ಮಲೇಬೆನ್ನೂರು ಉರ್ದು ಶಾಲೆಗಳ ಕಲಿಕಾ ಹಬ್ಬದಲ್ಲಿ ಬಿಇಓ ಹನುಮಂತಪ್ಪ
ಮಲೇಬೆನ್ನೂರು, ಜ. 23- ಮಕ್ಕಳಲ್ಲಿ ಅಡಗಿರುವ ಕೌಶಲ್ಯಗಳನ್ನು ಹೊರ ತೆಗೆದು ಸೃಜನಾತ್ಮಕ ಶೈಕ್ಷಣಿಕ ಚಟುವಟಿಕೆಗಳನ್ನು ಕಲಿಸುವುದೇ ಕಲಿಕಾ ಹಬ್ಬ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್ ಹನುಮಂತಪ್ಪ ಹೇಳಿದರು.
ಪಟ್ಟಣದ ಸರ್ಕಾರಿ ಉರ್ದು ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಉರ್ದು ಕ್ಲಸ್ಟರ್ ಹಂತದ ಕಲಿಕಾ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಎರಡು ದಿನಗಳ ಕಲಿಕಾ ಹಬ್ಬದಲ್ಲಿ ಮಕ್ಕಳಿಂದ ವಿವಿಧ ಕಾರ್ಯಕ್ರಮಗಳನ್ನು
ಮಾಡಿಸಿ ಮಕ್ಕಳು ಸಂತಸದಿಂದ ಕಲಿತು, ಬೇರೆ ಮಕ್ಕಳಿಗೂ ಕೂಡ ಕಲಿಸುವಂತೆ ಆಗಬೇಕು ಎಂದು ಕಲಿಕಾ ಹಬ್ಬದ ತರಬೇತಿ ಪಡೆದ ಸಂಪನ್ಮೂಲ ಶಿಕ್ಷಕರಿಗೆ ಹೇಳಿದರು. ಸರ್ಕಾರದ ವಿನೂತನವಾದ ಈ ಕಾರ್ಯಕ್ರಮ ಮಕ್ಕಳ ಕಲಿಕೆಗೆ ಪೂರಕವಾಗಿದ್ದು, ಕಲಿಕೆಯನ್ನು ಅನುಭವ ಕೇಂದ್ರಿತವಾಗಿಸುವ ಈ ವಿಧಾನವನ್ನು ಹಬ್ಬವನ್ನಾಗಿ ಸಮುದಾಯದ ಕಣ್ಣೆದುರು ತರುವಂತಹ ಮಹತ್ವದ ಪ್ರಯತ್ನ ಇದಾಗಿದೆ ಎಂದು ಬಿಇಓ ಹನುಮಂತಪ್ಪ ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಸಮನ್ವಯಾಧಿಕಾರಿ ಕೃಷ್ಣಪ್ಪ, ಸರ್ಕಾರಿ ಶಾಲಾ ಮಕ್ಕಳು ಕಲಿಕಾ ಹಬ್ಬದಲ್ಲಿ ಎರಡು ದಿನಗಳ ಕಾಲ ನಡೆಯುವ ಉರ್ದು ಕ್ಲಸ್ಟರ್ನ ಕಿರಿಯ, ಹಿರಿಯ ಮತ್ತು ಪ್ರೌಢಶಾಲೆಯ 120 ಮಕ್ಕಳು ನಾಲ್ಕು ವಿಭಾಗಗಳಲ್ಲಿ ಕಲಿಯಲಿದ್ದಾರೆ. ಮಾಡು, ಹಾಡು, ಕಾಗದ, ಕತ್ತರಿ, ಬಣ್ಣ, ಊರು, ತಿಳಿಯೋಣ, ಹಾಡು, ಆಡು, ವಿಭಾಗಗಳಲ್ಲಿ ಮಕ್ಕಳ ಕಲಿಕೆಯ ಸಂಭ್ರಮವೇ ಕಲಿಕಾ ಹಬ್ಬ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೌಢಶಾಲೆಯ ಎಸ್ ಡಿಎಂಸಿ ಅಧ್ಯಕ್ಷ ಸೈಯದ್ ಸಾಬೀರ್ ಅಲಿ ಮಾತನಾಡಿ, ಮಕ್ಕಳು ಕಲಿಕಾ ಹಬ್ಬದಲ್ಲಿ ಕಲಿತ ಜ್ಞಾನವನ್ನು ಸದುಪಯೋಗಪಡಿಸಿಕೊಳ್ಳಿ ಎಂದರು. ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಮಹಮ್ಮದ್ ಜಬಿವುಲ್ಲಾ, ಪುರಸಭೆ ಸದಸ್ಯ ಷಾ ಅಬ್ರಾರ್, ಇಸಿಓ ಷಂಶಾದ್ ಬಾನು, ಸಿಆರ್ ಪಿ ರೇಷ್ಮಾ ಬಾನು ಮಾತನಾಡಿದರು.
ಉರ್ದು ಪ್ರೌಢಶಾಲಾ ಮುಖ್ಯ ಶಿಕ್ಷಕ ಎಂ.ಮಲ್ಲಿಕಾರ್ಜುನಪ್ಪ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಚಾರ್ಯ ಜಗದೀಶ್ ಉಜ್ಜಮ್ಮನವರ್, ಮಹಬೂಬಿ ಮಹಮದ್ ಖಲೀಲ್, ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಸಿ. ಜಯಣ್ಣ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್ ಚಂದ್ರಪ್ಪ, ನಿವೃತ್ತ ಶಿಕ್ಷಕ ಎಸ್. ಜಿ. ಸಜ್ಜನ್, ಮೊಹಮ್ಮದ್ ಗೌಸ್, ಫೈಜುಲ್ಲಾ ಇರ್ಷಾದ್, ಆನಂದ್, ಸಪೂರಾಬಿ, ಆರಿಫಾ ನಸ್ರೀನ್, ಫರ್ಜನಾ ಬಾನು, ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ವೈ. ಪಿ. ಸಾಕಮ್ಮ, ಬಿ. ಹೆಚ್. ಶಿವಕುಮಾರ್, ಸಂಪನ್ಮೂಲ ವ್ಯಕ್ತಿ ಗಳಾದ ಸೈಯೀದಾ ಕೌಸರ್, ತಸ್ನೀಮ್ ಫರೀದಾ ಬೇಗಂ, ನಜ್ಮಾ ಬಾನು, ಅತಾವುಲ್ಲಾ, ರಹಿಮ ಬಾನು, ಫಾಮೀದ, ಛಾಯಾದೇವಿ, ಶಕೀಲಾ ಬಾನು ಮುಂತಾದವರು ಉಪಸ್ಥಿತರಿದ್ದರು.
ಸೈಯದ್ ಅಯಾನ್ ಪ್ರಾರ್ಥಿಸಿದರು, ಹಿರಿಯ ಶಿಕ್ಷಕ ರೇವಣಸಿದ್ದಪ್ಪ ಅಂಗಡಿ ಸ್ವಾಗತಿಸಿದರು, ಶಿಕ್ಷಕಿ ರತ್ನವ್ವ ಸಾಲಿಮಠ ಕಾರ್ಯಕ್ರಮ ನಿರೂಪಿಸಿದರು, ಶಿಕ್ಷಕ ರಜಾಕ್ ವುಲ್ಲಾ ವಂದಿಸಿದರು.