ನ್ಯಾಮತಿ, ಆ.21- ತಾಲ್ಲೂಕಿನ ಗೋವಿನಕೊವಿ ಗ್ರಾಮದ ರೈತ ಮಹಿಳೆ ಎಸ್.ಶ್ವೇತಾ ಮಹೇಶ್ವರಪ್ಪ (24) ಸಾಲಬಾಧೆ ಹೆಚ್ಚಾಗಿರುವುದರಿಂದ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ನಡೆದಿದೆ.
ರೈತ ಮಹಿಳೆ ಎಸ್.ಶ್ವೇತಾ ಮಹೇಶ್ವರಪ್ಪ ಅವರು 2 ಎಕರೆ ಜಮೀನು ಹೊಂದಿದ್ದು, ಕಳೆದ 3-4 ವರ್ಷಗಳಿಂದ ಜಮೀನಿನಲ್ಲಿ ಬೆಳೆದಿದ್ದ ಬೆಳೆಗಳು ಅತಿವೃಷ್ಠಿ ಮತ್ತು ಅನಾವೃಷ್ಠಿಯಿಂದ ನಷ್ಟ ಸಂಭವಿಸಿ, ಮಾಡಿದ ಸಾಲಕ್ಕೆ ಬಡ್ಡಿ ಕಟ್ಟಲಾಗದೆ ಹಾಗೂ ಮನೆ ನಿರ್ವಹಣೆ ಕಷ್ಟವಾಗಿದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ತಮ್ಮ ಮನೆಯಲ್ಲೇ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶ್ವೇತಾ ಅವರು ಗೋವಿನಕೊವಿ ವಿಎಸ್ಎಸ್ಎನ್ ಸಹಕಾರ ಸಂಘದಲ್ಲಿ 50 ಸಾವಿರ, ಹರಳಹಳ್ಳಿ ಉಜ್ವಲಾ ಖಾಸಗಿ ಬ್ಯಾಂಕಿನಲ್ಲಿ 50 ಸಾವಿರ ಹಾಗೂ ಖಾಸಗಿ ಸಾಲ 5 ಲಕ್ಷ ಮಾಡಿಕೊಂಡಿದ್ದಾರೆ ಎಂದು ಕುಟಂಬದವರು ತಿಳಿಸಿದರು.
ಮೃತ ಮಹಿಳೆಗೆ ಎರಡು ವರ್ಷದ ಹೆಣ್ಣು ಮಗು, ಪತಿಯನ್ನು ಅಗಲಿದ್ದಾರೆ. ಈ ಪ್ರಕರಣ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ಎಂದು ಪಿಎಸ್ಐ ಹನುಮಂತಪ್ಪ ಶಿರಹಟ್ಟಿ ತಿಳಿಸಿದರು.