ಉಜ್ಜೈನಿ ಪೀಠದ ಬಗ್ಗೆ ಅವಹೇಳನ ಹೇಳಿಕೆ

ಉಜ್ಜೈನಿ ಪೀಠದ ಬಗ್ಗೆ ಅವಹೇಳನ ಹೇಳಿಕೆ

ತಮ್ಮ ಹೇಳಿಕೆ ಹಿಂಪಡೆಯಲು ಕೇದಾರ ಶ್ರೀಗಳಿಗೆ ಆವರಗೊಳ್ಳ ಶ್ರೀ ಆಗ್ರಹ

ದಾವಣಗೆರೆ, ಜ. 30- ಪಂಚಪೀಠಗಳಲ್ಲಿ ಒಂದಾದ ಉಜ್ಜೈನಿ ಪೀಠದ ಬಗ್ಗೆ ಅವಹೇಳನ ಕಾರಿಯಾಗಿ ಮಾತನಾಡಿರುವ ಕೇದಾರ ಪೀಠದ ಜಗದ್ಗುರುಗಳು, ತಮ್ಮ ಮಾತುಗಳನ್ನು ಹಿಂಪಡೆಯಬೇಕು ಎಂದು ಆವರಗೊಳ್ಳದ ಶ್ರೀ ಓಂಕಾರ ಶಿವಾಚಾರ್ಯ  ಸ್ವಾಮೀಜಿ ಆಗ್ರಹಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಹರಿಹರ ತಾಲ್ಲೂಕು ಶಿವನಹಳ್ಳಿ ಗ್ರಾಮದಲ್ಲಿ ನಡೆದ ಧಾರ್ಮಿಕ ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಕೇದಾರ ಪೀಠದ ಜಗದ್ಗುರು ಡಾ. ಭೀಮಾ ಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು, `ಉಜ್ಜಯಿನಿ ಮೂಲ ಪೀಠ ಮಧ್ಯಪ್ರದೇಶದಲ್ಲಿದೆ. ಇದು ಓಡಿ ಬಂದ ಮಹಿಳೆಯಂತೆ’ ಎಂಬ ಹೇಳಿಕೆ ಹಾಗೂ ಸಂವಿಧಾನವನ್ನು ಕಾಲಿನಲ್ಲಿ ತುಳಿಯುತ್ತೇವೆ’ ಎಂಬ ಹೇಳಿಕೆಗಳು ಧರ್ಮ ಹಾಗೂ ದೇಶಕ್ಕೆ ಮಾಡಿದ ಅಪಮಾನ ಎಂದು ಹೇಳಿದರು.

ಸನಾತನ ಪಂಚ ಪೀಠಗಳ ಬಗ್ಗೆ ನಾಡಿನ ಉದ್ದಗಲಕ್ಕೂ ಇರುವ ಭಕ್ತರು ಜಾತಿ, ಪಂಥ ಮೀರಿ ಗೌರವ ಸಲ್ಲಿಸುತ್ತಿದ್ದಾರೆ. ಭಕ್ತಿಯಿಂದ ನಡೆದುಕೊಳ್ಳುತ್ತಾ ಬಂದಿದ್ದಾರೆ. ವೈಯಕ್ತಿಕ ವಿಚಾರಗಳನ್ನು ಬದಿಗಿಟ್ಟು ಎಲ್ಲಾ ಪಂಚ ಪೀಠಗಳು ಒಂದೇ ಎಂಬ ಭಾವವನ್ನು ಭಕ್ತರು ತೋರಿಸುತ್ತಿದ್ದಾರೆ. ಜನ ಸಾಮಾನ್ಯರಲ್ಲಿಯೇ ಇಲ್ಲದ ರಾಗ, ದ್ವೇಷ, ಅಸೂಯೆ ಪೀಠಾಧಿಪತಿಗಳಲ್ಲಿ ಏಕೆ ಎಂದು ಪ್ರಶ್ನಿಸಿದರು? 

ಪೀಠಾಧಿಪತಿಗಳ ನುಡಿಗಳು ಭಕ್ತರ ಬದುಕಿಗೆ ದಿಕ್ಸೂಚಿಯಾಗಿರಬೇಕು. ಮತ್ತೊಂದು ಪೀಠಕ್ಕೆ ಅವಹೇಳನಕಾರಿಯಾಗಿ ಮಾತನಾಡುವುದು ಅವರ ಸ್ಥಾನಕ್ಕೆ ಶೋಭೆಯಲ್ಲ. ಮತ್ತೊಂದು ಪೀಠದ ಮೂಲ ಇರುವಿಕೆ ಬಗ್ಗೆ ಮಾತನಾಡುವ ನೈತಿಕ ಹಕ್ಕೂ ಅವರಿಗಿಲ್ಲ ಎಂದು ಹೇಳಿದರು.

ಕೇದಾರ ಪೀಠದ ಅಧಿಕಾರವನ್ನು ನೀವು ಉಳಿಸಿ, ಬೆಳೆಸಿಕೊಂಡಿರುವುದು ಸಂತೋಷ. ಆದರೆ ಮತ್ತೊಂದು ಪೀಠದ ವಿಚಾರದಲ್ಲಿ ನೀವು ತಲೆ ಹಾಕಬಾರದು.  ಉಜ್ಜೈನಿ ಪೀಠ ಕ್ಕಿರುವ ಲಕ್ಷಾಂತರ  ಭಕ್ತ ಸಂಪತ್ತು ಬೇರೆ ಇಲ್ಲ. ಜನರು ಈಗ ಬುದ್ದಿವಂತರಾಗಿದ್ದಾರೆ. ಸುಳ್ಳುಗಳನ್ನು ನಂಬುವುದಿಲ್ಲ. ಭಕ್ತರ ಹೆಜ್ಜೆ ನೋಡಿ ಗುರುಗಳು ಸಾಗಬೇಕಾದ ಸೂಕ್ಷ್ಮ ಕಾಲ ಇದು. ಭಕ್ತರನ್ನು ದಿಕ್ಕು ತಪ್ಪಿಸುವ ಹೇಳಿಕೆಗೆ ನಮ್ಮ ವಿರೋಧವಿದೆ ಎಂದು ಹೇಳಿದರು.

ಪೀಠಗಳ ಬಗ್ಗೆ ಆಂತರಿಕ ಕಲಹಗಳಿದ್ದರೆ ಮುಕ್ತವಾಗಿ ಕುಳಿತು ಬಗೆಹರಿಸಿಕೊಳ್ಳಬೇಕು. ಬಹಿರಂಗ ವೇದಿಕೆಯಲ್ಲಿ ನೀಡುವ ಹೇಳಿಕೆಗಳು ಪೀಠಕ್ಕೆ ಶೋಭೆ ತರುವುದಿಲ್ಲ ಎಂದರು.

ಎಲ್ಲಾ ಪೀಠಗಳು ಸಮಾನ ಎಂಬ ಭಾವನೆ, ಗೌರವ, ವಿಶ್ವಾಸ ಇಟ್ಟುಕೊಳ್ಳಲಿ. ಬೇಡವಾದರೆ ಅವರ ಪಾಡಿಗೆ ಅವರಿರಬೇಕು. ಮತ್ತೊಂದು ಪೀಠಕ್ಕೆ ಅವರು ಗುರುಗಳೇ ಅಲ್ಲ, ಪೀಠವೇ ಇಲ್ಲ ಎಂದು ಹೇಳಲು ಇವರಾರು? ಇವರೇ ಈಗ ಕೇದಾರದಿಂದ ಬಂದು ಹರಿಹರ ಬಳಿ  ಹಿಮಗಿರಿ ಎಂದು ಮಾಡಿಕೊಂಡು ಕುಳಿತಿಲ್ಲವೇ? ಮೂಲ ಪೀಠ ಕೇದಾರ ಎಂದು ಹೇಳುವುದಿಲ್ಲವೇ?.  ಉಜ್ಜೈನಿ ಪೀಠ ಓಡಿ ಬಂದ ಮಹಿಳೆಯಂತಾದರೆ, ಅಂತಹ ಪೀಠದಿಂದಲೇ ಇವರು ಅಧಿಕಾರ ತೆಗೆದುಕೊಂಡಿಲ್ಲವೇ? ಎಂದು ಅಸಮಾಧಾನ ಹೊರ ಹಾಕಿದರು.

ನಮ್ಮ ದೇಶದ ಸಂವಿಧಾನಕ್ಕೆ ಪೂಜ್ಯ ಸ್ಥಾನವಿದೆ. ಅಂತಹ ಸಂವಿಧಾನಕ್ಕೂ  ಕೀಳು ಮಟ್ಟದಲ್ಲಿ ಅವಹೇಳನ ಮಾಡಿ, ಅಗೌರವ ತೋರಿರುವುದು ನೋವಿನ ಸಂಗತಿ.  ಉನ್ನತ ಸ್ಥಾನದಲ್ಲಿ ಕುಳಿತವರು ಗೌರವಯುತ ಹೇಳಿಕೆ ನೀಡಬೇಕು ಎಂದು ಹೇಳಿದರು.

ಶಿವಗಂಗಾ ಕ್ಷೇತ್ರದ ಡಾ.ವಲಯ ಶಾಂತಮುನಿ  ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪಂಚ ಪೀಠಗಳು ಒಂದು ಕೈಯ್ಯಲ್ಲಿನ ಐದು ಬೆರಳುಗಳಂತೆ. ನಾಡಿನ ಜನರು ಎಲ್ಲಾ ಪೀಠಗಳನ್ನು ಗೌರವಿಸುತ್ತಿದ್ದಾರೆ. ಮಡಿವಂತಿಕೆ ದೂರ ಸರಿಸಿ, ತಳ ಸಮುದಾಯವನ್ನೂ ಹತ್ತಿರಕ್ಕೆ ಕರೆದು ಸೇವೆ ಸ್ವೀಕರಿಸುತ್ತಿದ್ದ ಪೀಠವೆಂದರೆ ಉಜ್ಜೈನಿ ಪೀಠ. ಅಂತಹ ಪೀಠದ ಬಗ್ಗೆ ಕೇದಾರ ಶ್ರೀಗಳು ಕೀಳು ಶಬ್ಧ ಬಳಸಿರುವುದು ಎಲ್ಲಾ ಸಮುದಾಯದ  ಭಕ್ತರ ಭಾವನೆಗೂ ಧಕ್ಕೆ ತಂದಿದೆ ಎಂದರು.

ಕಾವಿ ಇರುವುದು ದೇಶ ಸೇವೆ ಹಾಗೂ ಈಶ ಸೇವೆಯ ಬಗ್ಗೆ ಅರಿವು ಮೂಡಿಸಲು. ಆದರೆ ಇವರು ಈಶ ಭಕ್ತಿ ಹಾಗೂ ದೇಶ ಭಕ್ತಿ ಎರಡನ್ನೂ ಕೆಡಿಸುವ ಕೆಲಸ ಮಾಡಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೊಟ್ಟೂರು ಚಾನುಕೋಟಿ ಶ್ರೀ ಡಾ.ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಮುಷ್ಠೂರಿನ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಗಂಗಾಧರ ಸ್ವಾಮಿ ಕಂಬಾಳಿ ಮಠ ಉಪಸ್ಥಿತರಿದ್ದರು.

error: Content is protected !!