ರೆಡ್ಕ್ರಾಸ್ ಛೇರ್ಮನ್ ಡಾ.ಎ.ಎಂ. ಶಿವಕುಮಾರ್
ದಾವಣಗೆರೆ, ಜೂ.20- ಎಲ್ಲೆಡೆ ಕೊರೊನಾ ಮಹಾಮಾರಿ ತಾಂಡವವಾಡುತ್ತಿದ್ದರೂ ಕೂಡ ರಕ್ತದಾನಿಗಳು ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ ಎಂದು ರೆಡ್ಕ್ರಾಸ್ ಚೇರ್ಮನ್ ಡಾ.ಎ.ಎಂ. ಶಿವಕುಮಾರ್ ಅಭಿಪ್ರಾಯಪಟ್ಟರು.
ನಗರದ ಭಾರತೀಯ ರೆಡ್ಕ್ರಾಸ್ ಸಂಸ್ಥೆಯು ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ರಕ್ತದಾನಿಗಳಿಗೆ ಹಾಗೂ ಕಂಟೈನ್ಮೆಂಟ್ ಜೋನ್ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕೊರೊನಾ ಸೈನಿಕರಿಗೆ ಪುಷ್ಪವೃಷ್ಟಿ, ಮಾಸ್ಕ್ ಹಾಗೂ ಹಣ್ಣು ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದಾವಣಗೆರೆಯಲ್ಲಿ ರಕ್ತದ ಕೊರತೆ ಕಡಿಮೆ ಅನಿಸುತ್ತಿದೆ. ನಮ್ಮಲ್ಲಿ ಸ್ವಯಂ ಸೇವಕರು, ಸಂಘ-ಸಂಸ್ಥೆಗಳ ರಕ್ತದಾನಿಗಳು ಯಾವಾಗ ಕರೆದರೂ ಬಂದು ರಕ್ತದಾನ ಮಾಡುತ್ತಾರೆ. ಇದರಿಂದ ಬಡ ರೋಗಿಗಳಿಗೆ ಅನುಕೂಲವಾಗಿದೆ. ಕೊರೊನಾ ಇಧ್ದರೂ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ರಕ್ತದಾನ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಸ್ವಯಂ ಸೇವಕರು ತಮ್ಮ ಜೀವದ ಹಂಗು ತೊರೆದು ಕಂಟೈನ್ಮೆಂಟ್ ಜೋನ್ಗಳಲ್ಲಿ ವೈದ್ಯರೊಂದಿಗೆ, ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದರು. ಇದೇ ವೇಳೆ ರಕ್ತದಾನಿಗಳಿಗೆ, ಸ್ವಯಂ ಸೇವಕರು ಹಾಗೂ ಕೊರೊನಾ ಸೈನಿಕರಿಗೆ ಪುಷ್ಪವೃಷ್ಟಿ ಮಾಡಿ ಮಾಸ್ಕ್ ಹಾಗೂ ಹಣ್ಣು, ಹಂಪಲುಗಳನ್ನು ವಿತರಿಸಲಾಯಿತು.
ಸಂಸ್ಥೆ ಸಹ ಕಾರ್ಯದರ್ಶಿ ಡಿ.ಎಸ್. ಸಾಗರ್, ನಿರ್ದೇಶಕ ಡಿ.ಎಸ್. ಸಿದ್ಧಣ್ಣ, ಡಾ. ಶಿಲ್ಪಶ್ರೀ, ಕಾರ್ಯಕ್ರಮದ ಸಂಯೋಜಕ ಡಿ.ಎನ್. ಶಿವಾನಂದ, ಎಂ.ಜಿ. ಶ್ರೀಕಾಂತ್, ಇನಾಯತ್ವುಲ್ಲಾ, ರವಿಕುಮಾರ್, ಎನ್.ವಿ. ವಸಂತರಾಜು, ನಾಗರಾಜ, ಮಹಮದ್ ಗೌಸ್, ಕರಿಬಸಪ್ಪ ಮತ್ತು ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.