ಅರ್ಬನ್ ಬ್ಯಾಂಕಿಗೆ ಮುಪ್ಪಣ್ಣ ಉಪಾಧ್ಯಕ್ಷ

ಅರ್ಬನ್ ಬ್ಯಾಂಕಿಗೆ ಮುಪ್ಪಣ್ಣ ಉಪಾಧ್ಯಕ್ಷ - Janathavaniದಾವಣಗೆರೆ, ಸೆ.28- ನಗರದ ದಾವಣಗೆರೆ ಅರ್ಬನ್ ಕೋ- ಆಪರೇಟಿವ್ ಬ್ಯಾಂಕ್ ಆಡಳಿತ ಮಂಡಳಿ ಉಪಾಧ್ಯಕ್ಷರಾಗಿ ಬ್ಯಾಂಕಿನ ಹಿರಿಯ ನಿರ್ದೇಶಕರಲ್ಲೊಬ್ಬರಾದ ವರ್ತಕ ಅಂದನೂರು ಮುಪ್ಪಣ್ಣ ಆಯ್ಕೆಯಾಗಿದ್ದಾರೆ.

ಬ್ಯಾಂಕಿನ ಸಭಾಂಗಣದಲ್ಲಿ ಇಂದು ನಡೆದ ಬ್ಯಾಂಕಿನ ಆಡಳಿತ ಮಂಡಳಿಯ ಸಭೆಯಲ್ಲಿ ಈ ಆಯ್ಕೆ ಅವಿರೋಧವಾಗಿ ನಡೆಯಿತು. 

ಮುಪ್ಪಣ್ಣ ಅವರ ಹೆಸರನ್ನು ಹಿರಿಯ ನಿರ್ದೇಶಕರೂ ಆದ ಜವಳಿ ಉದ್ಯಮಿ ಬಿ.ಸಿ. ಉಮಾಪತಿ ಅವರು ಸೂಚಿಸಿದ್ದರೆ, ಮತ್ತೋರ್ವ ನಿರ್ದೇಶಕರೂ ಆದ ವರ್ತಕ ಟಿ.ಎಸ್. ಜಯರುದ್ರೇಶ್ ಅವರು ಅನುಮೋದಿಸಿದರು. 

ಈ ಸಂದರ್ಭದಲ್ಲಿ ನೂತನ ಉಪಾಧ್ಯಕ್ಷ ಅಂದನೂರು ಮುಪ್ಪಣ್ಣ ಅವರನ್ನು ಅಭಿನಂದಿಸಿ ಮಾತನಾಡಿದ ನಿರ್ದೇಶಕ ದೇವರಮನಿ ಶಿವಕುಮಾರ್, ಯಾವುದೇ ಸಂಸ್ಥೆಗಳು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋದಾಗ ಮಾತ್ರ ಅಭಿವೃದ್ಧಿಯತ್ತ ಸಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ನಿರ್ದೇಶಕ ಇ.ಎಂ.ಮಂಜುನಾಥ ಕೂಡಾ ಮಾತನಾಡಿದರು. 

ನಿರ್ದೇಶಕರುಗಳಾದ ಮತ್ತಿಹಳ್ಳಿ ವೀರಣ್ಣ, ಎಂ.ಚಂದ್ರಶೇಖರ್, ಶ್ರೀಮತಿ ಸುರೇಖಾ ಎಂ.ಚಿಗಟೇರಿ, ಕಂಚಿಕೇರಿ ಮಹೇಶ್, ನಲ್ಲೂರು ಎಸ್.ರಾಘವೇಂದ್ರ, ವಿ.ವಿಕ್ರಮ್ ಅವರುಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಸಹಕಾರ ಸಂಘಗಳ ದಾವಣಗೆರೆ ಉಪವಿಭಾಗದ ಸಹಾಯಕ ನಿಬಂಧಕ ಎಂ.ದಕ್ಷಿಣಾಮೂರ್ತಿ ಅವರು ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಡಿ.ವಿ.ಆರಾಧ್ಯಮಠ್, ಉಪ ಪ್ರಧಾನ ವ್ಯವಸ್ಥಾಪಕ ಬಿ.ಎಸ್.ಮಲ್ಲೇಶ್ ಸಭೆಯ ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸಿದರು.

ಬ್ಯಾಂಕಿನ ಆಡಳಿತ ಮಂಡಳಿ ಅಧ್ಯಕ್ಷ ಕೋಗುಂಡಿ ಬಕ್ಕೇಶಪ್ಪ, ನಿರ್ದೇಶಕರುಗಳಾದ ಪಲ್ಲಾಗಟ್ಟಿ ಶಿವಾನಂದಪ್ಪ, ಅಜ್ಜಂಪುರ ಶೆಟ್ರು ವಿಜಯಕುಮಾರ್, ವೃತ್ತಿಪರ ನಿರ್ದೇಶಕ ಮುಂಡಾಸ್ ವೀರೇಂದ್ರ, ವಿಶೇಷ ಆಹ್ವಾನಿತರುಗಳಾದ ಎಂ.ದೊಡ್ಡಪ್ಪ, ಬೆಳ್ಳೂಡಿ ಮಂಜುನಾಥ್ ಅವರುಗಳು ಮುಪ್ಪಣ್ಣ ಅವರನ್ನು ಅಭಿನಂದಿಸಿದ್ದಾರೆ.

error: Content is protected !!