ಸಮರ್ಪಕ ಚಿಕಿತ್ಸೆ ಸಿಗದೇ ಗರ್ಭಿಣಿ ಸಾವು : ಆಸ್ಪತ್ರೆ ಮುಂಭಾಗ ಮೃತಳ ಸಂಬಂಧಿಕರ ಆಕ್ರೋಶ

ಚನ್ನಗಿರಿ, ನ.8- ಸಮರ್ಪಕ ಚಿಕಿತ್ಸೆ ಸಿಗದೆ ಗರ್ಭಿಣಿ ಸಾವಿಗೀಡಾಗಿರುವುದಾಗಿ ಆರೋಪಿಸಿ ಮೃತಳ ಸಂಬಂಧಿಕರು ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ಇಂದು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚನ್ನಗಿರಿ ತಾಲ್ಲೂಕಿನ ತಾವರೆಕೆರೆ ಗ್ರಾಮದ ಖಮರುನ್ನೀಸಾ (25) ಮೃತ ಗರ್ಭಿಣಿ. ಹೆರಿಗೆ ನೋವು ಕಾಣಿಸಿಕೊಂಡಾಗ ಶನಿವಾರ ಈಕೆಯನ್ನು ತಾವರೆಕೆರೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಿಸಲಾಗಿತ್ತು. 

ಚಿಕಿತ್ಸೆ ನೀಡಲು ವೈದ್ಯರು ಇಲ್ಲದ ಕಾರಣ ಸುಮಾರು ಒಂದು ತಾಸಿಗೂ ಹೆಚ್ಚು ಸಮಯ ಆಸ್ಪತ್ರೆಯಲ್ಲಿದ್ದ ಸಿಬ್ಬಂದಿಗಳು ಕಾಯಿಸಿದರು. ನಂತರ ಚನ್ನಗಿರಿಗೆ ಹೋಗುವಂತೆ ತಿಳಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಆಸ್ಪತ್ರೆಗೆ ಕುಟುಂಬಸ್ಥರು ಕೊಂಡೊಯ್ಯುತ್ತಿರುವಾಗ ಮಾರ್ಗ ಮಧ್ಯೆ ಹೆರಿಗೆಯಾಗಿದ್ದು, ಮಗುವಿಗೆ ಜನ್ಮ ನೀಡಿ ಮಹಿಳೆ ಮೃತಪಟ್ಟಿದ್ದು, ಮಗು ಬದುಕುಳಿದಿದೆ ಎಂದು ಹೇಳಲಾಗಿದೆ.

ಈ ಘಟನೆಯಿಂದ ಅಸಮಾಧಾನಗೊಂಡ ಮೃತಳ ಸಂಬಂಧಿಕರು  ತಾವರೆಕೆರೆ ಆಸ್ಪತ್ರೆಗೆ ಬೀಗ ಜಡಿದು ಪ್ರತಿಭಟಿಸಿದ್ದಾರೆ. ಸ್ಥಳಕ್ಕೆ ಚನ್ನಗಿರಿ ಠಾಣೆ ಪೊಲೀಸರು ಭೇಟಿ ನೀಡಿದ್ದರು. 

 

error: Content is protected !!