ಬ್ಯಾಂಕಿಂಗ್ ವಿನಾಯ್ತಿಗಳನ್ನು ಮುಂದುವರೆಸಲು ಮನವಿ

ಮಾನ್ಯರೇ,

ಕೋವಿಡ್-19 ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಜನಸಾಮಾನ್ಯರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಬ್ಯಾಂಕಿಂಗ್ ಸೇವೆಯಲ್ಲಿ 3 ತಿಂಗಳ ಅವಧಿಗೆ ನೀಡಲಾಗಿದ್ದ ವಿನಾಯಿತಿಗಳು ಜೂನ್  ತಿಂಗಳಿಗೆ ಅಂತ್ಯವಾಗಿದ್ದು ಪರಿಣಾಮವಾಗಿ ಎಟಿಎಂ ಶುಲ್ಕ, ಉಳಿತಾಯ ಖಾತೆಗಳಿಗೆ ಮಿನಿಮಮ್ ಬ್ಯಾಲೆನ್ಸ್, ದಂಡ, ಮತ್ತಿತರ ಹಳೆಯ ನಿಯಮಗಳನ್ನು ಜುಲೈ 1ರಿಂದ ಅನ್ವಯವಾಗುವಂತೆ ಪುನಃ ಜಾರಿಗೆ ತಂದಿದೆ.

ಒಂದೆಡೆ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇದಿನೇ ಏರುಗತಿಯಲ್ಲಿ ಸಾಗುತ್ತಿದೆ. ಇನ್ನೊಂದೆಡೆ ಜನಸಾಮಾನ್ಯರ ಬದುಕು  ಮೇಲೇಳಲಾರದಂತಹ ಸ್ಥಿತಿ ತಲುಪಿ ಪಾತಾಳಕ್ಕೆ ಕುಸಿಯುತ್ತಿದೆ.  ಕೊರೋನಾ ಲಾಕ್ ಡೌನ್ ಪರಿಣಾಮವಾಗಿ ಒಂದೆಡೆ ಪೆಟ್ರೋಲ್ ಡೀಸೆಲ್ ಸೇರಿದಂತೆ   ಅಗತ್ಯ ವಸ್ತುಗಳ ಬೆಲೆ ಏರಿಕೆ, ಜನಗಳ ಕೈಯಲ್ಲಿ ಅತ್ತ ಕಾಸಿಲ್ಲದೆ, ಇತ್ತ ದುಡಿಮೆಯೂ ಇಲ್ಲದೆ ತುತ್ತು ಅನ್ನಕ್ಕೂ ಕೂಡ ಪರಿತಪಿಸುವಂತಹ ಸ್ಥಿತಿ ನಿರ್ಮಾಣವಾಗಿದೆ.

ಇಂತಹ ಕಠಿಣ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಬ್ಯಾಂಕಿಂಗ್ ಸೇವೆಗಳಿಗೆ ನೀಡಿದ್ದ ವಿನಾಯ್ತಿಯನ್ನು ಹಿಂತೆಗೆದುಕೊಂಡಿರುವುದು ಜನಸಾಮಾನ್ಯರಿಗೆ ಗಾಯದ ಮೇಲೆ ಉಪ್ಪು ಸುರಿದಂತಾಗಿದೆ. ಶ್ರೀಮಂತರ  ಬದುಕು ಹೇಗೋ ನಡೆಯುತ್ತದೆ ಆದರೆ ಇದರ ನೇರ ಪರಿಣಾಮ ಬಡ ಮತ್ತು ಮಧ್ಯಮ ವರ್ಗದ ಕುಟುಂಬದವರ ಮೇಲೆ ಬೀರುವುದು ಜಾಸ್ತಿ. ಕೇಂದ್ರ ಸರ್ಕಾರ ದಯಮಾಡಿ ಇಂತಹ ವಿಷಯವನ್ನು ಸೂಕ್ಷ್ಮವಾಗಿ ಗಮನಿಸಿ ಕನಿಷ್ಠ ಇನ್ನೂ ಮೂರು ತಿಂಗಳ ಕಾಲ ಬ್ಯಾಂಕಿಂಗ್ ಸೇವೆಯಲ್ಲಿ ನೀಡಿದ ವಿನಾಯಿತಿಯನ್ನು ಮುಂದುವರಿಸಬೇಕಾಗಿದೆ.

ಡಿ. ಮುರುಗೇಶ್, ದಾವಣಗೆರೆ.
[email protected]

error: Content is protected !!