ಪತ್ನಿ ಮತ್ತು ಪ್ರಿಯಕರನ ಕೊಲೆ ಪ್ರಕರಣ : ಆರೋಪಿ ಪತಿ ಬಂಧನ

ದಾವಣಗೆರೆ, ನ.1- ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಕೊಲೆ ಮಾಡಿದ್ದ ಆರೋಪದಲ್ಲಿ ಪತಿಯನ್ನು ಚನ್ನಗಿರಿ ಠಾಣೆ ಪೋಲಿಸರು ಬಂಧಿಸಿದ್ದಾರೆ.

ಕಾರಿಗನೂರು ಕ್ರಾಸ್‍ನ ನಿವಾಸಿ ಶ್ವೇತಾ (26) ಮತ್ತು ಆಕೆಯ ಸ್ನೇಹಿತ ವೇದಮೂರ್ತಿ (29) ಕೊಲೆಯಾದವರು. ಕಾರಿಗನೂರು ಗ್ರಾಮದ ಖಾಸಗಿ ಶಾಲೆಯ ಶಿಕ್ಷಕ ಶಿವಕುಮಾರ್ ಬಂಧಿತ ಆರೋಪಿ.

ಹೊಳಲ್ಕೆರೆ ತಾಲ್ಲೂಕಿನ ಮೂಲದ ಶಿವಕುಮಾರ್ ಕಾರಿಗನೂರು ಗ್ರಾಮದಲ್ಲಿನ ಖಾಸಗಿ ಶಾಲೆಯ ಶಿಕ್ಷಕನಾಗಿದ್ದು, ಶ್ವೇತಾ ಈತನ ಪತ್ನಿ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪತ್ನಿಯ ಅನೈತಿಕ ಸಂಬಂಧದ ವಿಚಾರವಾಗಿ ಇವರಿಬ್ಬರ ನಡುವೆ ಜಗಳವಾಗಿ ಶ್ವೇತಾ ಮಗಳನ್ನು ಕರೆದುಕೊಂಡು ಮನೆ ಬಿಟ್ಟು ಹೋಗಿದ್ದಳು.‌ ನಂತರ ಆಕೆಯು ತನ್ನ ಸ್ನೇಹಿತ ವೇದಮೂರ್ತಿ ಯೊಂದಿಗೆ ಹೊನ್ನಾಳಿ ತಾಲ್ಲೂಕಿನಲ್ಲಿದ್ದಳು. ಈ ವಿಚಾರ ತಿಳಿದ ಶಿವಕುಮಾರನು ತನ್ನ ಸಹೋದರ ಶಿವರಾಜನೊಂದಿಗೆ ಸೇರಿಕೊಂಡು ಶ್ವೇತಾ ಮತ್ತು ವೇದಮೂರ್ತಿಯನ್ನು ಕೊಲೆ ಮಾಡಿದ್ದಾರೆ ಎಂದು ಇಂದಿಲ್ಲಿ ಕರೆದಿದ್ದ ಸುದ್ದಿ ಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರು ತಿಳಿಸಿದ್ದಾರೆ.

ತನ್ನ ಸಹೋದರ ಶಿವರಾಜನೊಂದಿಗೆ ಹೊನ್ನಾಳಿಗೆ ತೆರಳಿದ್ದ ಶಿವಕುಮಾರ್ ಪತ್ನಿಯ ಸ್ನೇಹಿತ ವೇದಮೂರ್ತಿಯನ್ನು ಉಸಿರು ಕಟ್ಟಿಸಿ ಸಾಯಿಸಿ, ನಂತರ ಆತನ ಶವನ್ನು ನದಿಗೆ ದಬ್ಬಿದ್ದಾರೆ. ನಂತರ ಸೂಳೆಕೆರೆಯಲ್ಲಿ ನಾವಿಬ್ಬರೂ ಸಾಯೋಣ ಎಂದು ಹೇಳಿ ಶ್ವೇತಾಳನ್ನು ನಂಬಿಸಿ ಕರೆ ತಂದ ಶಿವಕುಮಾರ್ ಚನ್ನಗಿರಿ ತಾಲ್ಲೂಕಿನ ರಾಜನಗೊಂಡನಹಳ್ಳಿಯ ತೋಟವೊಂದರಲ್ಲಿ ಆಕೆಯನ್ನು ಉಸಿರು ಕಟ್ಟಿಸಿ ಕೊಲೆ ಮಾಡಿ ಶವವನ್ನು ಬಾವಿಗೆ ತಳ್ಳಿ ಪರಾರಿಯಾಗಿದ್ದ. 

ಮೃತಳ ಸಹೋದರ   ಮಾದೇನಹಳ್ಳಿ ಗ್ರಾಮದ ಪ್ರದೀಪ್ ಚನ್ನಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. 

ಪ್ರಕರಣದ ತನಿಖೆಗೆ ಗ್ರಾಮಾಂತರ ಡಿವೈಎಸ್ಪಿ ಪ್ರಶಾಂತ ಜಿ.ಮುನೋಳಿ ನೇತೃತ್ವದಲ್ಲಿ ಸಿಪಿಐ ಆರ್.ಆರ್.ಪಾಟೀಲ, ಎಸ್‍ಐಗಳಾದ ಜಗದೀಶ್, ರೂಪ್ಲಿಬಾಯಿ, ಅಪರಾಧ ವಿಭಾಗದ ಸಿಬ್ಬಂದಿ ರುದ್ರೇಶ್, ಮಂಜುನಾಥ್, ಮೊಹಮ್ಮದ್ ಖಾನ್, ಧರ್ಮ, ಪ್ರವೀಣ ಗೌಡ, ಚಾಲಕರಾದ ರಘು, ರವಿ, ರೇವಣಸಿದ್ದಪ್ಪ ಒಳಗೊಂಡ 3 ತಂಡಕ್ಕೆ ಕೊಲೆ ಪ್ರಕರಣಗಳನ್ನು ಒಬ್ಬನೇ ವ್ಯಕ್ತಿ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನಲೆಯಲ್ಲಿ ಶಿವಕುಮಾರನನ್ನು ವಿಚಾರಣೆಗೆ ಒಳಪಡಿಸಿದಾಗ ವೇದಮೂರ್ತಿ ಮತ್ತು ಶ್ವೇತಾಳ ನಡುವೆ ಇದ್ದ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಎಎಸ್ಪಿ ಎಂ.ರಾಜೀವ್, ಚನ್ನಗಿರಿ ಡಿವೈಎಸ್ಪಿ ಪ್ರಶಾಂತ್ ಮುನೋಳಿ, ಸಿಪಿಐ ಆರ್.ಆರ್. ಪಾಟೀಲ್, ಪಿಎಸ್‍ಐಗಳಾದ ಜಗದೀಶ್, ರೂಪ್ಲಿಬಾಯಿ ಸೇರಿದಂತೆ ಇತರರು ಇದ್ದರು.

error: Content is protected !!