ಶ್ರೀಸಾಮಾನ್ಯನಿಗೆ ಮೊಬೈಲ್, ದುರ್ಬಲರಿಗೆ ಸಾಮಾಜಿಕ ನ್ಯಾಯ ರಾಜೀವ್ ಗಾಂಧಿ, ದೇವರಾಜ ಅರಸು ಕೊಡುಗೆ

ದಾವಣಗೆರೆ, ಆ. 21 –  ಶ್ರೀಸಾಮಾನ್ಯನ ಕೈಯಲ್ಲಿ ಮೊಬೈಲ್ ಬರಲು ದಿ.ರಾಜೀವಗಾಂಧಿ ಅವರು ಹಾಗೂ ದುರ್ಬಲರಿಗೆ ಸಾಮಾಜಿಕ ನ್ಯಾಯ ಪಡೆಯಲು ದೇವರಾಜ ಅರಸು ಅವರು ಕಾರಣರಾಗಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ಅಭಿಪ್ರಾಯಪಟ್ಟರು. 

ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿ ಇಂಟಾಕ್ ವಿಭಾಗದಿಂದ ನಿನ್ನೆ ಏರ್ಪಡಿಸಿದ್ದ ರಾಜೀವಗಾಂಧಿ ಮತ್ತು ದೇವರಾಜ ಅರಸು  ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ  ಭಾವಚಿತ್ರಗಳಿಗೆ ಪುಷ್ಟನಮನ ಸಲ್ಲಿಸಿ ಮಾತನಾಡಿದರು. 

ರಾಜೀವಗಾಂಧಿ ಅವರು ಅತಿ ಕಿರಿಯ ವಯಸ್ಸಿನಲ್ಲಿ ಭಾರತದ ಪ್ರಧಾನಮಂತ್ರಿಗಳಾಗಿ ಅಧಿಕಾರದ ಚುಕ್ಕಾಣಿ ಹಿಡಿದು ಐದು ವರ್ಷಗಳ ಕಾಲ ಉತ್ತಮ ಆಡಳಿತ ನೀಡಿ ಭಾರತ ದೇಶವನ್ನು ಶಕ್ತಿಶಾಲಿಯಾಗಿಸಿದರು. ರಾಜೀವ್ ಗಾಂಧಿ ಅವರು ಅಲ್ಪ ಸಮಯದಲ್ಲಿ ಧೃವತಾರೆಯಾಗಿ ಮಿಂಚಿದ್ದರು ಎಂದು ಬಣ್ಣಿಸಿದರು. 

ರಾಜೀವ್ ಗಾಂಧಿ ಅವರು 18 ವರ್ಷದವರಿಗೆ  ಮತದಾನದ ಹಕ್ಕು, ತಂತ್ರಜ್ಷಾನದ ಅಭಿವೃದ್ದಿಗೆ ಸಾಕಷ್ಟು ಕನಸು ಕಟ್ಟಿಕೊಂಡಿದ್ದು ಅದನ್ನು ಜಾರಿಗೊಳಿಸಿದರು. ಉನ್ನತ ಶಿಕ್ಷಣಕ್ಕೆ ಮಹತ್ವ ನೀಡಿ ಅನೇಕ ವಿವಿಗಳನ್ನು ಸ್ಥಾಪಿಸಿದರು. 

ದೇವರಾಜ ಅರಸು ರಾಜ್ಯ ಕಂಡ ಜನಪ್ರಿಯ ಮುಖ್ಯಮಂತ್ರಿಗಳಾಗಿದ್ದರು. ಎರಡು ಬಾರಿ ಮುಖ್ಯಮಂತ್ರಿಗಳಾಗಿದ್ದ ಅವರು ರಾಜ್ಯದಲ್ಲಿ 20 ಅಂಶಗಳ ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಉಳುವವನೇ ಹೊಲದ ಒಡೆಯ ಎಂಬ ಕಾಯ್ದೆ ಜಾರಿಗೊಳಿಸಿ ತಮಗಿದ್ದ 28 ಎಕರೆ ಜಮೀನನಲ್ಲಿ ತಮ್ಮ ಕೆಳಗೆ ಕೆಲಸ ಮಾಡುತ್ತಿದ್ದವರಿಗೆ 7 ಎಕರೆ ಅವರಿಗೆ ನೀಡುವ ಮೂಲಕ ಮಾದರಿಯಾಗಿದ್ದರು. ರಾಜ್ಯದಲ್ಲಿ ಜೀತ ಪದ್ದತಿ, ಮಲಹೊರುವ ಪದ್ದತಿಗಳನ್ನು ರದ್ದು ಮಾಡಿದರು. ಬಡವರು, ದಲಿತರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರಿಗೆ ರಾಜಕೀಯ ಕ್ಷೇತ್ರದಲ್ಲಿ ಅಧಿಕಾರ ನೀಡಿ ದುರ್ಬಲರಿಗೆ ಸಾಮಾಜಿಕ ನ್ಯಾಯ ಒದಗಿಸಿದ ಕೀರ್ತಿ ಅರಸು ಅವರಿಗೆ ಸಲ್ಲುತ್ತದೆ ಎಂದು ಅವರ ಸೇವೆ ಸ್ಮರಿಸಿದರು. 

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಇಂಟಾಕ್ ವಿಭಾಗದ ಅಧ್ಯಕ್ಷ ಕೆ.ಎಂ. ಮಂಜು ನಾಥ, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಬಿ.ಎಚ್.ಉದಯಕುಮಾರ್, ಎಂ.ಕೆ. ಲಿಯಾಕತ್ ಆಲಿ, ಆಲ್ಲಾವಲಿ ಸಮೀರಖಾನ್, ಆಲ್ಲಾವಲಿ ಸಜದ್‍ಖಾನ್, ಎಚ್.ಹರೀಶ್, ಡಿ.ಶಿವಕುಮಾರ್, ಎಚ್.ಎಸ್. ಶಶಿಕುಮಾರ್, ಕೇಶವನಾಯಕ್, ಬಾಷಾ, ಎಲ್ ಭೀಮೇಶ್, ಮಂಜುನಾಥ, ಕೆ.ಜೆ.ರಹಮತ್‍ಉಲ್ಲಾ, ಆಶ್ರಫ್ ಆಲಿ, ಮುಜಾಹಿದ್ ಖಾನ್ ಇತರರು ಭಾಗವಹಿಸಿದ್ದರು.

error: Content is protected !!