ಮನುಷ್ಯತ್ವ ಇದ್ದಲ್ಲಿ ದೇವರನ್ನು ಕಾಣಬಹುದು

ಜಿಲ್ಲಾಡಳಿತದ ಕನಕ ದಾಸರ ಜಯಂತ್ಯೋತ್ಸವದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ

ದಾವಣಗೆರೆ, ಡಿ.3- ದಾಸವರೇಣ್ಯ ಸಂತ ಕನಕದಾಸರ 533ನೇ ಜಯಂತಿಯನ್ನು ಇಂದು  ಸರಳವಾಗಿ ಆಚರಿಸಲಾಯಿತು.

ಜಿಲ್ಲಾಡಳಿತದ ವತಿಯಿಂದ ನಗರದ ಜಿಲ್ಲಾಡಳಿತ ಭವನದಲ್ಲಿ ಇಂದು ಆಯೋಜಿಸಲಾಗಿದ್ದ ಕಾರ್ಯ ಕ್ರಮದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್‌ ಬೀಳಗಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಪದ್ಮಾ ಬಸವಂತಪ್ಪ ಹಾಗೂ ವಿವಿಧ ಸಮಾಜಗಳ ಮುಖಂಡರು ಕನಕದಾಸರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸುವ ಮೂಲಕ ಗೌರವ ಸಲ್ಲಿಸಿದರು. 

ಜಿಲ್ಲಾಧಿಕಾರಿಗಳು ಮಾತನಾಡಿ, ತನ್ನ ಕಾರ್ಯ ಹಾಗೂ ಭಕ್ತಿಯ ಮೂಲಕ ದೇವರನ್ನು ಸಾಕ್ಷಾತ್ಕರಿಸಿಕೊಂಡವರು ಕನಕರು. ಹಾಗೆಯೇ ತಮ್ಮ ಕೀರ್ತನೆಗಳ ಮೂಲಕ ಸಮಾಜದ ಓರೆಕೋರೆಗಳನ್ನು ತಿದ್ದಿದವರು.

ಮನುಷ್ಯರಾಗಿ ಹುಟ್ಟಿದ ಮೇಲೆ ಒಳ್ಳೆಯ ಕೆಲಸಗಳನ್ನು ಮಾಡುವ ಮೂಲಕ ದೇವರಿಗೆ ಹತ್ತಿರವಾಗುವಂತಹ ಕಾರ್ಯಗಳನ್ನು ಮಾಡಬೇಕು. ನಮ್ಮಲ್ಲಿ ಮನುಷ್ಯತ್ವ ಇದ್ದಲ್ಲಿ ದೇವರನ್ನು ಕಾಣಬಹುದು. ಅಂತಹ ಮಾರ್ಗದಲ್ಲಿ ಸಾಗಿದ ಕನಕದಾಸರು ಕುಲ ಕುಲ ಕುಲವೆಂದು ಹೊಡೆದಾಡದಿರಿ ಎಂದು ಸರ್ವರನ್ನೂ ಸಮನಾಗಿ ಕಂಡವರು ಎಂದರು.

ಗಾಯಕ ಐರಣಿ ಚಂದ್ರು ಕನಕದಾಸರ ಕೀರ್ತನೆ ಹಾಡಿದರು

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ್‌ ವೀರಮಲ್ಲಪ್ಪ, ನಗರಾಭಿವೃದ್ಧಿ ಕೋಶದ ನಜ್ಮಾ, ಪಿ.ಆರ್.ಇ.ಡಿ.ಅಭಿಯಂತರ ಪರಮೇಶ್ವರಪ್ಪ, ಕುರುಬ ಸಮಾಜದ ಮುಖಂಡರಾದ ಕೆಂಗೋ ಹನುಮಂತಪ್ಪ, ಷಣ್ಮುಖಪ್ಪ,   ಶ್ರೀಮತಿ ಸುಧಾ, ರಾಜಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!