ನಂದಿಗುಡಿಯಲ್ಲಿ ವಿಜೃಂಭಣೆಯ ರಥೋತ್ಸವ

ಮಲೇಬೆನ್ನೂರು, ಮಾ.25 – ನಂದಿಗುಡಿ ಗ್ರಾಮದ ಆರಾಧ್ಯ ದೈವ ಶ್ರೀ ಬಸವೇಶ್ವರ ದೇವರ ಮಹಾರಥೋತ್ಸವ ಗುರುವಾರ ಮಧ್ಯಾಹ್ನ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ರಥಕ್ಕೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ವಿವಿಧ ಕಲಾ-ಮೇಳಗಳು ರಥೋತ್ಸವಕ್ಕೆ ಮೆರಗು ತಂದವು ಭಕ್ತರು ರಥದ ಚಕ್ರಗಳಿಗೆ ತೆಂಗಿನಕಾಯಿ ಒಡೆದು ಮತ್ತು ರಥದ ಮೇಲೆ ಬಾಳೆ ಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.

ರಥೋತ್ಸವಕ್ಕೂ ಮುನ್ನ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರ ಅಡ್ಡ ಪಲ್ಲಕ್ಕಿ ಉತ್ಸವ ಸಂಭ್ರಮದಿಂದ ನೆರವೇರಿತು.

ನಂದಿಗುಡಿ, ಗೋವಿನಹಾಳ್, ಕೆ.ಎನ್. ಹಳ್ಳಿ, ಉಕ್ಕಡಗಾತ್ರಿ, ಪಾಳ್ಯ, ವಾಸನ, ಹಿಂಡಸಘಟ್ಟ, ಜಿಗಳಿ, ಕೊಕ್ಕನೂರು, ಹಳ್ಳಿಹಾಳ್, ಜಿ. ಬೇವಿನಹಳ್ಳಿ , ಬಸಾಪುರ ಗ್ರಾಮಗಳ ಭಕ್ತರು ರಥೋತ್ಸವ ಹಾಗೂ ಅಡ್ಡ ಪಲ್ಲಕ್ಕಿ ಉತ್ಸವದಲ್ಲಿ ಭಾಗವಹಿಸಿದ್ದರು.

ಸಂಜೆ ದೊಡ್ಡ ಬಂಡಿ ಪ್ರದರ್ಶನ ನಡೆಯಿತು, ರಾತ್ರಿ ಓಕಳಿ ನಂತರ ಕಂಕಣ ವಿಸರ್ಜನೆ ಮಾಡಲಾಯಿತು. ಶುಕ್ರವಾರ ಬೆಳಿಗ್ಗೆ ಶ್ರೀ ಬಸವೇಶ್ವರ ದೇವರ ಪಾಲಿಕೆ ಉತ್ಸವದೊಂದಿಗೆ ಬುಕ್ಕಿಟ್ಟಿನ ಸೇವೆ ನಡೆಯಲಿದೆ.

error: Content is protected !!