ಶ್ರೀ ಗುರುವೇ ಸದ್ಗುರುವೇ…

ಅಕ್ಷರವ ಅಕ್ಕರೆಯಿಂದ ಕಲಿಸಿದವರು
ಅಜ್ಞಾನವ ಜ್ಞಾನದಿಂದ ಕಳೆದವರು
ತಪ್ಪುಗಳನು ತಾಳ್ಮೆಯಿಂದ ತಿದ್ದಿದವರು
ಶಿಸ್ತನ್ನು ಶಿಕ್ಷೆಯಿಂದಲೇ ರೂಪಿಸಿದವರು.

ಬ್ರಹ್ಮನಾಗಿ ಬ್ರಹ್ಮಾಂಡವ ಪರಿಚಯಿಸಿದವರು
ವಿಷ್ಣುವಾಗಿ ಪೋಷಣೆಯ ಮಾಡಿದವರು
ಮಹೇಶ್ವರನಾಗಿ ಮಮತೆಯ ನೀಡಿದವರು
ತ್ರಿಮೂರ್ತಿಗಳ ಪ್ರತಿರೂಪದಿ ಕಂಡವರು.

ಕಪ್ಪು ಹಲಗೆ ಮೇಲೆ ಭವಿಷ್ಯ ಬರೆದವರು
ಬಳಪವ ಹಿಡಿದು ವರ್ಣಗಳ ತಿದ್ದಿದವರು
ಕೊಠಡಿ ಗೋಡೆಗಳ ಮಧ್ಯೆ ದೇವರಾದವರು.

ಕಲಿಸುತ್ತಾ ನಗಿಸುತ್ತಾ ನಮ್ಮ ಸ್ನೇಹಿತರಾದವರು.
ಮಾತೃಭಾಷೆಯ ಮನಮುಟ್ಟುವಂತೆ ಕಲಿಸಿದವರು
ಆಂಗ್ಲಭಾಷೆಯ ಅರ್ಥವಾಗುವಂತೆ ಕಲಿಸಿದವರು
ಹಿಂದಿಭಾಷೆಯ ಹಿಂಜರಿಕೆಯಾಗದಂತೆ ಕಲಿಸಿದವರು
ಅಗಣಿತವಾದ ಗಣಿತವನು ಗೆಲ್ಲುವಂತೆ ಕಲಿಸಿದವರು.

ವಿಜ್ಞಾನವ ಮನೋಜ್ಞವಾಗಿ ಕಲಿಸಿದವರು
ಸಮಾಜವಿಜ್ಞಾನವ ಸರಳವಾಗಿ ಕಲಿಸಿದವರು
ದೈಹಿಕ ಶಿಕ್ಷಣದಿ ಮನೋಸ್ಥೈರ್ಯ ಕಲಿಸಿದವರು
ಸಕಲ ವಿಷಯಗಳ ಮನಮುಟ್ಟುವಂತೆ ಕಲಿಸಿದವರು.


ಶಿವಮೂರ್ತಿ.ಹೆಚ್., ಕನ್ನಡ ಶಿಕ್ಷಕರು
ಶ್ರೀ ತರಳಬಾಳು ಜಗದ್ಗುರು ರೆಸಿಡೆನ್ಸಿಯಲ್
ಸ್ಕೂಲ್, ಅನುಭವ ಮಂಟಪ, ದಾವಣಗೆರೆ.
9740050150
[email protected]

error: Content is protected !!