ಮುಳಗಾಯಿ ಬೆಲೆ ಕುಸಿತ : ಪುಣ್ಯಕ್ಷೇತ್ರಕ್ಕೆ ರವಾನೆ

ದಾವಣಗೆರೆ, ಮಾ.26- ಮುಳಗಾಯಿ ಬೆಲೆ ಕುಸಿತದಿಂದ ಕಂಗಾಲಾದ ರೈತನೋರ್ವ ನಷ್ಟದ ಬದಲು ಪುಣ್ಯಕ್ಷೇತ್ರಕ್ಕೆ ಕಳುಹಿಸಿದ ಪ್ರಸಂಗ ನಡೆದಿದೆ.

ತಾಲ್ಲೂಕಿನ ರಾಂಪುರದ ಪ್ರಗತಿಪರ ರೈತ ಆರ್.ಜಿ. ಬಸವರಾಜ್ ಒಟ್ಟು 6 ಎಕರೆ ಜಮೀನಿನಲ್ಲಿ 2 ಎಕರೆಯಲ್ಲಿ ಕಳೆದ ಡಿಸೆಂಬರ್‍ನಲ್ಲಿ ಮುಳುಗಾಯಿ ಬೆಳೆದಿದ್ದರು. ಆದರೆ ಮಾರುಕಟ್ಟೆಯಲ್ಲಿ ಬದನೆಕಾಯಿಯನ್ನು ದಲ್ಲಾಳಿಗಳು ಸೇರಿದಂತೆ ವ್ಯಾಪಾರಿಗಳು ಒಂದು ಕೆಜಿಗೆ ಎರಡು ರೂ.ಗೆ ಕೇಳಿದ್ದರಿಂದ ಈ ರೈತ ಕಂಗಾಲಾಗಿ, ಸುಮಾರು 10 ಟನ್‍ನಷ್ಟು ಮುಳುಗಾಯಿಯಲ್ಲಿ 5 ಟನ್‍ನಷ್ಟು ಮುಳುಗಾಯಿ ಯನ್ನು ಮಾರಾಟ ಮಾಡದೇ ಪುಣ್ಯಕ್ಷೇತ್ರ ಧರ್ಮಸ್ಥಳ ಮಂಜುನಾಥನ ದರ್ಶನಕ್ಕೆ ಬರುವ ಭಕ್ತಾದಿಗಳ ಪ್ರಸಾದಕ್ಕೆ ಕಳುಹಿಸಿದ್ದಾರೆ. ಬಂಡವಾಳಕ್ಕೆ ತಕ್ಕಂತೆ ಶೇ. 20ರಷ್ಟು ಸಹ  ಹಣ ಬಾರದ ಹಿನ್ನೆಲೆ ಧರ್ಮಸ್ಥಳಕ್ಕೆ ಸುಮಾರು ಐದು ಟನ್ ಮುಳಗಾಯಿಯನ್ನು ರೈತ ಕಳುಹಿಸಿದ್ದಾರೆ. 

ನಮ್ಮಿಂದ ಕೆಜಿಗೆ ಎರಡು ರೂ.ಗೆ ಖರೀದಿಸಿ ಗ್ರಾಹಕರಿಗೆ 20 ರೂ.ಗೆ ಮಾರಾಟ ಮಾಡುವ ವ್ಯಾಪಾರಿಗೆ ಲಾಭ ಮಾಡುವ ಬದಲು ಪುಣ್ಯ ಕಾರ್ಯಕ್ಕೆ ಧರ್ಮಸ್ಥಳಕ್ಕೆ ಮುಳಗಾಯಿ ಕಳುಹಿಸುವುದೇ ಲೇಸು ಎಂದು ರೈತ ಬಸವರಾಜ್ ಗುರುವಾರ ರಾತ್ರಿ ಧರ್ಮಸ್ಥಳಕ್ಕೆ ಮುಳಗಾಯಿ ರವಾನೆ ಮಾಡಿದ್ದಾರೆ ಎನ್ನಲಾಗಿದೆ.

ಹೊಲದಲ್ಲಿ ಇನ್ನೂ 5-6 ಟನ್‍ಗಿಂತಲೂ ಅಧಿಕ ಮುಳುಗಾಯಿ ಇದೆ. ಅದನ್ನೂ ತುಮ ಕೂರಿನ ಶ್ರೀ ಸಿದ್ಧಗಂಗಾ ಮಠಕ್ಕೆ ಕಳಿಸಿಕೊಡುವ ಉದ್ದೇಶವನ್ನು ಈ ರೈತ ಹೊಂದಿದ್ದಾರೆ ಎಂದು ಹೇಳಲಾಗಿದೆ.

error: Content is protected !!