನ್ನೊಳಗಿನ ಜ್ಞಾನದ ಬಾಗಿಲನ್ನು ತೆರೆದು, ತನ್ನ ಸುತ್ತಲಿನ ಜನರ ಬದುಕು ಹೊಸ ಅರ್ಥ ಕಂಡುಕೊಳ್ಳುವಂತೆ ಮಾಡುವಲ್ಲಿ ತನ್ನ ಜೀವನದ ಬಹುಪಾಲು ಸಮಯವನ್ನು ಕಳೆದ ಮಹಾವೀರರು, ನಳಂದ ಬಳಿಯ ಪಾವಾಪುರಿಯಲ್ಲಿ ತಮ್ಮ 72 ನೇ ವಯಸ್ಸಿನಲ್ಲಿ ನಿರ್ವಾಣ ಹೊಂದುತ್ತಾರೆ.  ಪ್ರಾಚೀನ ಧರ್ಮಗಳಲ್ಲಿ ಒಂದಾದ ಜೈನಧರ್ಮಕ್ಕೆ  ಹೊಸ ನೆಲೆಯನ್ನು ತಂದುಕೊಟ್ಟ ಮಹಾವೀರರು ತಮ್ಮ ನಡೆ, ನುಡಿ, ಆಚಾರ-ವಿಚಾರಗಳಿಂದ ಜನ ಮಾನಸವನ್ನು ಗೆದ್ದವರು. ಜೈನಧರ್ಮವನ್ನು ವಿಶ್ವಧರ್ಮವಾಗಿ ಎತ್ತಿಹಿಡಿದು, ತಮ್ಮ ತಾತ್ವಿಕ ಚಿಂತನೆಗಳಿಂದ ಭಾರತದಲ್ಲಿ ಧರ್ಮ ಪ್ರವರ್ತಕರೆಂದು ಕರೆಸಿಕೊಂಡವರ ಸಾಲಿನಲ್ಲಿ ಭಗವಾನ್‌ ಮಹಾವೀರರ ಹೆಸರು ಚಿರಸ್ಥಾಯಿಯಾದದ್ದು.


ಮಹಾವೀರನೆಂಬ ಮಹಾಪುರುಷ... - Janathavaniಎಸ್.ಮರಳಸಿದ್ದೇಶ್ವರ ಶಿವಪುರ 
ಹೊಳಲ್ಕೆರೆ.
[email protected]

error: Content is protected !!