ರಸ್ತೆ ಅಭಿವೃದ್ಧಿ ಕಾಮಗಾರಿ ಕಳಪೆ : ಮಾಜಿ ಶಾಸಕ ಶಾಂತನಗೌಡ ಆರೋಪ

ಹೊನ್ನಾಳಿ, ಏ.18 – ಸರ್ಕಾರದ ಯೋಜನೆಗಳ ಅಡಿಯಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ನಿರ್ವಹಣೆ ಮಾಡಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಸಂಪೂರ್ಣ ಕಳಪೆಯಾಗಿದ್ದು, ಸರ್ಕಾರದ ಹಣವನ್ನು ದುರುಪಯೋಗ ಮಾಡಿದ್ದಾರೆ ಎಂದು ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಆರೋಪಿಸಿದರು.

ತಾಲ್ಲೂಕಿನ ನೇರಲಗುಂಡಿ, ಬಸವಾಪುರ, ಹುಣಸೇಹಳ್ಳಿ ಗ್ರಾಮಗಳ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗಳ ಸ್ಥಳ ಪರಿಶೀಲನೆ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕಳಪೆ ಕಾಮಗಾರಿ ನಡೆದಿರುವ ಬಗ್ಗೆ ತಮ್ಮಲ್ಲಿ ಎಲ್ಲಾ ದಾಖಲೆಗಳಿವೆ. ಈ ಸಂಬಂಧ ಸರ್ಕಾರದ ವಿವಿಧ ಇಲಾಖೆಗಳಿಗೆ ಪತ್ರ ಬರೆಯಲಾಗಿದ್ದು, ಸ್ಥಳ ಪರಿಶೀಲನೆಗೆ  ಅಧಿಕಾರಗಳ ತಂಡ ಬರಲಿದೆ ಎಂದರು.

ನೇರಲಗುಂಡಿ ಗ್ರಾಮದ ಬಳಿ ಸುಮಾರು 4 ಎಕರೆ ವಿಸ್ತೀರ್ಣದಲ್ಲಿ ಗೋಮಾಳದ ಕೆರೆ ಕಟ್ಟಲಾಗಿದೆ. ಕೆರೆಯ ಮಣ್ಣನ್ನು ರೈತರು ತಮ್ಮ ಸ್ವಂತ ವೆಚ್ಚದಲ್ಲಿ ಜಮೀನುಗಳಿಗೆ ಸಾಗಿಸಿದ್ದಾರೆ. ಆದರೆ ಭೂ ಸೇನಾ ನಿಗಮದಿಂದ ಕೆರೆ ನಿರ್ಮಾಣ ಕಾಮಗಾರಿ ಹೆಸರಿನಲ್ಲಿ 50 ಲಕ್ಷ ರೂ ಗಳನ್ನು ದುರ್ಬಳಕೆ ಮಾಡುವ ಹುನ್ನಾರ ನಡೆದಿದೆ ಎಂದು ದೂರಿದರು.

ಸಂಬಂಧ ಪಟ್ಟ ಇಲಾಖೆಯವರು ಕೆರೆ ನಿರ್ಮಾಣ ಕಾಮಗಾರಿ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಶಾಂತನಗೌಡ ಆಗ್ರಹಿಸಿದ್ದಾರೆ.

error: Content is protected !!