ದಾವಣಗೆರೆ, ಜು. 31- ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ರಿಲಾಯನ್ಸ್ ಮಾರ್ಕೆಟ್ ಸಹಯೋಗದಲ್ಲಿ ಸಹಿ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ವಿಶ್ವ ಆರೋಗ್ಯ ಸಂಸ್ಥೆ ನೀಡಿದಂತಹ ಘೋಷವಾಕ್ಯದಡಿ `ಯುವ ಪೀಳಿಗೆಯನ್ನು ತಂಬಾಕು ಉದ್ಯಮಗಳ ಕುತಂತ್ರ ಹಾಗೂ ತಂಬಾಕು ಮತ್ತು ನಿಕೋಟಿನ್ ಬಳಕೆಯಿಂದ ರಕ್ಷಣೆ ಮಾಡುವುದು’ ಕುರಿತಂತೆ ಮಾಹಿತಿ ನೀಡಿ ಸಹಿ ಆಂದೋಲನ ನಡೆಸಲಾಯಿತು.
ಪ್ರಭಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪಿ.ಡಿ. ಮುರಳೀಧರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಂಬಾಕು ಮುಕ್ತ ಸಮಾಜ ನಿರ್ಮಿಸಲು ಸಹಕಾರ ನೀಡಬೇಕೆಂದು ಕರೆ ನೀಡಿದರು. ಇದೇ ವೇಳೆ ಪ್ರತಿಯೊಬ್ಬ ಗ್ರಾಹಕರಿಗೂ ಮಾಸ್ಕ್ ನೀಡಿ ಕೊರೊನಾ ಕುರಿತು ಅರಿವು ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ರಿಲಾಯನ್ಸ್ ಮಾರ್ಕೆಟ್ನ ಸ್ಟೋರ್ ಮ್ಯಾನೇಜರ್ ಸತೀಶ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಾ. ಸುರೇಶ್ ಬಾರ್ಕಿ, ಜಿಲ್ಲಾ ಎನ್ಸಿಡಿ ಸಂಯೋಜಕ ಡಾ. ಪಾಟೀಲ್, ಜಿಲ್ಲಾ ಸಲಹೆಗಾರ ಸತೀಶ್ ಕಲಹಾಳ್, ಸಮಾಜ ಕಾರ್ಯಕರ್ತ ಕೆ.ಪಿ. ದೇವರಾಜ್, ಆಪ್ತ ಸಮಾಲೋಚಕ ಎಂ. ವಿಶ್ವನಾಥ ಹಾಗೂ ಗ್ರಾಹಕರು ಹಾಜರಿದ್ದರು.