ಇಂದು ವಿಶ್ವ ಕುಷ್ಠ ರೋಗ ದಿನ / ಕುಷ್ಠ ರೋಗ ನಿರ್ಮೂಲನಾ ದಿನಾಚರಣೆ

ಇಂದು ವಿಶ್ವ ಕುಷ್ಠ ರೋಗ ದಿನ / ಕುಷ್ಠ ರೋಗ ನಿರ್ಮೂಲನಾ ದಿನಾಚರಣೆ

`ಕುಷ್ಠರೋಗಕ್ಕೆ ಚಿಕಿತ್ಸೆ ಉಚಿತ… ಉದಾಸೀನ ಮಾಡಿದರೆ ಅಂಗವಿಕಲತೆ ಖಚಿತ…’

ಕುಷ್ಠ ರೋಗಿಗಳ ಬಗ್ಗೆ ಹೆಚ್ಚಾಗಿ ಕಾಳಜಿ ವಹಿಸುತ್ತಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು, ನಂತರ ಅವರ ಸ್ಮಣಾರ್ಥವಾಗಿ, ಅವರು ಹುತಾತ್ಮರಾದ ದಿನವಾದ ಇಂದು ಅಂದರೆ ಜನವರಿ 30 ರಂದು `ವಿಶ್ವ ಕುಷ್ಠ ರೋಗ ದಿನ’ ಅಥವಾ  `ಕುಷ್ಠ ರೋಗ ನಿರ್ಮೂಲನಾ’ ದಿನವೆಂದು ಆಚರಿಸಲಾಗುತ್ತದೆ.

ಪ್ರತಿ ವರ್ಷದಂತೆ ಈ ವರ್ಷವೂ ಸಹ ವಿಶ್ವ ಆರೋಗ್ಯ ಸಂಸ್ಥೆಯು `ವಿಶ್ವ ಕುಷ್ಠ ರೋಗ ದಿನ’ವನ್ನು, ಸಮಾಜವನ್ನು ಕುಷ್ಠ ರೋಗದಿಂದ ರಕ್ಷಿಸಲು ವಿಶೇಷ ಧ್ಯೇಯದೊಂದಿಗೆ “ACT NOW, END LEPROSY” ಎಂಬ ವಿಶಿಷ್ಟ ಆಶಯದೊಂದಿಗೆ ಆಚರಿಸಲು ನಿರ್ಧರಿಸಿದೆ.

ಇದರ ಪ್ರಮುಖ ಉದ್ದೇಶವೆಂದರೆ ಜನರಲ್ಲಿ ಕುಷ್ಠ ರೋಗದ ಲಕ್ಷಣಗಳು, ಚಿಕಿತ್ಸೆ ಮತ್ತು ಅದರ ಬಗೆಗಿನ ಅಪನಂಬಿಕೆಗಳನ್ನು ದೂರೀಕರಿಸಲು ಹಾಗೂ ಸರಿಯಾದ ಮಾಹಿತಿ ನೀಡುವ ಮೂಲಕ ರೋಗಿಗಳನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಮತ್ತು ಅವರನ್ನು ಸಹ ಗೌರವಿಯುತವಾಗಿ ಬದುಕಲು ಅವಕಾಶ ಕಲ್ಪಿಸಿ ಕೊಡುವ ಒಂದು ಸಣ್ಣ ಪ್ರಯತ್ನ. 

ಕುಷ್ಠ ಅಥವಾ ಹ್ಯಾನ್ಸೆನ್ ಕಾಯಿಲೆ ಎಂದು ಮೊದಲು ಗುರುತಿಸಿದ ವೈದ್ಯ ಗೆರ್ಹಾರ್ಡ್ ಅರ್ಮೂಯೆರ್ ಹ್ಯಾನ್ಸೆನ್‌ರವರು. ಅವರು ಕಂಡು ಹಿಡಿದಿರುವುದರಿಂದ ಇದಕ್ಕೆ `ಹ್ಯಾನ್ಸೆನ್ ಕಾಯಿಲೆ’ ಎಂದು ಕೂಡ ಕರೆಯುತ್ತಾರೆ.

ಇದು ದೀರ್ಘಕಾಲದ ಕಾಯಿಲೆಯಾಗಿದ್ದು, ಅಂತರ್ಜೀವ ಕೋಶವಾದ ಆಸಿಡ್ – ಫಾಸ್ಟ್ ಬ್ಯಾಕ್ಟಿರೀಯಾಗಳಾದ ಮೈಕ್ರೋ ಬ್ಯಾಕ್ಟೀರಿಯಂ ಲೆಪ್ರೆಯಿ ಮತ್ತು ಮೈಕೋಬ್ಯಾಕ್ಟೀರಿಯಂ ಲೆಪ್ರೋಮತೊಸಿಸ್‌ದಿಂದ ಬರುವಂತಹುದು.

ಹೇಗೆ ಹರಡುತ್ತದೆ ? 

ಕುಷ್ಠ ರೋಗಿಯ ಮೂಗಿನಿಂದ ಸುರಿಯುವ ಲೋಳೆಯನ್ನು (ಗೊನ್ನೆ) ಹತ್ತಿರದಲ್ಲಿ ಬಹಳ ಹೊತ್ತು ಸಂಪರ್ಕವನ್ನು ಹೊಂದಿದ್ದರೆ ಅಥವಾ ಉಸಿರಾಟದಿಂದ ಕುಷ್ಠರೋಗವು ಅಂಟುತ್ತದೆ.

ಪ್ರಾಥಮಿಕವಾಗಿ ಈ ಕಾಯಿಲೆ, ನರಗಳು ಮತ್ತು ಮೇಲ್ಮೈ ಶ್ವಾಸೇಂದ್ರೀಯ ಪ್ರದೇಶದ ಮ್ಯುಕೋಸಾದ ಕಾಯಿಲೆ ಆಗಿರುತ್ತದೆ. ಚರ್ಮದ ಬಾಧೆ ಇದರ ಪ್ರಾಥಮಿಕ ಬಾಹ್ಯ ಚಿಹ್ನೆ ಯಾಗಿರುತ್ತದೆ. ಕುಷ್ಠವನ್ನು ಗುಣಪಡಿಸಿಕೊಳ್ಳದಿದ್ದಲ್ಲಿ, ಅದು ಅಭಿವೃದ್ಧಿಗೊಳ್ಳುತ್ತಾ ಹೋಗಿ ಚರ್ಮಕ್ಕೆ, ನರಗಳಿಗೆ, ಕಾಲುಗಳಿಗೆ ಮತ್ತು ಕಣ್ಣುಗಳಿಗೆ ಶಾಶ್ವತ ಹಾನಿಯನ್ನು ಉಂಟು ಮಾಡುತ್ತದೆ.

ಕುಷ್ಠ ರೋಗದ ಲಕ್ಷಣಗಳು ಇಂತಿವೆ 

1. ಚರ್ಮದ ಮೇಲೆ ತಿಳಿ-ಬಿಳಿ, ತಾಮ್ರವರ್ಣದ ಮಚ್ಚೆಗಳು ಆಗುವುದು, ನಂತರ ಮಚ್ಚೆಗಳಲ್ಲಿ ಸ್ಪರ್ಶ ಜ್ಞಾನವಿಲ್ಲದಂತೆ ಆಗುವುದು.

2. ಕೈ ಮತ್ತು ಕಾಲುಗಳು ಜೋಮು ಹಿಡಿಯುವುದು 

3. ಕೈ ಮತ್ತು ಕಾಲುಗಳಲ್ಲಿ ಸ್ಪರ್ಶ ಇಲ್ಲದಿರುವುದರಿಂದ ಗಾಯಗಳು ಆಗುವುದು, ಬಿಸಿ ಮತ್ತು ತಣ್ಣನೆಯ ವ್ಯತಾಸ ಗೊತ್ತಾ ಗದೇ ಇರುವುದರಿಂದ ಸುಟ್ಟ ಗಾಯಗಳೂ ಸಹ ಆಗಬಹುದು.

4. ಕಾಲಿಂದ  ಚಪ್ಪಲಿ ಪದೇ ಪದೇ ಜಾರುವುದು ಮತ್ತು ನರಗಳಲ್ಲಿ ನೋವು ಬರುವುದು ಉಂಟು.

5. ಹೊಳಪಿನಿಂದ ಕೂಡಿದ ದಪ್ಪನಾದ ಚರ್ಮ ಮತ್ತು ಚರ್ಮದ ಮೇಲೆ ಸಣ್ಣ ಗಂಟುಗಳು, ಇವಗಳು ವಿಶೇಷವಾಗಿ ಕಿವಿಯ ಹಾಲೆ, ಮುಖ ಮತ್ತು ಕೈ – ಕಾಲುಗಳ ಮೇಲೆ ಕಾಣಬಹದು.

6. ಕೈ, ಪಾದ ಮತ್ತು ಕಣ್ಣುಗಳಲ್ಲಿ ಬಲಹೀನತೆ, ಅಂಗಾಲುಗಳಲ್ಲಿ ಹುಣ್ಣು ಕಾಣಿಸಿಕೊಳ್ಳುತ್ತವೆ.

7. ಕಣ್ಣುಗಳು ಪೂರ್ಣವಾಗಿ ಮುಚ್ಚಲು ಆಗದಿರುವುದು.

ಬ್ಯಾಕ್ಟೀರಿಯಾಗಳ ಸಂಖ್ಯಾಭಿವೃದ್ಧಿಯು ಹೆಚ್ಚಳವಾಗುವ ಪ್ರಮಾಣದ ಮೇಲೆ ಈ ರೋಗವನ್ನು  ಎರಡು ರೀತಿಯಾಗಿ ವಿಂಗಡಿಸಲಾಗುತ್ತದೆ. ಅವುಗಳೆಂದರೆ `ಪಾಸಿಬ್ಯಾಸಿಲರಿ’ (1 ರಿಂದ 5 ಚರ್ಮದ ಮಚ್ಚೆಗಳು) ಮತ್ತು `ಮಲ್ಟಿ ಬ್ಯಾಸಿಲರಿ’ (ಜಾಸ್ತಿ ಪ್ರಮಾಣದಲ್ಲಿ ಬ್ಯಾಕ್ಟೀರಿಯಗಳಿರುತ್ತವೆ ಮತ್ತು 5 ಕ್ಕಿಂತ ಹೆಚ್ಚು ಚರ್ಮದ ಮಚ್ಚೆಗಳು ಇರುತ್ತವೆ ). ರೋಗದ ಪ್ರತಿಕ್ರಿಯೆ (lepra reaction) ಎಂದರೆ ಕೆಲವು ರೋಗಿಗಳಲ್ಲಿ ಮಚ್ಚೆಗಳು ಇದ್ದಕ್ಕಿದಂತೆ ಕೆಂಪಾಗಿ, ಬಾವು ಬರುವುದು ಮತ್ತು ನೋವು ಬರುವುದು, ಕೈ – ಕಾಲುಗಳಲ್ಲಿ ಕೆಲವು ನರಗಳು ಊತ ಉಂಟಾಗುವುದು ಮತ್ತು ನೋವು ಬರುವುದು  ಮುಂತಾದವುಗಳನ್ನು ಕಾಣಬಹದು. ಈ ರೀತಿಯಾದಲ್ಲಿ ಗಾಬರಿಯಾಗದೇ ತಕ್ಷಣ ಚರ್ಮ ವೈದ್ಯರ ಹತ್ತಿರ ಸಂಪರ್ಕಿಸಿ ಚಿಕಿತ್ಸೆ ಪಡೆಯಿರಿ.

1930ರಲ್ಲಿ ಡ್ಯಾಪ್ಸೋನ್ (Dapsone) ಮತ್ತು ಅದರ ಉತ್ಪನ್ನಗಳು ಬಂದ ಮೇಲೆಯೇ ಕುಷ್ಠರೋಗಕ್ಕೆ ಪರಿಣಾಮಕಾರಿ ಔಷಧವು ಬಂದಂತಾಯಿತು. ಏನೇ ಆದರೂ, ಕುಷ್ಠರೋಗ  ಜೀವಕೋಶ ಡ್ಯಾಪ್ಸೋನ್‌ಗೆ ವಿರೋಧವಿರುವುದರಿಂದ ಶೀಘ್ರವಾಗಿ ಅದು ವಿಕಸನ ಹೊಂದಿತು ಮತ್ತು ಡ್ಯಾಪ್ಸೋನ್‌‌ನ ಅತೀ ಬಳಕೆಯೂ ವ್ಯಾಪಕವಾಗಿ ಆಯಿತು. 

ನಂತರ 1980ರ ಆರಂಭದಲ್ಲಿ, (MDT) ಮಲ್ಟಿ ಡ್ರಗ್ ಥೆರೆಪಿ ಅಥವಾ ಬಹು ವಿಧದ ಔಷಧೋಪಚಾರವು ಮತ್ತು ರೋಗ ನಿರ್ಣಯವು ಯಶಸ್ವೀಯಾಗಿ ಆಗುವವರೆಗೂ ಈ ಅತೀ ಬಳಕೆ ಆಗುತ್ತಲೇ ಇತ್ತು.

ಚಿಕಿತ್ಸೆ – ಬಹುವಿಧ ಔಷಧ ಚಿಕಿತ್ಸೆ (MDT)ವೆಂದರೆ ಮೂರು ಬಗೆಯ ಔಷಧಿಗಳೆಂದರೆ  ಕ್ಲೋಫಾಜಿಮೈನ್ (clofazamine) ಮತ್ತು ರಿಫಾಂಪಿಸಿನ್ (Rifampicin), ಡ್ಯಾಪ್ಸೋನ್ (Dapsone) ಒಳಗೊಂಡ ಚಿಕಿತ್ಸೆ ಪರಿಣಾಮಕಾರಿಯಾಗಿದೆ. 

ಪಾಸಿಬ್ಯಾಸಿಲ್ಲರಿಗೆ(P.B) ಸುಮಾರು 6 ತಿಂಗಳು ಮತ್ತು `ಮಲ್ಟಿ ಬ್ಯಾಸಿಲ್ಲರಿ’ಗೆ (M.B) ಸುಮಾರು 12 ತಿಂಗಳು ನಿಯಮಿತವಾಗಿ ಎಂ.ಡಿ.ಟಿ ಪೂರ್ಣ ಚಿಕತ್ಸೆ ಪಡೆದರೆ ಕುಷ್ಠ ರೋಗವನ್ನು  ಸಂಪೂರ್ಣವಾಗಿ ಗುಣಪಡಿಸಬಹುದು. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ಹಾಗೂ ಮಾತ್ರೆಗಳು ದೊರೆಯುತ್ತದೆ. ರೋಗದ ಪ್ರತಿಕ್ರಿಯೆಗೆ ಸ್ಟೆರಾಯ್ಡ್ ಮಾತ್ರೆ ಕೊಟ್ಟು ತಗ್ಗಿಸಬಹುದು. ಕೆಲವು  ಕೈ –  ಕಾಲು ಮತ್ತು ಕಣ್ಣುಗಳ ನ್ಯೂನತೆಯನ್ನು ಶಸ್ತ್ರ ಚಿಕಿತ್ಸೆ ಮೂಲಕ ಸರಿಪಡಿಸಬಹುದು.

ಕುಷ್ಠ ರೋಗದ ಬಗ್ಗೆ ಜನರಲ್ಲಿ ಹಲವಾರು ಸಾಮಾಜಿಕ ಅಪನಂಬಿಕೆಗಳು ಇವೆ. ಅವುಗಳೆಂದರೆ ಈ ರೋಗವು ಹಿಂದಿನ ಜನ್ಮದ ಪಾಪದಿಂದ ಮತ್ತು ಬೇರೆಯವರ ಶಾಪದಿಂದ ಬರುತ್ತದೆ ಎಂಬ ಮೂಢನಂಬಿಕೆ ಜನರಲ್ಲಿ ದಟ್ಟವಾಗಿದೆ. ಈ ರೋಗಕ್ಕೆ ಮದ್ದು, ಚಿಕಿತ್ಸೆ ಇಲ್ಲ ಎಂಬ ಕಲ್ಪನೆಯೂ ಸಹ ಹಲವರಲ್ಲಿ ಇದೆ. ಯಾವುದೇ ಕಾರಣಕ್ಕೂ ವಂಶ ಪಾರಂಪರ್ಯದಿಂದಲೂ ಬರುವುದಿಲ್ಲ. ಕುಷ್ಠ ರೋಗಿ ಗುಣಮುಖವಾಗುವುದಿಲ್ಲ ಎಂಬ ಅಪನಂಬಿಕೆ ಇದೆ.

ಸಾಮಾಜಿಕ ಅಪಮಾನ ಅಥವಾ ಇನ್ನೊಂದು ರೀತಿಯಲ್ಲಿ ಕುಷ್ಠರೋಗದ ಅಪಮಾನವು ಮುಂದುವರೆದು ಕುಷ್ಠರೋಗಕ್ಕೆ ಕಾರಣವಾಗುತ್ತದೆ. ಅದು ಹೇಗೆಂದರೆ ಆ ರೋಗ ಇದೆಯೆಂದು ತೋರಿಸಿಕೊಳ್ಳುವುದಕ್ಕೇ ಸಂಕೋಚವಾಗಿ ಅಥವಾ ಅಪಮಾನವೆಂದು ಭಾವಿಸಿ, ಸುಮ್ಮನಿದ್ದು ಬಿಡುವುದರಿಂದ ರೋಗ ಉಲ್ಬಣಗೊಳ್ಳುವುದಕ್ಕೆ ಕಾರಣವಾಗುತ್ತದೆ.

ರೋಗಿಯು ಪಾಲಿಸಬೇಕಾದ  ಕೆಲವು ಕ್ರಮಗಳು ಇಂತಿವೆ:

1 ನಿಯಮಿತವಾಗಿ ಎಂ.ಡಿ.ಟಿ (MDT) ಔಷಧಿ ಪಡೆಯುವುದು. `ಕುಷ್ಠರೋಗಕ್ಕೆ ಚಿಕಿತ್ಸೆ ಉಚಿತ… ಉದಾಸೀನ ಮಾಡಿದರೆ ಅಂಗವಿಕಲತೆ ಖಚಿತ…’

2. ದಿನ ನಿತ್ಯ ಪಾದ ಮತ್ತು ಕೈಗಳಲ್ಲಿ ಗಾಯಗಳು ಆಗಿವೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸಿಕೊಳ್ಳಿ.

3. ಸ್ನಾನ ಮಾಡಿದ ಬಳಿಕ ಒಣ ತ್ವಚೆಯ ಮೇಲೆ ಲಿಕ್ವಿಡ್ ಪ್ಯಾರಾಫಿನ್ (liquid paraffin) ಅಥವಾ  ಮೋಸ್ಚ್‌ರೈಸಿಂಗ್  ಕ್ರೀಮ್ ಅಥವಾ ಲೋಷನ್ (moisturizering cream or lotion) ಹಚ್ಚಬೇಕು.

4. ಸ್ಪರ್ಶವಿಲ್ಲದ ಪಾದಗಳನ್ನು ಗಾಯವಾಗದಂತೆ ತಡೆಯಲು ಎಂ. ಸಿ. ಆರ್ (MCR) ಚಪ್ಪಲಿ ಬಳಸಬೇಕು.

5. ಕೈಗಳಲ್ಲಿ ಸ್ಪರ್ಶವಿಲ್ಲದಿದ್ದರೆ ಬರಿಗೈಯಲ್ಲಿ ಬಿಸಿ ವಸ್ತು ಮುಟ್ಟಬಾರದು.

6. ನಿಯಮಿತವಾಗಿ ವ್ಯಾಯಾಮ ಮತ್ತು ಫಿಸಿಯೋಥೆರಪಿ ಮಾಡಬೇಕು.

7. ವೈದ್ಯರ ಸಲಹೆ ಮೇರೆಗೆ ಮಾತ್ರ ಮಾತ್ರೆ ನಿಲ್ಲಿಸಬೇಕು.

8. ಎಂಡಿಟಿ ಮಾತ್ರೆಯಿಂದ ಏನಾದರೂ ತೊಂದರೆ ಆದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

9. ಕಣ್ಣುಗಳಿಗೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸಬೇಕು.

ಈ ರೋಗ ಶಾಪಗ್ರಸ್ತವೂ ಅಲ್ಲ. ಪಾಪದ ಫಲವೂ ಅಲ್ಲ. ಕುಷ್ಠ ರೋಗಿಗಳನ್ನು ಕೀಳಾಗಿ ಕಾಣದೇ ಮತ್ತು ತಾರತಮ್ಯ ಮಾಡದೇ ಅವರು ನಮ್ಮಂತೆ ಮನುಜರು ಎಂದು ಜನರು ಅರಿತುಕೂಳ್ಳಬೇಕು. ಅವರನ್ನು ಮಾನವೀಯ ಕಳಕಳಿಯಿಂದ ಕಾಣಬೇಕು ಮತ್ತು ಸಮಾಜ ನೋಡುವ ದೃಷ್ಟಿಕೋನ ಬದಲಾಗಬೇಕು ಆಗ ಮಾತ್ರ `ಕುಷ್ಠ ರೋಗ ನಿರ್ಮೂಲನಾ ದಿನಾಚರಣೆ’ ಅರ್ಥಪೂರ್ಣವಾಗುವುದು.

ಕುಷ್ಠ ರೋಗ ನಿವಾರಣೆ ಕಾರ್ಯಕ್ರಮ ಕೇವಲ ಪರಿಹಾರವಲ್ಲ. ಅದು ಮನುಷ್ಯನ ಬದುಕಿನ ಹತಾಷೆ ಭಾವನೆಯನ್ನು, ಸಂತಸ ತರುವ ಶ್ರದ್ಧೆಯನ್ನಾಗಿ ಮತ್ತು ವೈಯಕ್ತಿಕ ನೆಲೆಯ ಮಹದಾಸೆಯನ್ನು ನಿಸ್ವಾರ್ಥ ಸೇವೆಯನ್ನಾಗಿ ರೂಪಿಸುವ ಪವಿತ್ರ ಕಾರ್ಯವಾಗಿದೆ – ಮಹಾತ್ಮ ಗಾಂಧೀಜಿ


– ಡಾ. ಸೂಗಾರೆಡ್ಡಿ, ಚರ್ಮ ವಿಭಾಗದ ಮುಖ್ಯಸ್ಥರು, ಜ.ಜ.ಮ ವೈದ್ಯಕೀಯ ಕಾಲೇಜು, ದಾವಣಗೆರೆ.

– ಡಾ|| ಎನ್.ಸರ್ವೇಶ ಕುಮಾರ್, ಚರ್ಮರೋಗ ಸ್ನಾತಕೋತ್ತರ ವಿದ್ಯಾರ್ಥಿ, ಜೆಜೆಎಂ ಮೆಡಿಕಲ್‌ ಕಾಲೇಜು, ದಾವಣಗೆರೆ.

ಮೊ: 9741411503.

error: Content is protected !!