ಬದುಕಿನ ಬಣ್ಣ ನೂರಾರು ಬಣ್ಣಕ್ಕಿಲ್ಲ ತಕರಾರು…

ಪ್ರಸ್ತುತ ಜನವರಿ 30 ರಿಂದ ಫೆ.6ರ ವರೆಗೂ ನಡೆಯುತ್ತಿರುವ ಪ್ರದರ್ಶನದಲ್ಲಿ ನಲ್ವತ್ತಕ್ಕೂ ಹೆಚ್ಚಿನ ವೈವಿಧ್ಯ ಕಲಾಕೃತಿಗಳಿವೆ. ಹಳೆಬೇರು, ಹೊಸ ಚಿಗುರು …ಎಂಬಂತೆ ಹಳೆತನ ಬಿಡದೆ, ಹೊಸತನಕ್ಕೆ ತುಡಿಯುತ್ತಿರುವ ನೈಜ ಶೈಲಿಯ ನೃತ್ಯಗಾತಿ, ಮೇಘದೂತ, ರಾಧಾಕೃಷ್ಣ, ಪ್ರಣಯಿಗಳು… ಹೀಗೆ ಒಂದಕ್ಕಿಂತ ಒಂದು ಭಿನ್ನವಾಗಿದ್ದು, ನೋಡುಗರಿಗೆ ಹೊಸ ಅನುಭವ ಉಂಟುಮಾಡುತ್ತವೆ. ಆಕ್ರಲಿಕ್ ಮಾಧ್ಯಮದ  ಮೂಲಕ ಚಿತ್ರಿತವಾಗಿರುವ “ದಿ ಪವರ್ ಆಫ್ ಮೈಂಡ್” “ಹ್ಯಾಪಿನೆಸ್” “ಟ್ಯೂನಿಂಗ್ ದ ಮೈಂಡ್” “ಅವೇರ್‌ನೆಸ್ ಆಕ್ಷನ್”… ಮೊದಲಾದವು ಸಾಮಾನ್ಯರ ಮನಕ್ಕೆ ತಲುಪಲು ವಿವರಣೆ ತೀರಾ ಅಗತ್ಯವಾಗಿದ್ದು, ಅಡಿ ಶೀರ್ಷಿಕೆ ಇದ್ದಿದ್ದರೆ ಸಹಾಯಕವಾಗುತ್ತಿತ್ತು‌.

ವಾಸ್ತವ ಶೈಲಿಯಲ್ಲಿ ಇದ್ದುದನ್ನು ಹಾಗೆಯೇ ತೆರೆದಿರಿಸಿದರೆ, ನೈಜ ಶೈಲಿಯಲ್ಲಿ ಹೊರಗಿನ ಪ್ರೇರಣೆ, ಸ್ಪೂರ್ತಿಗಳಿಂದ ಪ್ರಭಾವಿತನಾಗಿ ಚಿತ್ರಕಾರ ವೈವಿಧ್ಯಮಯ, ಭಿನ್ನ ಕೃತಿಗಳನ್ನು ಅವಿರ್ಭವಿಸುತ್ತಾನೆ. ಆರಂಭದಲ್ಲಿ ವಚನಾಧಾರಿತ ಚಿತ್ರಗಳಲ್ಲಿ ಒಲವಿದ್ದ ಮಾಲೀ ಆನಂತರದಲ್ಲಿ ಅಮೂರ್ತದೆಡೆಗೆ ವಾಲಿರುವುದು ಕಾಣಬರುತ್ತದೆ.

“ಮಕ್ಕಳು ಡಾಕ್ಟರೋ, ಇಂಜಿನಿಯರೋ ಆಗಿ ಡಾಲರ್ ಗಳಿಸಿದರೆ ಸಾಕೆಂಬ ಪೋಷಕರ ಹಂಬಲ, ಎಳೆಯರ ಮನದ ಅಂಚಿನಲ್ಲಿರುವ ಬಣ್ಣದ ಬಗೆಗಿನ ಆಶಯವನ್ನು ಮುರುಟಿಹಾಕುತ್ತಿದೆ” ಎಂಬ ಆತಂಕ ವ್ಯಕ್ತಪಡಿಸುವ ಮಾಲೀ “ಬಣ್ಣ ಮಕ್ಕಳ ಮಾನಸಿಕ – ಬೌದ್ಧಿಕ ಔನ್ನತ್ಯಕ್ಕೂ ಪ್ರೇರಕವಾಗುತ್ತದೆ. ಮಾತ್ರವಲ್ಲ ಒಬ್ಬ  ಸಮರ್ಥ ಕಲಾವಿದನಾಗಿ ರೂಪುಗೊಂಡರೆ ದೇಶ – ವಿದೇಶಗಳಲ್ಲಿ ಹೆಸರನ್ನೂ ಗಳಿಸಬಹುದು. ಒಂದೊಂದು ಕಲಾಕೃತಿಯೂ ಲಕ್ಷದ ಲೆಕ್ಕದಲ್ಲಿ ಬಿಕರಿಯಾಗುವ ಅವಕಾಶವೂ ಇರುವುದರಿಂದ ಡಾಲರ್‌ಗಳೂ ಬರುತ್ತವೆ” ಎಂದು ಕಿವಿಮಾತು ಹೇಳಲು ಮರೆಯುವುದಿಲ್ಲ.

ಸನ್ಮಾನ – ಪ್ರಶಸ್ತಿಗಳ ಹೊರೆ ಹೊತ್ತು ನಿಂತಿರುವ ಮಾಲಿಗೆ ಇನ್ನೂ ಕರ್ನಾಟಕ ರಾಜ್ಯ ಪ್ರಶಸ್ತಿ ದೊರಕದಿರುವುದು ವಿಪರ್ಯಾಸವೇ ಸೈ ! ಈ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳದ ಮಾಲೀ “ಮಕ್ಕಳಲ್ಲಿ ಕುಂಚ ಪ್ರೀತಿ ಮೂಡಿಸಬೇಕು. ಈ ದಿಸೆಯಲ್ಲಿ ನಮ್ಮ, ದೃಶ್ಯ ಕಲಾ ವಿಶ್ವವಿದ್ಯಾಲಯದ ಪಾತ್ರವೂ ಇದೆ. ಜೊತೆಗೆ ಸಮಾಜದ್ದೂ ಸಹಾ!” ಎನ್ನುತ್ತಾರೆ. ಮಹಾಲಿಂಗಪ್ಪನವರ ಕಲಾ ಯಾತ್ರೆ ಮುಂದುವರೆಯಲಿ.


ಬದುಕಿನ ಬಣ್ಣ ನೂರಾರು ಬಣ್ಣಕ್ಕಿಲ್ಲ ತಕರಾರು... - Janathavani

ಹಳೇಬೀಡು ರಾಮ ಪ್ರಸಾದ್
ದಾವಣಗೆರೆ.
[email protected]

error: Content is protected !!