ದಾವಣಗೆರೆ, ಆ.28- ಬ್ಯಾಂಕ್ ಕಸ್ಟಮರ್ ಕೇರ್ ಅಧಿಕಾರಿ ಎಂದು ನಂಬಿಸಿ ಗೃಹಿಣಿಯೋರ್ವರ ಬ್ಯಾಂಕ್ ಖಾತೆಯಿಂದ 2 ಲಕ್ಷ ರೂ. ಗಳನ್ನು ಆನ್ ಲೈನ್ ಮುಖೇನ ವಂಚಿಸಿರುವ ಘಟನೆ ಇಲ್ಲಿನ ಸಿಇಎನ್ ಅಪರಾಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹರಿಹರದ ವಿಜಯನಗರ ಬಡಾವಣೆಯ ಆರ್. ಸುಮಾ ವಂಚನೆಗೊಳಗಾದ ಗೃಹಿಣಿ. ದೈನಂದಿನ ಹಣದ ವ್ಯವಹಾರಕ್ಕಾಗಿ ಹರಿಹರದಲ್ಲಿನ ಕೆನರಾ ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ಹೊಂದಿದ್ದು, ಹಣದ ವ್ಯವಹಾರಕ್ಕಾಗಿ ಬಳಸಲಾಗುತ್ತಿದ್ದ ಗೂಗಲ್ ಪೇ ಅಪ್ಲಿಕೇಶನ್ ನಲ್ಲಿ ವಹಿವಾಟು ಮಿತಿ ಹೆಚ್ಚಿಗೆ ಮಾಡಿಸಲು ಇದೇ 24ರಂದು ಕೆನರಾ ಬ್ಯಾಂಕ್ ನಲ್ಲಿ ತಿಳಿಸಿದಂತೆ ಬ್ಯಾಂಕಿನ ಕಸ್ಟಮರ್ ಕೇರ್ ಗೆ ಕರೆ ಮಾಡಿದಾಗ ಸಂಪರ್ಕ ಸಾಧ್ಯವಾಗದ ಕಾರಣ ಗೂಗಲ್ ಕ್ರೋಮ್ ಅಪ್ಲಿಕೇಷನ್ ನಲ್ಲಿದ್ದ ಟೋಲ್ ಫ್ರೀ ನಂಬರ್ ಗೆ ಕರೆ ಮಾಡಿ ದಾಗ ಅದು ಇನ್ನೊಂದು ಮೊಬೈಲ್ ನಂಬರ್ ಗೆ ಡೈವರ್ಟ್ ಆಗಿ ಅಪರಿಚಿತ ವ್ಯಕ್ತಿಯು ತಾನು ಕೆನರಾ ಬ್ಯಾಂಕ್ ಕಸ್ಟಮರ್ ಕೇರ್ ಅಧಿಕಾರಿ ಎಂದು ಪರಿಚಿತ ನಾಗಿ ವಹಿವಾಟು ಮಿತಿ ಹೆಚ್ಚಳಕ್ಕೆ ಬ್ಯಾಂಕಿನ ಖಾತೆ ವಿವರ ಹಾಗೂ ಒಟಿಪಿ ನಂಬರ್ ಸಹ ಪಡೆದು ವಂಚನೆ ಮಾಡಿರುವುದಾಗಿ ಸುಮಾ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಠಾಣೆಯ ಸುರೇಶ್ ಬಾಬು ತನಿಖೆ ಕೈಗೊಂಡಿದ್ದಾರೆ.
July 3, 2024