ಕೊರೊನಾ ಆತಂಕವಿಲ್ಲದೇ, ತುಂಗಭದ್ರಾ ನದಿ ತೀರದಲ್ಲಿ ಸಡಗರದ ಸಂಕ್ರಾಂತಿ

ಹರಿಹರ, ಜ.14 – ನಗರದಲ್ಲಿ ಸಡಗರ ಸಂಭ್ರಮದಿಂದ ಸಂಕ್ರಾಂತಿ ಹಬ್ಬವನ್ನು ಇಂದು ಆಚರಿಸಲಾಯಿತು.

ತುಂಗಭದ್ರಾ ನದಿಗೆ ದಾವಣಗೆರೆ, ಚಿತ್ರದುರ್ಗ, ಹಾವೇರಿ, ಶಿವಮೊಗ್ಗ, ಬಳ್ಳಾರಿ ಮುಂತಾದ ಜಿಲ್ಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಮತ್ತು ರೈತಾಪಿ ವರ್ಗದ ಜನರ ದಂಡು ಆಗಮಿಸಿ ನದಿಯಲ್ಲಿ ಸ್ನಾನ ಮಾಡಿ, ನಂತರದಲ್ಲಿ ವಿಶೇಷವಾದ ಪೂಜೆಯನ್ನು ಸಲ್ಲಿಸಿ ತದನಂತರದಲ್ಲಿ ತಾವುಗಳು ತಂದಿದ್ದ ವಿವಿಧ ಬಗೆಯ ರೊಟ್ಟಿ, ಪಲ್ಯ, ಚಟ್ನಿ, ಬುತ್ತಿ, ಚಿತ್ರಾನ್ನ, ಸೇರಿದಂತೆ ವಿಶೇಷ ಅಡುಗೆಯನ್ನು ಸೇವಿಸಿ ಸಡಗರ ಸಂಭ್ರಮದಿಂದ ಮಕರ ಸಂಕ್ರಾಂತಿ  ಹಬ್ಬವನ್ನು ಆಚರಣೆ ಮಾಡಿದರು. ಸಾರ್ವಜನಿಕರು ಕೊರೊನಾದ ಭಯವನ್ನು ಬಿಟ್ಟು ಯಾವುದೇ ಆತಂಕವನ್ನು ಪಟ್ಟುಕೊಳ್ಳದೆ ಸಂಕ್ರಾಂತಿಯ ಹಬ್ಬವನ್ನು ಆಚರಣೆ ಮಾಡಿದರು. ಬಿಸಿಲನ ತಾಪವನ್ನು ನೀಗಿಸಲು ಕಲ್ಲಂಗಡಿ, ಕಬ್ಬಿನ ಜ್ಯೂಸ್ , ತಂಪಾದ ಪಾನಿಯ ಅಂಗಡಿಗಳು, ಹೋಟೆಲ್ ಮುಂತಾದ ವ್ಯಾಪಾರಿ ಕೇಂದ್ರಗಳನ್ನು ತೆರೆದು ಜನತೆಯ ದಗೆಯನ್ನು ನೀಗಿಸಿದವು. ತುಂಗಭದ್ರಾ ನದಿಗೆ ಆಗಮಿಸಿದ ಜನರು ನದಿಯ ಪಕ್ಕದ ಅಯ್ಯಪ್ಪ ಸ್ವಾಮಿ, ಆಂಜನೇಯ ಸ್ವಾಮಿ, ಹರಿಹರೇಶ್ವರ ಸ್ವಾಮಿ ದೇವಸ್ಥಾನ, ರಾಘವೇಂದ್ರ ಸ್ವಾಮಿ ಮಠ ಮುಂತಾದ ದೇವಸ್ಥಾಗಳಿಗೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದುಕೊಂಡರು. 

error: Content is protected !!