7.57 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಎಸ್ಸೆಸ್
ದಾವಣಗೆರೆ, ಸೆ.15- ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿರುವ ದಾವಣಗೆರೆ ಯಲ್ಲಿ ಈ ಯೋಜನೆಯಡಿ ಅಭಿವೃದ್ಧಿ ಕಾಮ ಗಾರಿಗಳು ಈಗಾಗಲೇ ಮುಕ್ತಾಯವಾಗಬೇಕಿತ್ತು. ಆದರೆ ನಿಧಾನಗತಿಯಲ್ಲಿ ಕಾಮಗಾರಿಗಳು ನಡೆಯುತ್ತಿರುವುದು ಗಮನಿಸಿದರೆ ಇನ್ನೂ ಐದು ವರ್ಷಗಳಾದರೂ ಕಾಮಗಾರಿ ಮುಕ್ತಾಯಗೊಳ್ಳುವ ಲಕ್ಷಣಗಳಿಲ್ಲ ಎಂದು ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಸಂಬಂಧಪಟ್ಟ ಅಧಿಕಾರಿಗಳಿಗೆ ಚಾಟಿ ಬೀಸಿದರು.
ಅವರು, ಇಂದು ನಗರದ ಮಾಗಾನಹಳ್ಳಿ ರಸ್ತೆಯ ಆಜಾದ್ ನಗರ ಪೊಲೀಸ್ ಠಾಣೆಯ ಮುಂಭಾಗದಲ್ಲಿ ದಾವಣಗೆರೆ ಸ್ಮಾರ್ಟ್ಸಿಟಿ ಯೋಜನೆಯಡಿ ಎಬಿಡಿ ಏರಿಯಾದ ಎಸ್ಎಸ್ಎಂ ನಗರ, ಬೀಡಿ ಲೇಔಟ್ ಹಾಗೂ ಪಾರ್ವತಮ್ಮ ನಗರಗಳಲ್ಲಿ 7.57 ಕೋಟಿ ರೂ. ವೆಚ್ಚದ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಅನುದಾನದಲ್ಲಿ ಒಂದು ಕಣ್ಣಿಗೆ ಸುಣ್ಣ: ಅಸಮಾಧಾನ
ಆಡಳಿತ ನಡೆಸುವವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು. ಆದರೆ ಇತ್ತೀಚಿಗೆ ಸರ್ಕಾರದಿಂದ 125 ಕೋಟಿ ರೂ. ಅನುದಾನ ಬಂದಾಗ ಒಂದು ಕಣ್ಣಿಗೆ ಸುಣ್ಣ, ಒಂದು ಕಣ್ಣಿಗೆ ಬೆಣ್ಣೆ ಎಂಬಂತೆ ವರ್ತಿಸಿದರು. ಈ ಬಗ್ಗೆ ಸಚಿವರ ಗಮನಕ್ಕೆ ತಂದರೂ ಸಹ ಅವರು ಸ್ಪಂದಿಸಲಿಲ್ಲ.
– ಶಾಮನೂರು ಶಿವಶಂಕರಪ್ಪ, ಶಾಸಕ
ಉಪ್ಪು ತಿಂದವರು ನೀರು ಕುಡಿತಾರೆ: ಎಸ್ಸೆಸ್
ದಾವಣಗೆರೆ, ಸೆ.15- ಉಪ್ಪು ತಿಂದವರು ನೀರು ಕುಡಿಯುತ್ತಾರೆ. ನನಗೇಕೆ ಡ್ರಗ್ಸ್ ಸುದ್ದಿ ಎಂದು ಡ್ರಗ್ಸ್ ಮಾಫಿಯಾದ ಬಗ್ಗೆ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಪ್ರತಿಕ್ರಿಯಿಸಿದರು.
ತಮ್ಮನ್ನು ಭೇಟಿಯಾದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಡ್ರಗ್ಸ್ ಮಾಫಿಯಾದಲ್ಲಿ ಇದ್ದವರಿಗೆ ಶಿಕ್ಷೆಯಾಗೇ ಆಗುತ್ತೆ. ಕ್ಯಾಸಿನೋ ಗಳಲ್ಲಿ ಜೂಜಾಟ ನಡೆಯುತ್ತದೆ. ಆದರೆ ಡ್ರಗ್ಸ್ ಇರಲ್ಲ. ಕ್ಯಾಸಿನೋಗೆ ಹೋದವರೆಲ್ಲಾ ಡ್ರಗ್ಸ್ ಸೇವಿಸಲ್ಲ. ಅಲ್ಲಿಗೆ ಹೋದವರೆಲ್ಲಾ ದುಡ್ಡು ಕಳೆದುಕೊಂಡು ಬರಬೇಕಷ್ಟೇ. ಜೂಜಾಟದ ಕ್ಯಾಸಿನೋ ನಡೆಸಿದವರಿಗೆ ಲಾಭವೇ ಹೊರತು, ಆಡಿದವನಿಗೆ ಅಲ್ಲ ಎಂದು ತಿಳಿಸಿದರು.
ಸಿನಿಮಾ ನಟಿಯರ ಜೊತೆ ಪೋಟೋ ತೆಗೆಸಿಕೊಂಡು ಕುಣಿದರೆ ಅಪರಾಧವಾಗುವುದೇ. ಒಬ್ಬರ ಮೇಲೆ ಮತ್ತೊಬ್ಬರು ಆರೋಪ ಮಾಡೋದು ಇದ್ದೇ ಇರುತ್ತೆ ಎಂದು ಜಮೀರ್ ಅಹ್ಮದ್ ಮೇಲಿನ ಆರೋಪಕ್ಕೆ ಉತ್ತರಿಸಿದರು.
ಯಡಿಯೂರಪ್ಪ ಅವರನ್ನು ಕೆಳಗಿಳಿಸೋದು ಅವರ ಪಕ್ಷದ ವಿಚಾರವೆಂದರು.
ಕಾಮಗಾರಿಗಳು ತ್ವರಿತವಾಗಿ ಮತ್ತು ಗುಣಮಟ್ಟದಿಂದ ನಡೆಯಬೇಕೆಂದು ಅನೇಕ ಬಾರಿ ಸಭೆ ನಡೆಸಿ ಸೂಚನೆ ನೀಡಲಾಗಿದೆ. ಆದರೂ ಸಹ ನಿಧಾನಗತಿಯಲ್ಲಿ ಕಾಮಗಾರಿಗಳು ನಡೆಯುತ್ತಿವೆ. ಅಧಿಕಾರಿಗಳು ಗುತ್ತಿಗೆದಾರರಿಂದ ಈ ಕಾಮಗಾರಿಗಳನ್ನು ಶೀಘ್ರ ಮುಕ್ತಾಯವಾಗುವಂತೆ ಕೆಲಸ ನಿರ್ವಹಿಸಿ ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮಹಾಪೌರರಾದ ಬಿ.ಜಿ. ಅಜಯಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಟಿ. ವೀರೇಶ್, ಮುಖಂಡ ಅಮಾನುಲ್ಲಾ ಖಾನ್ ಮಾತನಾಡಿದರು.
ಉಪ ಮೇಯರ್ ಶ್ರೀಮತಿ ಸೌಮ್ಯ ನರೇಂದ್ರ ಕುಮಾರ್, ನಗರ ಪಾಲಿಕೆ ಸದಸ್ಯರಾದ ಎ.ಬಿ. ರಹೀಂ, ಚಮನ್ಸಾಬ್, ಜಾಕೀರ್, ಸೈಯದ್ ಚಾರ್ಲಿ, ನೂರ್ಜಾನ್ಬಿ, ದೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್, ಮುಖಂಡರಾದ ಎ.ಬಿ. ಹಬೀಬ್ ಸಾಬ್, ಶಫೀಕ್ ಪಂಡಿತ್, ದಾದಾಪೀರ್, ಟಿ. ಅಸ್ಗರ್ ಸೇರಿದಂತೆ, ಇತರರು ಇದ್ದರು.