ಜಿ.ಪಂ. ನೂತನ ಅಧ್ಯಕ್ಷರಾಗಿ ಕೆ.ವಿ. ಶಾಂತಕುಮಾರಿ ಆಯ್ಕೆ

ಜಿ.ಪಂ. ನೂತನ ಅಧ್ಯಕ್ಷರಾಗಿ ಕೆ.ವಿ. ಶಾಂತಕುಮಾರಿ ಆಯ್ಕೆ - Janathavaniದಾವಣಗೆರೆ, ಡಿ. 23- ಜಿಲ್ಲಾ ಪಂಚಾಯತಿ ನೂತನ ಅಧ್ಯಕ್ಷರಾಗಿ ಜಗಳೂರು ತಾಲ್ಲೂಕು ದೊಣ್ಣೆಹಳ್ಳಿ ಕ್ಷೇತ್ರದ ಜಿ.ಪಂ. ಸದಸ್ಯೆ ಕೆ.ವಿ. ಶಾಂತ ಕುಮಾರಿ ಆಯ್ಕೆಯಾದರು.

ದೀಪಾ ಜಗದೀಶ್ ಅವರ ರಾಜೀನಾಮೆಯಿಂದ ಕಳೆದ ಡಿ. 8 ರಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯಿತು.

ಮಧ್ಯಾಹ್ನ 12 ಗಂಟೆಯಿಂದ 1 ಗಂಟೆಯವರೆಗೆ ನಾಮಪತ್ರ ಸಲ್ಲಿಕೆಗೆ ಅವಧಿ ನಿಗದಿಪಡಿಸಲಾಗಿತ್ತು.  ಕೆ.ವಿ. ಶಾಂತಕುಮಾರಿ ಅವರು ಮಾತ್ರ ಎರಡು ನಾಮಪತ್ರ ಸಲ್ಲಿಸಿದರು.  

ಮಧ್ಯಾಹ್ನ 3 ಗಂಟೆಗೆ ಚುನಾವಣಾಧಿಕಾರಿ ಹಾಗೂ ಬೆಂಗಳೂರು ವಿಭಾಗದ ಪ್ರಾದೇ ಶಿಕ ಆಯುಕ್ತ ನವೀನ್‍ರಾಜ್ ಸಿಂಗ್ ಅವರು ನಾಮಪತ್ರ  ಪರಿಶೀಲಿಸಿ, ನಾಮಪತ್ರಗಳು ಕ್ರಮಬದ್ಧ ವಾಗಿವೆ ಎಂದು ಪ್ರಕಟಿಸಿದರು.  ಒಬ್ಬರೇ  ನಾಮಪತ್ರ ಸಲ್ಲಿಸಿದ್ದರಿಂದ ಶಾಂತ ಕುಮಾರಿ ಅವರು ಜಿಲ್ಲಾ ಪಂಚಾಯತಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.  

ಜಿ.ಪಂ.ನ  29 ಸದಸ್ಯರ ಪೈಕಿ, ಸಂತೆಬೆನ್ನೂರು ಕ್ಷೇತ್ರದ ಸದಸ್ಯ ಪಿ. ವಾಗೀಶ್ ನಿಧನರಾಗಿದ್ದರಿಂದ ಸಂಖ್ಯಾಬಲ 28 ಕ್ಕೆ ಇಳಿದಿದೆ.  ಈ ಪೈಕಿ ಚುನಾವಣಾ ವೇಳೆ 19 ಸದಸ್ಯರು ಹಾಜರಿದ್ದರು.  

ಉಳಿದಂತೆ ಎಂ.ಆರ್. ಮಹೇಶ್, ಅರ್ಚನಾ ಬಸವರಾಜ, ಬಸವರಾಜ ಕೆ.ಎಸ್., ಜಿ.ಸಿ. ನಿಂಗಪ್ಪ ಹದಡಿ, ರೇಣುಕ ಕರಿಬಸಪ್ಪ, ಕೆ.ಹೆಚ್. ಓಬಳಪ್ಪ, ಬಿ. ಫಕ್ಕೀರಪ್ಪ, ತೇಜಸ್ವಿ ವಿ. ಪಟೇಲ್, ಎಂ. ಯೋಗೇಶ್ ಸೇರಿದಂತೆ 9  ಸದಸ್ಯರು ಗೈರು ಹಾಜರಾಗಿದ್ದರು.

 ನೂತನ ಅಧ್ಯಕ್ಷರ ಅಧಿಕಾರ ಅವಧಿ  ಡಿ.23 ರಿಂದ 2021 ರ ಮೇ 2 ರವರೆಗೆ ಸೀಮಿತವಾಗಿರುತ್ತದೆ ಎಂದು ಚುನಾವಣಾಧಿಕಾರಿ ತಿಳಿಸಿದರು. ಸಿಇಒ ಪದ್ಮಾ ಬಸವಂತಪ್ಪ, ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

error: Content is protected !!