ನಗರಸಭೆಯ ಆಡಳಿತ ಬಿಜೆಪಿಗೆ ಬಹುತೇಕ ಖಚಿತ

ರಾಣೇಬೆನ್ನೂರು, ಅ.10 – ರಾಣೇ ಬೆನ್ನೂರು ನಗರಸಭೆ ಅಧ್ಯಕ್ಷ ಸ್ಥಾನ ಹಿಂದುಳಿದ ಅ ವರ್ಗದ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಆಯ್ಕೆಗೆ ಚುನಾವಣೆ ದಿನಾಂಕ ನಿಗದಿಯಾಗಬೇಕಿದೆ.

ಒಟ್ಟು ಇರುವ 35 ಸ್ಥಾನಗಳಲ್ಲಿ 15 ಬಿಜೆಪಿ, 10 ಕೆಪಿಜೆಪಿ, 9 ಕಾಂಗ್ರೆಸ್ ಹಾಗೂ 1 ಪಕ್ಷೇತರರು ಆಯ್ಕೆಯಾಗಿದ್ದರು. ಮೂಲತಃ ಬಿಜೆಪಿಯವರೇ ಆದ ಪಕ್ಷೇತರ ಸದಸ್ಯ ಪ್ರಕಾಶ ಬುರಡಿಕಟ್ಟಿ ಈಗಲೂ ಬಿಜೆಪಿಯನ್ನೇ ಬೆಂಬಲಿಸಲಿದ್ದಾರೆಂಬುದು ಖಚಿತ. ಕೆಪಿಜೆಪಿಯ ಕೆಲವರು ಕಾಂಗ್ರೆಸ್ ನತ್ತ, ಕೆಲವರು ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ. 

24×7 ಕುಡಿಯುವ ನೀರು ಸರಬರಾಜು ಯೋಜನೆ ಕಾಮಗಾರಿ ಕಳಪೆಯಾಗಿದೆ ಎಂದು ಎಲ್ಲಾ 35 ಸದಸ್ಯರು ತಿಂಗಳ ಹಿಂದೆ ಲಿಖಿತ ದೂರನ್ನು  ಉಸ್ತುವಾರಿ ಮಂತ್ರಿಗಳು, ಶಾಸಕರು ಹಾಗೂ ಜಿಲ್ಲಾಧಿಕಾರಿ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಸಲ್ಲಿಸಿದ್ದರು. ತದನಂತರ ಇದೇ ಕಾರಣದನ್ವಯ  ಕಾಂಗ್ರೆಸ್ ಹಾಗೂ ಕೆಪಿಜೆಪಿ ಬೆಂಬಲಿತರು ಸೇರಿದಂತೆ ಸುಮಾರು 10 ರಷ್ಟು ಸದಸ್ಯರು ಮಾತ್ರ ವಾರದ ಹಿಂದೆ ಧರಣಿ ನಡೆಸಿದ್ದರು. ಧರಣಿಗೆ  ಪೂರ್ವದಲ್ಲಿ ಶಾಸಕರು ತಮ್ಮ ಮನೆಯಲ್ಲಿ ಬಿಜೆಪಿ ಹಾಗೂ ಬೆಂಬಲಿತ ಸದಸ್ಯರ ಸಭೆ ನಡೆಸಿದ್ದರು.

ಅಧಿಕಾರ ಹಿಡಿಯಲು ಯಾವ ಪಕ್ಷಕ್ಕೂ ಸ್ವಂತ ಬಲ ಇಲ್ಲದಿದ್ದರೂ ಸಹ ಈ ಚಟುವಟಿಕೆಗಳನ್ನು ಪರಿಗಣಿಸಿದಲ್ಲಿ ಬಿಜೆಪಿ ತನ್ನ 15 ರ ಜೊತೆ,  ಕೆಪಿಜೆಪಿಯ ಹಾಗೂ ಶಾಸಕ, ಸಂಸದರ ಮತ ಪಡೆದು ನಗರಸಭೆಯ ಆಡಳಿತ ವಹಿಸಿಕೊಳ್ಳುವುದು ಖಚಿತವೆಂದು ಹೇಳಬಹುದು. ಕೋಳಿವಾಡರೇನಾದರು ಯಾವುದಾದರೂ ತಂತ್ರಗಾರಿಕೆ ಮಾಡಿದಲ್ಲಿ ಅಧಿಕಾರ ಬಿಜೆಪಿ ಕೈತಪ್ಪಬಹುದು ಎಂಬುದು ಕೆಲವರ ಅಂಬೋಣ. ಕವಿತ ಹೆದ್ದೇರಿ, ಹೊನ್ನವ್ವ ಕಾಟಿ, ರೂಪಾ ಚಿನ್ನಿಕಟ್ಟಿ, ಉಷಾ ಚಿನ್ನಿಕಟ್ಟಿ ಹಾಗೂ ರತ್ನವ್ವ ಪೂಜಾರ ಅಧ್ಯಕ್ಷತೆಗೆ ಬಿಜೆಪಿಯ ಅರ್ಹ ಸದಸ್ಯರು. ಅಧ್ಯಕ್ಷ ಸ್ಥಾನ ವನ್ನು ಹಿಂದುಳಿದವರು ಪಡೆಯಲಿದ್ದು, ಉಪಾ ಧ್ಯಕ್ಷರು ಮುಂದುವ ರೆದವರೇ ಆಗಬಹುದು.  ಈ ಅಲಿಖಿತ ನಿಯ ಮವನ್ನು ಎಲ್ಲಾ ಪಕ್ಷಗಳು ಅನುಸರಿಸುತ್ತವೆ. ಇಲ್ಲಿ ಕಸ್ತೂರಿ ಚಿಕ್ಕಬಿದರಿ, ಪ್ರಭಾವತಿ ತಿಳುವಳ್ಳಿ ಹಾಗೂ ಮಂಜುಳಾ ಹತ್ತಿ ಅವರು ಪರಿಗಣನೆಗೆ ಬರಲಿದ್ದಾರೆ. 

error: Content is protected !!