ಮಳೆ ಆರ್ಭಟ : ಗೋಡೆ ಕುಸಿತ

ಸೂರು ಕಳೆದುಕೊಂಡ ಕುಟುಂಬ

ದಾವಣಗೆರೆ, ಆ.10- ಆಶ್ಲೇಷ ಮಳೆಯ ಆರ್ಭಟಕ್ಕೆ ಇಲ್ಲಿನ ಹಳೇ ನಗರದ ಐರಣಿ ಮಠದ ಸಮೀಪವಿರುವ ಮನೆಯೊಂದರ ಗೋಡೆ ಕುಸಿದ ಪರಿಣಾಮ ಕುಟುಂಬವೀಗ ಸೂರು ಕಳೆದುಕೊಂಡಿದೆ.

ಪೂರ್ಣಿಮ ಟಿ.ಯು. ನಾಗರಾಜ್ ಎಂಬುವವರ ಮನೆಯ ಮಣ್ಣಿನ ಗೋಡೆ ಮಳೆ ನೀರಿನಿಂದ  ಕುಸಿದು ಬಿದ್ದಿದೆ. ಈ ವೇಳೆ ಮನೆ ಸದಸ್ಯರು ಎಚ್ಚರವಾಗಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದೀಗ ಇಬ್ಬರು ಮಕ್ಕಳೊಂದಿಗೆ ಪಕ್ಕದ ಮನೆಯವರ ಮನೆ ಕೋಣೆಯೊಂದರಲ್ಲಿ ಸದ್ಯ ಆಶ್ರಯ ಪಡೆದುಕೊಂಡಿದ್ದಾರೆ. ಜಾಗ ಇಲ್ಲದ ಕಾರಣ ಬಿದ್ದಿರುವ ಮನೆ ಕೋಣೆಯೊಂದರಲ್ಲೇ ಈಗಲೂ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದು, ಉಳಿದ ಮನೆ ಗೋಡೆಯು ಯಾವಾಗಬೇಕಾದರೂ ಕುಸಿದು ಬೀಳಬಹುದು ಎಂಬ ಆತಂಕದಲ್ಲಿದ್ದಾರೆ.

ಬ್ಯಾಂಕೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ ಟಿ.ಯು. ನಾಗರಾಜ್‍ಗೆ ಕೆಲಸದಲ್ಲಿ ರಜೆಯೂ ಸಿಗುತ್ತಿಲ್ಲ. ಅತ್ತ ಕಳೆದ 3 ತಿಂಗಳಿನಿಂದ ವೇತನವೂ ಇಲ್ಲದೆ ಜೀವನ ನಿರ್ವಹಣೆಗೆ ಪರದಾಡುವ ಸ್ಥಿತಿ ಎದುರಾಗಿದ್ದು, ಇದೀಗ ಮನೆಯೂ ಇಲ್ಲದೆ ಸಂತ್ರಸ್ತರಾಗಿದ್ದಾರೆ.

error: Content is protected !!