ಪ್ರೇಮ, ಸಹೋದರತ್ವದಿಂದ ರಾಮ ಮಂದಿರದ ಶಿಲೆಗಳ ಜೋಡಿಸೋಣ: ಪ್ರಧಾನಿ ಮೋದಿ ಕರೆ
ಅಯೋಧ್ಯೆ, ಆ. 5 – ಪ್ರೇಮ ಹಾಗೂ ಸಹೋದರತ್ವದಿಂದ ರಾಮ ಮಂದಿರದ ಶಿಲೆಗಳನ್ನು ಜೋಡಿಸುವಂತೆ ಕರೆ ನೀಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮರ್ಯಾದಾ ಪುರುಷೋತ್ತಮನ ದಿವ್ಯ – ಭವ್ಯ ಮಂದಿರ ಮುಂದಿನ ಪೀಳಿಗೆಯ ಆಸ್ಥೆ, ಶ್ರದ್ಧೆ ಹಾಗೂ ಸಂಕಲ್ಪದ ಪ್ರೇರಣೆಯಾಗಲಿ ಎಂದು ಕರೆ ನೀಡಿದ್ದಾರೆ.
ರಾಮ ಮಂದಿರಕ್ಕಾಗಿ ಶಿಲಾನ್ಯಾಸ ನೆರವೇರಿಸಿದ ನಂತರ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ, ವರ್ಷಗಳಿಂದ ಟೆಂಟ್ ಕೆಳಗೆ ಇದ್ದ ರಾಮ ಲಲ್ಲಾಗೆ (ಬಾಲಕ ರಾಮ ದೇವರು) ಭವ್ಯ ಮಂದಿರದ ನಿರ್ಮಾಣವಾಗಲಿದೆ. ಶತಮಾನದಿಂದ ನಡೆದು ಬರುತ್ತಿದ್ದ ಕುಸಿಯುವುದು ಮತ್ತೆ ಎದ್ದು ನಿಲ್ಲುವ ಪ್ರಕ್ರಿಯೆಯಿಂದ ರಾಮ ಜನ್ಮಭೂಮಿ ಈಗ ಮುಕ್ತವಾಗಿದೆ ಎಂದಿದ್ದಾರೆ.
ಇಲ್ಲಿನ ಕಟ್ಟಡಗಳು ನಾಶವಾದವು, ಏನೆಲ್ಲಾ ಆಯಿತು. ಅಸ್ತಿತ್ವ ನಾಶಗೊಳಿಸುವ ಎಲ್ಲ ಪ್ರಯತ್ನ ನಡೆದವು. ಆದರೂ, ರಾಮ ನಮ್ಮ ಮನಸ್ಸಿನಲ್ಲಿದ್ದಾನೆ, ನಮ್ಮ ಸಂಸ್ಕೃತಿಯ ಆಧಾರವಾಗಿದ್ದಾನೆ. ಭಗವಾನ್ ರಾಮನ ಶಕ್ತಿ ಅದ್ಭುತ. ರಾಮ ನಮ್ಮ ಮನದಲ್ಲಿ ನಮ್ಮೊಳಗೆ ಬೆರೆತಿದ್ದಾನೆ ಎಂದು ಪ್ರಧಾನಿ ಹೇಳಿದರು.
ಯಾವುದೇ ಕೆಲಸ ಇದ್ದರೂ ಪ್ರೇರಣೆಗೆ ಭಗವಾನ್ ರಾಮನ ಕಡೆಗೆ ನೋಡುತ್ತೇವೆ. ಶ್ರೀ ರಾಮ ಭಾರತದ ಮರ್ಯಾದೆ, ಶ್ರೀರಾಮ ಮರ್ಯಾದಾ ಪುರುಷೋತ್ತಮ. ಇದೇ ಆಲೋಚನೆಯಿಂದ ಅಯೋಧ್ಯೆಯಲ್ಲಿ ರಾಮ ಜನ್ಮಭೂಮಿಯಲ್ಲಿ ಶ್ರೀ ರಾಮನ ಭವ್ಯ ದಿವ್ಯ ಮಂದಿರಕ್ಕಾಗಿ ಇಂದು ಶಿಲಾನ್ಯಾಸವಾಗಿದೆ ಎಂದವರು ಹೇಳಿದರು.
ಮಾನವತೆಯು ರಾಮನನ್ನು ಸ್ವೀಕರಿಸಿದಾಗ ವಿಕಾಸವಾಗಿದೆ. ರಾಮನಿಂದ ದೂರವಾದಾಗ ವಿನಾಶದ ಮಾರ್ಗ ತೆರೆದಿವೆ ಎಂದು ವ್ಯಾಖ್ಯಾನಿಸಿದ ಮೋದಿ, ಎಲ್ಲರ ಭಾವನೆಗಳನ್ನು ಗೌರವಿಸಬೇಕು. ಎಲ್ಲರೊಂದಿಗೆ ಎಲ್ಲರ ವಿಶ್ವಾಸದೊಂದಿಗೆ ಎಲ್ಲರ ವಿಕಾಸ ಆಗಬೇಕಿದೆ. ನಮ್ಮ ಪರಿಶ್ರಮ, ಸಂಕಲ್ಪ ಶಕ್ತಿಯಿಂದ ಆತ್ಮವಿಶ್ವಾಸಿ ಹಾಗೂ ಆತ್ಮನಿರ್ಭರ್ ಭಾರತದ ನಿರ್ಮಾಣ ಮಾಡಬೇಕಿದೆ ಎಂದು ತಿಳಿಸಿದರು.
ಈಡೇರಿದ ಕೇಸರಿ ಅಜೆಂಡಾ; ನೆರವೇರಿದ ಮಂದಿರ ಶಿಲಾನ್ಯಾಸ
ಅಯೋಧ್ಯೆ, ಆ. 5 – ಬಹು ನಿರೀಕ್ಷಿತ ಅಯೋಧ್ಯೆ ರಾಮ ಮಂದಿರಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶಿಲಾನ್ಯಾಸ ನೆರವೇರಿಸಿದ್ದಾರೆ. ರಾಮ ಮಂದಿರ ಹೋರಾಟ ಆರಂಭವಾದ ಮೂರು ದಶಕಗಳ ನಂತರ ಬಿಜೆಪಿಯ ರಾಮ ಮಂದಿರ ಅಜೆಂಡಾ ಈಡೇರಿದಂತಾಗಿದೆ.
ಆರ್.ಎಸ್.ಎಸ್. ಮುಖ್ಯಸ್ಥ ಮೋಹನ್ ಭಾಗವತ್ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ರಾಮಜನ್ಮಭೂಮಿ ಹೋರಾಟದಲ್ಲಿ ಗುರುತಿಸಿಕೊಂಡಿದ್ದ ಸಾಧು, ಸಂತರು ಹಾಗೂ ಗಣ್ಯರಿಗೆ ಕಾರ್ಯಕ್ರಮದಲ್ಲಿ ಆಹ್ವಾನ ನೀಡಲಾಗಿತ್ತು. ಕೊರೊನ ಹಿನ್ನೆಲೆಯಲ್ಲಿ ಕೇವಲ 175 ಅತಿಥಿಗಳಿಗೆ ಮಾತ್ರ ಆಹ್ವಾನ ನೀಡಲಾಗಿತ್ತು.
ಪ್ರಧಾನಿ ಮೋದಿ ಅವರು ಮಾಸ್ಕ್ ಧರಿಸಿ ಮಂತ್ರ ಘೋಷಗಳ ನಡುವೆ ಶಿಲಾನ್ಯಾಸ ನೆರವೇರಿಸಿ ದರು. ಪೂಜಾ ವಿಧಿಗಳು ಪೂರ್ಣಗೊಂಡ ನಂತರ ಭಾರತ್ ಮಾತಾ ಕಿ ಜೈ ಹಾಗೂ ಹರ್ ಹರ್ ಮಹಾದೇವ್ ಘೋಷಣೆಗಳು ಮೊಳಗಿದವು. ಭೂಮಿ ಪೂಜೆಗಾಗಿ ಇಡೀ ಅಯೋಧ್ಯೆ ನಗರ ವನ್ನು ಸೇವಂತಿ ಹೂವು, ಹಳದಿ ಮತ್ತು ಕೇಸರಿ ಧ್ವಜಗಳಿಂದ ಸಿಂಗರಿಸಲಾಗಿತ್ತು. ಅಯೋಧ್ಯೆಗೆ ಸಾಗಿ ಬರುವ ಎಲ್ಲ ಮಾರ್ಗಗಳಲ್ಲಿ ರಾಮ ದೇವರ ಬೃಹತ್ ಕಟೌಟ್ಗಳನ್ನು ನಿರ್ಮಿಸಲಾಗಿತ್ತು.
ಹೆಲಿಕಾಪ್ಟರ್ ಮೂಲಕ ಆಗಮಿಸಿದ್ದ ಪ್ರಧಾನಿಯನ್ನು ಆದಿತ್ಯನಾಥ್ ಮತ್ತಿತರ ಗಣ್ಯರು ಸ್ವಾಗತಿಸಿದರು. ಶಿಲಾನ್ಯಾಸಕ್ಕೆ ತೆರಳುವ ಮಂಚೆ ಪ್ರಧಾನಿ ಹನುಮಾನ್ಘಡಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ಅಲ್ಲಿಂದ ಶ್ರೀ ರಾಮ ಜನ್ಮಭೂಮಿಗೆ ತೆರಳಿ ಅಲ್ಲಿ ಪ್ರತಿಷ್ಠಾಪಿಸಲಾಗಿರುವ ಭಗವಾನ್ ಶ್ರೀ ರಾಮಲಾಲಾ ವಿರಾಜಮಾನ್ ದರ್ಶನ ಪಡೆದರು. ಅಲ್ಲಿ ಅವರಿಗೆ ಪಾರಿಜಾತದ ಹೂವುಗಳನ್ನು ದೇವರಿಗೆ ಸಮರ್ಪಿಸಿದರು.
ಶಿಲಾನ್ಯಾಸದ ಫಲಕವನ್ನು ಅನಾವರಣಗೊಳಿಸಿದ ಅವರು, ರಾಮ ಜನ್ಮಭೂಮಿ ಮಂದಿರದ ಅಂಚೆ ಚೀಟಿಯನ್ನೂ ಬಿಡುಗಡೆ ಮಾಡಿದರು.
ಬಿಗಿ ಭದ್ರತೆ : ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆಯ ಜೊತೆಗೆ, ಕೊರೊನಾ ಮುನ್ನೆಚ್ಚರಿಕೆ ಕ್ರಮಗಳನ್ನೂ ತೆಗೆದುಕೊಳ್ಳಲಾಗಿತ್ತು. ಪ್ರಧಾನಿ ಭದ್ರತೆಗೆ ನಿಯೋಜಿಸಲಾಗಿದ್ದ ಎಲ್ಲಾ 300 ಪೊಲೀಸ್ ಸಿಬ್ಬಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು.
ಅಯೋಧ್ಯೆಗೆ ತೆರಳುವ ಎಲ್ಲಾ ಮಾರ್ಗಗಳನ್ನು ಬಂದ್ ಮಾಡಲಾಗಿತ್ತು. ಅಯೋಧ್ಯೆಯ ಮನೆಗಳು ಹಾಗೂ ದೇವಾಲಯಗಳ ತಾರಸಿಯ ಮೇಲೆ ಎಸ್.ಪಿ.ಜಿ. ಕಮಾಂಡೋ ಹಾಗೂ ಶಾರ್ಪ್ ಶೂಟರ್ಗಳನ್ನು ನಿಯೋಜಿಸಲಾಗಿತ್ತು.
ಅಯೋಧ್ಯೆಗೆ ತೆರಳುವ ಮಾರ್ಗದಲ್ಲಿ 100 ಚೆಕ್ಪೋಸ್ಟ್ಗಳನ್ನು ರೂಪಿಸಲಾಗಿತ್ತು. ಜಿಲ್ಲೆಯನ್ನು ಹಾರಾಟ ನಿಷೇಧ ಎಂದು ಘೋಷಿಸುವ ಜೊತೆಗೆ, ಸರಯೂ ನದಿ ತೀರದಲ್ಲೂ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ಮಂದಿರಕ್ಕೆ ಭೂಮಿ ಪೂಜೆ ನೆರವೇರಿಸುತ್ತಿರುವುದನ್ನು ಗಾಂಧಿನಗರದಲ್ಲಿ ಟಿವಿ ಮೂಲಕ ವೀಕ್ಷಿಸುತ್ತಿರುವ ಅವರ ತಾಯಿ ಹೀರಾಬೆನ್. ರಾಮ ಜನ್ಮಭೂಮಿ – ಬಾಬ್ರಿ ಮಸೀದಿ ಪ್ರಕರಣದಲ್ಲಿ ಮಂದಿರ ನಿರ್ಮಾಣದ ಪರವಾಗಿ ವಾದ ಮಂಡಿಸಿದ್ದ 93 ವರ್ಷದ ವಕೀಲ ಕೆ. ಪರಾಶರಣ್ ಅವರು ತಮ್ಮ ಮನೆಯಲ್ಲಿ ಕುಟುಂಬದವರ ಜೊತೆ ಮಂದಿರದ ಭೂಮಿ ಪೂಜೆ ಸಮಾರಂಭವನ್ನು ವೀಕ್ಷಿಸುತ್ತಿದ್ದಾರೆ.
ಅಯೋಧ್ಯೆಯಲ್ಲಿ ಮತ್ತೆ ‘ರಾಮಾಯಣ’ ಕಾಲ : ಅಯೋಧ್ಯೆ, ಆ. 5 – ರಾಮ ಮಂದಿರ ಶಿಲಾನ್ಯಾಸದ ದಿನದಂದು ಅಯೋಧ್ಯೆಯ ತುಂಬೆಲ್ಲಾ ಜೈ ಶ್ರೀ ರಾಮ್ ಹಾಗೂ ಸಿಯಾವರ ರಾಮಚಂದ್ರ ಕಿ ಜೈ ಘೋಷಣೆಗಳ ಜೊತೆಗೆ ಶಂಖ ಹಾಗೂ ಜಾಗಟೆಗಳ ಸದ್ದು ರಿಂಗಣಿಸುತ್ತಿತ್ತು.
ಬಹು ನಿರೀಕ್ಷಿತ ಶಿಲಾನ್ಯಾಸ ಸನಿಹದಲ್ಲೇ ನಡೆಯುತ್ತಿದ್ದರೂ ನೇರವಾಗಿ ನೋಡುವ ಭಾಗ್ಯ ಜನರಿಗೆ ಸಿಗಲಿಲ್ಲ. ಕೊರೊನಾ ಹಿನ್ನೆಲೆಯಲ್ಲಿ ಟಿವಿಗಳ ಮೂಲಕವೇ ಜನರು ಶಿಲಾನ್ಯಾಸ ವೀಕ್ಷಿಸಬೇಕಾಯಿತು.
ಹಿಂದೆ 1980ರ ದಶಕದಲ್ಲಿ ರಾಮಾಯಣ ಧಾರವಾಹಿ ಕಾಲದಲ್ಲಿ ಜನರು ಟಿವಿಗಳಿಗೆ ಅಂಟಿಕೊಂಡ ರೀತಿಯಲ್ಲೇ ಶಿಲಾನ್ಯಾಸ ಕಾರ್ಯಕ್ರಮವನ್ನು ದೂರದರ್ಶನದ ಮೂಲಕವೇ ವೀಕ್ಷಿಸಿದರು.
ಕೆಲ ಅಂಗಡಿಯವರು ಈ ಸಂದರ್ಭದಲ್ಲಿ ಸಿಹಿ ವಿತರಿಸಿದರು. ಹಲವಾರು ಮನೆಗಳ ಬಾಲ್ಕನಿಗಳು, ವೆರಾಂಡ ಹಾಗೂ ತಾರಸಿ ಮೇಲೆ ಶ್ರೀ ರಾಮ ಹಾಗೂ ಹನುಮಂತ ದೇವರ ಕೇಸರಿ ಧ್ವಜಗಳು ರಾರಾಜಿಸಿದವು. ಜನರು ಶಿಲಾನ್ಯಾಸದ ಸ್ಥಳಕ್ಕೆ ಬರದಂತೆ ಪೊಲೀಸರು ತಡೆದಿದ್ದರೆ. ಆದರೆ, ಐತಿಹಾಸಿಕ ಕ್ಷಣವನ್ನು ವೀಕ್ಷಿಸಲು ಜನರು ಹತ್ತಿರದ ಮನೆಗಳ ತಾರಸಿಯ ಮೇಲೆ ನೆರೆದಿದ್ದರು.
ಅಯೋಧ್ಯೆ ಹೋರಾಟ ಸ್ವಾತಂತ್ರ್ಯ ಆಂದೋಲನ : ಸ್ವಾತಂತ್ರ್ಯ ಆಂದೋಲನದ ಸಮಯದಲ್ಲಿ ಹಲವು ಪೀಳಿಗೆಗಳು ತಮ್ಮೆಲ್ಲವನ್ನೂ ಸಮರ್ಪಿಸಿದ್ದರು. ಗುಲಾಮಿಯ ಸಮಯದಲ್ಲಿ ಸ್ವಾತಂತ್ರ್ಯಕ್ಕೆ ಹೋರಾಟ ನಡೆಯದೇ ಇರುವ ದಿನವೇ ಇಲ್ಲ. ಅದೇ ರೀತಿ ರಾಮ ಮಂದಿರಕ್ಕಾಗಿ ಹಲವಾರು ಶತಮಾನಗಳವರೆಗೆ, ಹಲವು ಪೀಳಿಗೆಗಳು ಏಕ ನಿಷ್ಠೆಯಿಂದ ಅವಿರತ ಪರಿಶ್ರಮಿಸಿದ್ದಾರೆ. ಈ ದಿನ ಆ ತಪ, ತ್ಯಾಗ, ಸಂಕಲ್ಪದ ಪ್ರತೀಕವಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ರಾಮ ಮಂದಿರಕ್ಕೆ ನಡೆದ ಆಂದೋಲನದಲ್ಲಿ ಅರ್ಪಣೆಯೂ ಇತ್ತೂ, ತರ್ಪಣವೂ ಇತ್ತು. ಸಂಘರ್ಷವೂ ಇತ್ತು, ಸಂಕಲ್ಪವೂ ಇತ್ತು. ಅವರ ತ್ಯಾಗ, ಬಲಿದಾನ, ಸಂಘರ್ಷದಿಂದ ಈ ಕನಸು ಸಾಕಾರವಾಗಿದೆ. ಅವರ ತಪಸ್ಸು ರಾಮ ಮಂದಿರದಲ್ಲಿ ಬೆರೆತಿದೆ. ನಾನು ಅವರೆಲ್ಲರಿಗೂ 130 ಕೋಟಿ ಜನರ ಪರವಾಗಿ ತಲೆ ಬಾಗಿ ನಮಿಸುತ್ತೇನೆ ಎಂದು ಮೋದಿ ತಿಳಿಸಿದ್ದಾರೆ.
ಮಂದಿರದ ಜೊತೆ ಹೊಸ ಇತಿಹಾಸ ರಚನೆಯಾಗುವುದಷ್ಟೇ ಅಲ್ಲದೇ, ಇತಿಹಾಸ ಪುನರಾವರ್ತನೆಯೂ ಆಗುತ್ತಿದೆ. ಯಾವ ರೀತಿ ವಾನರರು ಹಾಗೂ ವನವಾಸಿ ಬಂಧುಗಳಿಗೆ ಭಗವಾನ್ ರಾಮನ ವಿಜಯ ಮಾರ್ಗವಾಗುವ ಸೌಭಾಗ್ಯ ಸಿಕ್ಕಿತೋ, ಅದೇ ರೀತಿ ದೇಶದೆಲ್ಲೆಡೆ ಜನರ ಸಹಯೋಗದಿಂದ ರಾಮ ಮಂದಿರ ನಿರ್ಮಾಣದ ಪುಣ್ಯ ಕಾರ್ಯ ಆರಂಭವಾಗಿದೆ ಎಂದವರು ಹರ್ಷ ವ್ಯಕ್ತಪಡಿಸಿದರು.
ವಾಲ್ಮೀಕಿ ರಾಮಾಯಣದಿಂದ ವಿರಾಟ್ ರಾಮನ ಬಣ್ಣನೆ
ಅಯೋಧ್ಯೆ, ಆ. 5 – ಸಾವಿರಾರು ವರ್ಷಗಳಿಂದ ಶ್ರೀ ರಾಮನ ಚರಿತೆ ನಾನಾ ರೂಪಗಳಲ್ಲಿ ದಾರ್ಶನಿಕರು ಕಂಡಿದ್ದಾರೆ. ದೇಶ ದೇಶಗಳಲ್ಲಿ ಹಲವು ರೀತಿಯ ರಾಮ ಚರಿತೆಗಳಿವೆ. ಬೇರೆ ಬೇರೆ ರಾಮಾಯಣ ಗಳಲ್ಲಿ ರಾಮ ಭಿನ್ನ ಭಿನ್ನವಾಗಿ ಕಂಡರೂ, ಎಲ್ಲೆಡೆ ಇದ್ದಾನೆ, ರಾಮ ಸತ್ಯವಾಗಿದ್ದಾನೆ. ರಾಮ ಭಾರತದ ಅನೇಕತೆಯಲ್ಲಿ ಏಕತೆ ತರುವ ಸೂತ್ರ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.
ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಿದ ನಂತರ ಮಾತನಾಡುತ್ತಿದ್ದ ಮೋದಿ, ಸಾವಿರಾರು ವರ್ಷಗಳ ಹಿಂದೆ ವಾಲ್ಮೀಕಿ ರಾಮಾಯಣದಲ್ಲಿ ಪ್ರಾಚೀನ ಭಾರತದ ದರ್ಶನವಾಗುತ್ತದೆ. ಮಧ್ಯ ಯುಗದಲ್ಲಿ ತುಳಸಿ ದಾಸ ಹಾಗೂ ಕಬೀರ್ ದಾಸರು ಮತ್ತು ಗುರು ನಾನಕರಿಂದ ರಾಮ ಚರಿತೆ ಭಾರತಕ್ಕೆ ಬಲ ತಂದಿದೆ. ಸ್ವಾತಂತ್ರ್ಯ ಸಮಯದಲ್ಲಿ ಮಹಾತ್ಮ ಗಾಂಧೀಜಿಯವರ ಭಜನೆಗಳಲ್ಲಿ ರಾಮ ನಾಮ ಅಹಿಂಸಾ ಶಕ್ತಿಯಾಗಿದೆ ಎಂದು ತಿಳಿಸಿದರು.
ತಮಿಳು, ತೆಲುಗು, ಒಡಿಯಾ, ಕನ್ನಡ, ಮಲೆಯಾಳಿ, ಕಾಶ್ಮೀರಿ, ಬಾಂಗ್ಲಾ ಹೀಗೆ ಹತ್ತು ಹಲವು ಭಾಷೆಗಳಲ್ಲಿ ರಾಮಾಯಣ ಬರೆಯಲಾಗಿದೆ. ಗುರು ಗೋವಿಂದ್ ಸಿಂಗ್ ಅವರಂತೂ ಗೋವಿಂದ ರಾಮಾಯಣವನ್ನೇ ಬರೆದಿದ್ದಾರೆ ಎಂದು ಮೋದಿ ತಿಳಿಸಿದರು.
ಭಾರತವಷ್ಟೇ ಅಲ್ಲ, ಮುಸ್ಲಿಮರು ಅತಿ ಹೆಚ್ಚಾಗಿರುವ ಇಂಡೋನೇಷಿಯಾದಲ್ಲಿ ಸ್ವರ್ಣದೀಪ ರಾಮಾಯಣ ಇದೆ. ರಾಮ ಅಲ್ಲಿ ಈಗಲೂ ಪೂಜನೀಯ. ಕಾಂಬೋಡಿಯ, ಮಲೇಷಿಯಾ, ಥೈಲ್ಯಾಂಡ್ಗಳಲ್ಲಿ ರಾಮಾಯಾಣಗಳಿವೆ. ಇರಾನ್ ಹಾಗೂ ಚೀನಾಗಳಲ್ಲೂ ರಾಮನ ಪ್ರಸಂಗ ಹಾಗೂ ರಾಮ ಕಥೆಗಳ ವಿವರಣೆ ಇದೆ.
ಶ್ರೀಲಂಕಾದಲ್ಲಿ ರಾಮಾಯಣವನ್ನು ಜಾನಕಿ ಹರಣ್ ಹೆಸರಿನಲ್ಲಿ ಹೇಳಲಾಗುತ್ತದೆ. ನೇಪಾಳವಂತೂ ಮಾತೆ ಜಾನಕಿಯಿಂದ ಸಂಬಂಧ ಬೆಸೆದುಕೊಂಡಿದೆ. ಇನ್ನು ಹಲವು ದೇಶಗಳಲ್ಲಿ ಶ್ರೀರಾಮ ಒಂದಲ್ಲಾ ಒಂದು ರೂಪದಲ್ಲಿ ಇದ್ದಾನೆ. ರಾಮ ಎಲ್ಲರಿಗೂ ಸೇರಿದವನು, ರಾಮ ಎಲ್ಲರಲ್ಲೂ ಇದ್ದಾನೆ. ರಾಮನ ಹೆಸರಿನಂತೆಯೇ ಅಯೋಧ್ಯೆಯಲ್ಲಿ ನಿರ್ಮಾಣವಾಗುವ ಮಂದಿರ ಭಾರತೀಯ ಸಂಸ್ಕೃತಿ ಸಮೃದ್ಧ ಪರಂಪರೆಯ ಧ್ಯೋತಕವಾಗಲಿದೆ. ರಾಮ ಮಂದಿರ ಅನಂತ ಕಾಲದವರೆಗೆ ಮಾನವತೆಗೆ ಪ್ರೇರಣೆ ನೀಡಲಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.
ತೀರ್ಪೀನಲ್ಲೂ, ಕೊರೊನಾದಲ್ಲೂ ‘ಮರ್ಯಾದೆ’
ಶ್ರೀರಾಮ ಮರ್ಯಾದಾ ಪುರುಷೋತ್ತಮ ಎಂದೇ ಭಕ್ತಮಾನಸದಲ್ಲಿ ಆರಾಧಿಸಲ್ಪಡುತ್ತಿದ್ದಾನೆ. ಅಂತಹ ರಾಮನ ಜನ್ಮಭೂಮಿ ಮಂದಿರದ ಶಿಲಾನ್ಯಾಸ ಸಮಾರಂಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು §ಮರ್ಯಾದೆ’ಯ ಆಧುನಿಕ ಅಗತ್ಯಗಳನ್ನು ಉದಾಹರಿಸಿದರು. ಸುಪ್ರೀಂ ಕೋರ್ಟ್ ಜನ್ಮಭೂಮಿ ಬಗ್ಗೆ ಐತಿಹಾಸಿಕ ತೀರ್ಪು ನೀಡಿದಾಗ ದೇಶವಾಸಿಗಳು ಶಾಂತಿಯೊಂದಿಗೆ ಎಲ್ಲರ ಭಾವನೆಗಳನ್ನು ಗೌರವಿಸಿ ನಡೆದುಕೊಂಡಿದ್ದೆವು. ಅದು ಮರ್ಯಾದೆ ಎಂದು ಮೋದಿ ಬಣ್ಣಿಸಿದರು.
ಈಗಲೂ ಸಹ ಕೊರೊನಾ ನಡುವೆ, ರಾಮನ ಕೆಲಸಕ್ಕೆ ಯಾವ ರೀತಿಯ ಮರ್ಯಾದೆ ನೀಡಬೇಕಾಗಿತ್ತೋ ಅದೇ ರೀತಿ ನೆಡೆದುಕೊಳ್ಳಲಾಗಿದೆ ಎಂದವರು ತಿಳಿಸಿದರು.
ಕೊರೊನಾ ಪರಿಸ್ಥಿತಿಯಲ್ಲಿ ಪ್ರಭು ರಾಮನ ಮರ್ಯಾದೆಯ ಮಾರ್ಗ ಇನ್ನೂ ಅಧಿಕ ಅವಶ್ಯವಾಗಿದೆ. ಈಗಿನ ಮರ್ಯಾದೆ, §ದೋ ಗಜ್ ಕಿ ದೂರಿ, ಮಾಸ್ಕ್ ಹೈ ಜರೂರಿ’ (ಆರು ಅಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಕಡ್ಡಾಯವಾಗಿ ಧರಿಸುವುದು) ಎಂದು ಮೋದಿ ಹೇಳಿದರು.
ಹಿರಿಯರು, ಮಕ್ಕಳು, ಚಿಕಿತ್ಸಕರು ಎಲ್ಲರ ಸದಾ ರಕ್ಷಣೆಯಾಗೇಕು ಎಂಬುದು ರಾಮ ಸಂದೇಶವಾಗಿತ್ತು. ಇದನ್ನು ಕೊರೊನಾ ಚೆನ್ನಾಗಿ ಕಲಿಸಿದೆ ಎಂದೂ ಪ್ರಧಾನಿ ತಿಳಿಸಿದರು.
ರಾಮ ಮಂದಿರ ನಿರ್ಮಾಣ ಪ್ರಕ್ರಿಯೆಯು ರಾಷ್ಟ್ರವನ್ನು ಜೋಡಿಸುವ ಪ್ರಕ್ರಿಯೆಯೂ ಆಗಿದೆ ಎಂದು ಹೇಳಿರುವ ಮೋದಿ, ಈ ಶಿಲಾನ್ಯಾಸವು ಮನುಷ್ಯನನ್ನು ದೈವತ್ಯದ ಜೊತೆ, ಸಮಾಜವನ್ನು ಶ್ರದ್ಧೆಯ ಜೊತೆ, ವರ್ತಮಾನವನ್ನು ಇತಿಹಾಸದ ಜೊತೆ, ನಮ್ಮನ್ನು ಸಂಸ್ಕಾರಕ್ಕೆ ಜೋಡಿಸುವ ಸಮಾರಂಭ ಎಂದು ಹೇಳಿದರು. ಈ ಐತಿಹಾಸಿಕ ಕ್ಷಣ ಯುಗ ಯುಗಗಳ ವರೆಗೆ ದಿಗ್ ದಿಗಂತವರೆಗೆ ಭಾರತದ ಕೀರ್ತಿಪತಾಕೆ ಹಾರಿಸುತ್ತಿರಲಿದೆ. ಈ ದಿನ ಕೋಟಿ ಕೋಟಿ ರಾಮ ಭಕ್ತರ ಸಂಕಲ್ಪದ ಸತ್ಯದ ಪ್ರಮಾಣವಾಗಿದೆ. ಈ ದಿನ ಸತ್ಯ ಅಹಿಂಸೆ, ಆಸ್ಥಾನ ಹಾಗೂ ಬಲಿದಾನಕ್ಕೆ ನ್ಯಾಯಪ್ರಿಯ ಭಾರತದ ಒಂದು ಅನುಪಮ ಕೊಡುಗೆಯಾಗಿದೆ ಎಂದು ಮೋದಿ ತಿಳಿಸಿದರು.
§ರಾಮ್ ಕಾಜ್ ಕಿನ್ಹೆ ಬಿನು ಮೋಹಿ ಕಹಾ ಬಿಶ್ರಾಮ್’ (ಶ್ರೀರಾಮನ ಕೆಲಸ ಮಾಡುವವರೆಗೆ ನನಗೆ ವಿಶ್ರಾಂತಿ ಇಲ್ಲ) ಎಂದು ಹನುಮಂತ ದೇವರು ಆಡಿದ ಮಾತುಗಳನ್ನು ಸ್ಮರಿಸಿದ ಮೋದಿ, ಶಿಲಾನ್ಯಾಸ ಕಾರ್ಯಕ್ರಮಕ್ಕೆ ತಾವು ಆಗಮಿಸಲೇಬೇಕಿತ್ತು ಎಂದು ಹೇಳುವ ಮೂಲಕ ಮಂದಿರ ಹೋರಾಟದಲ್ಲಿ ತಾವು ಗುರುತಿಸಿಕೊಡಿದ್ದನ್ನು ಸೂಚ್ಯವಾಗಿ ತಿಳಿಸಿದರು.
ಕಲ್ಲಿನ ಮೇಲೆ ಶ್ರೀ ರಾಮ ಹೆಸರು ಬರೆದಿದ್ದರಿಂದ ರಾಮ ಸೇತುವೆ ಆಯಿತು. ಅದೇ ರೀತಿ ಮನೆ ಮನೆಯಿಂದ, ಹಳ್ಳಿ ಹಳ್ಳಿಗಳಿಂದ ಶ್ರದ್ಧೆಯಿಂದ ಪೂಜಿಸಲ್ಪಟ್ಟ ಇಟ್ಟಿಗೆಗಳು, ದೇವಾಲಯಗಳಿಂದ ತಂದ ಮಣ್ಣು, ನದಿಯಿಂದ ತಂದ ನೀರನ್ನು ಮಂದಿರ ನಿರ್ಮಾಣಕ್ಕೆ ಬಳಸಲಾಗುತ್ತಿದೆ. ಅಲ್ಲಿನ ಸಂಸ್ಕೃತಿ – ಭಾವನೆ, ಅಯೋಧ್ಯೆಯ ಅಮೋಘ ಶಕ್ತಿಯಾಗಿದೆ. ಇದು ನಿಜವಾಗಿಯೂ ನಭೂತೋ ನಭವಿಷ್ಯತಿ ಎಂಬಂತಹ ಘಟನೆ ಎಂದು ಹೇಳಿದರು.
ತಮಿಳು ರಾಮಾಯಣದಲ್ಲಿ ಬರುವ §ಕಾಲಂತಾಣ್, ಇನ್ನ ಅನುಮ್ ಅರಿತು ಪೋಲಾಮ್’ ಅಂದರೆ ತಡ ಮಾಡಬಾರದು, ಮುನ್ನಡೆಯಬೇಕು ಎಂದು ಹೇಳಲಾಗಿದೆ. ಭಾರತಕ್ಕೆ ಹಾಗೂ ನಮ್ಮೆಲ್ಲರಿಗೂ ಭಗವಾನ್ ರಾಮನ ಸಂದೇಶ ಇದೇ ಆಗಿದೆ. ನಾವೆಲ್ಲರೂ ಮುನ್ನಡೆಯುತ್ತೇವೆ, ದೇಶ ಮುನ್ನಡೆಯುತ್ತದೆ. ರಾಮ ಯುಗ ಯುಗಕ್ಕೆ ಮಾನವರಿಗೆ ಪ್ರೇರಣೆ, ಮಾರ್ಗದರ್ಶನವಾಗಲಿ ಎಂದು ಪ್ರಧಾನಿ ಆಶಿಸಿದರು.
ವೇದಿಕೆಯ ಮೇಲೆ ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಆರ್.ಎಸ್.ಎಸ್. ಮುಖ್ಯಸ್ಥ ಮೋಹನ್ ಭಾಗವತ್, ರಾಮ ಜನ್ಮಭೂಮಿ ನ್ಯಾಸದ ಮುಖ್ಯಸ್ಥ ಮಹಾಂತ ನೃತ್ಯ ಗೋಪಾಲ್ ದಾಸ್ ಉಪಸ್ಥಿತರಿದ್ದರು.