ಭದ್ರಾ ನಾಲೆಗೆ ಬಿದ್ದು ತಾಯಿ-ಮಕ್ಕಳಿಬ್ಬರು ಆತ್ಮಹತ್ಯೆ

ದಾವಣಗೆರೆ, ಜ.29- ಮಗಳ ವಿವಾಹ ವಿಚಾರದಲ್ಲಿನ ಕೌಟುಂಬಿಕ ಕಲಹದಿಂದ ಬೇಸತ್ತು ತಾಯಿ, ಮಗಳು ಮತ್ತು ಮಗ ಸೇರಿ ಒಂದೇ ಕುಟುಂಬದ ಮೂವರು ಚನ್ನಗಿರಿ ತಾಲ್ಲೂಕಿನ ಸೂಳೆಕೆರೆಯ ಭದ್ರಾ ನಾಲೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಚನ್ನಗಿರಿ ಸಮೀಪದ ಮರವಂಜಿ ಗ್ರಾಮದ ವಾಸಿ ನಿವೃತ್ತ ಶಿಕ್ಷಕ ರಾಜಪ್ಪ ಅವರ ಪತ್ನಿ ಕಮಲಮ್ಮ (50) ಮಗಳು ಶ್ರುತಿ (24) ಹಾಗೂ ಮಗ ಸಂಜಯ್ (20) ನಾಲೆಗೆ ಹಾರಿ ಸಾವಿಗೆ ಶರಣಾದ ದುರ್ದೈವಿಗಳು. ರಾಜ್ಯಶಾಸ್ತ್ರದಲ್ಲಿ ಎಂ.ಎ ಸ್ನಾತಕೋತ್ತರ ಪದವಿ ಮುಗಿಸಿದ್ದ ಮಗಳು ಶ್ರುತಿ ಅವರ ಮದುವೆಗೆ ತಂದೆ ರಾಜಪ್ಪ ವರನನ್ನು ಹುಡುಕುತ್ತಿದ್ದರು. ಆದರೆ, ಶ್ರುತಿ ಬಂದ ಎಲ್ಲ ಸಂಬಂಧಗಳನ್ನು ನಿರಾಕರಿಸುತ್ತಿದ್ದ ಹಿನ್ನೆಲೆಯಲ್ಲಿ ಕುಟುಂಬದಲ್ಲಿ ಮನಸ್ತಾಪ ಉಂಟಾಗುತ್ತಿತ್ತು ಎನ್ನಲಾಗಿದೆ. ಇದರಿಂದ ನೊಂದ ತಾಯಿ, ಮಗಳು ಬುಧವಾರ ಮನೆಯಿಂದ ನಾಪತ್ತೆಯಾಗಿದ್ದರು. ಇವರನ್ನು ಹುಡುಕುತ್ತಾ ಬಂದ ಮಗ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾನೆ.

 ಸಂಜಯ್ ಎಂಜಿನಿಯರಿಂಗ್ ಪದವಿ ಪಡೆದಿದ್ದರು. ಶ್ರುತಿ ಅವರ ಮೃತ ದೇಹ ಗುರುವಾರ ಸಂತೇಬೆನ್ನೂರು ಸಮೀಪದ ಮೆದಿಕೆರೆ ಬಳಿ ಪತ್ತೆಯಾಗಿದೆ. 

ಸಂಜಯ್ ಅವರ ಮೃತ ದೇಹ ಶುಕ್ರವಾರ ಯಕ್ಕೆಗೊಂದಿ ಭದ್ರಾ ನಾಲೆಯಲ್ಲಿ ಸಿಕ್ಕಿದೆ. ಕಮಲಮ್ಮ ಅವರ ಮೃತ ದೇಹಕ್ಕಾಗಿ ಶೋಧ ನಡೆಯುತ್ತಿದೆ. ಈ ಸಂಬಂಧ ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!