ಜಗಳೂರು: ಪತ್ರಕರ್ತರು ವೃತ್ತಿಯಲ್ಲಿ ಸದಾ ಜಾಗೃತರಾಗಿರಬೇಕು

ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಚಿದಾನಂದಪ್ಪ

ಜಗಳೂರು, ಜು.4- 1843 ರಲ್ಲಿ ರೆವರೆಂಡ್‌ ಫಾದರ್ ಹರ್ಮೋನ್‌ ಮೋ ಗ್ಲಿಂಗ್ ಅವರ ಸಂಪಾದಕತ್ವದಲ್ಲಿ ಕನ್ನಡದ ಮೊದಲ ಪತ್ರಿಕೆ `ಮಂಗಳೂರು ಸಮಾಚಾರ’ ಆರಂಭವಾಯಿತು. ಆ ದಿನ ಕನ್ನಡ ದಿನಪತ್ರಿಕೆಯ ಪತ್ರಿಕೋದ್ಯಮ ಉಗಮಕ್ಕೆ ಕಾರಣವಾಯಿತು. ಹಾಗಾಗಿ ಜುಲೈ 1 ಪ್ರತಿವರ್ಷ ಪತ್ರಿಕಾ ದಿನಾಚರಣೆ ಎಂದು ಆಚರಿಸಲಾಗುತ್ತದೆ ಎಂದು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಚಿದಾನಂದಪ್ಪ ತಿಳಿಸಿದರು.

ಜಗಳೂರು ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

 ಜನರ ಆಶಯಗಳಿಗೆ ಪೂರಕವಾಗಿ ಪತ್ರಕರ್ತ ಕಾರ್ಯನಿರ್ವಹಿಸಬೇಕು, ಪ್ರಗತಿ ಪರವಾಗಿ ಚಿಂತಿಸಬೇಕು, ಜವಾಬ್ದಾರಿ ಹೊಣೆ ಹೊತ್ತ ಪತ್ರಕರ್ತರು ಸದಾ ಜಾಗೃತರಾಗಿ ಇರಬೇಕಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಎ.ಎಮ್. ಕೊಟ್ರೇಶ್ ಮಾತನಾಡಿ, ಜನರಿಗೆ ಸತ್ಯದ ದರ್ಶನ ಮಾಡಿ ಸುವಲ್ಲಿ ಪ್ರಾಮಾಣಿಕ ಪತ್ರಕರ್ತ ದಿಟ್ಟತನ ವನ್ನು ತೋರಬೇಕಾಗಿದೆ. ಸಮಾಜದ ಸುಧಾ ರಣೆ ಹಾಗೂ ಜನರ ಮನಃಪರಿವರ್ತನೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದಾಗಿದೆ ಎಂದರು.

ಪತ್ರಕರ್ತರು ಸುದ್ದಿಗಳ ಅನ್ವೇಷಣೆಯಲ್ಲಿ ಶ್ರದ್ಧೆ ಶ್ರಮ ಅಳವಡಿಸಿಕೊಂಡು ಕ್ರಿಯಾಶೀಲ ರಾಗಿ ದುಡಿಯುತ್ತಿದ್ದಾರೆ ಎಂದರು.

`ಜನತಾವಾಣಿ’ ಉಪ ಸಂಪಾದಕ ಹಾಗೂ ಹಿರಿಯ ಪತ್ರಕರ್ತ ಬಿ.ಪಿ. ಸುಬಾನ್  ಮಾತ ನಾಡಿ, ಸಮಾಜದ ಏಳಿಗೆಗಾಗಿ ಕಾರ್ಯನಿ ರ್ವಹಿಸುತ್ತಿರುವ ಪತ್ರಕರ್ತರಿಗೆ ಸರ್ಕಾರ  ವಿಮೆ ಸೌಲಭ್ಯ ನೀಡುವ ವಿಚಾರದಲ್ಲಿ ಯಾವುದೇ ಕಾರಣಕ್ಕೂ ತಾರತಮ್ಯ ಮತ್ತು ಮೀನಾಮೇಷ ಎಣಿಸಬಾರದು ಎಂದು ಒತ್ತಾಯಿಸಿದರು.

ಕೋವಿಡ್-19 ನಿಯಂತ್ರಣ, ಜನ ಜಾಗೃತಿ ಹೋರಾಟದಲ್ಲಿ  ಗ್ರಾಮೀಣ ಪ್ರದೇಶ ಗಳಲ್ಲಿನ ಪತ್ರಕರ್ತರು ಜೀವದ ಹಂಗು ತೊರೆದು ಸುತ್ತಾಡಿ ಕೆಲಸ ಮಾಡಿದ್ದಾರೆ ಎಂದರು.

ಹಿರಿಯ ಪತ್ರಕರ್ತ ಡಿ. ಶ್ರೀನಿವಾಸ್  ಮಾತನಾಡಿ, ಕೋವಿಡ್-19 ಹಾವಳಿಯಿಂದ ಇಡೀ ದೇಶವೇ ಸಂದಿಗ್ಧ ಸ್ಥಿತಿಯಲ್ಲಿರುವ ಈ ಸಮಯದಲ್ಲಿ ಜನ ಮತ್ತು ಜನತೆಯ ನಡುವೆ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಪತ್ರಿಕೆ. ಇದು ಪತ್ರಿಕೋದ್ಯಮದ ಬದ್ಧತೆಗೆ ಸಾಕ್ಷಿ, ಆದರೆ ಪತ್ರಕರ್ತರಿಗೆ ಸೇವಾ ಭದ್ರತೆ ಇಲ್ಲ. ಸರ್ಕಾರವು ಪತ್ರಕರ್ತರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.

ಪತ್ರಿಕೆಗಳು ತಂತ್ರಜ್ಞಾನದ ಭರಾಟೆಯಲ್ಲಿ ಆಯಾ ಕಾಲಘಟ್ಟಕ್ಕೆ ಮಾರ್ಪಾಡುಗಳನ್ನು ಮಾಡಿಕೊಂಡು ಈಗಲೂ ತಮ್ಮ ಅಸ್ತಿತ್ವ ಉಳಿಸಿಕೊಂಡು ಬಂದಿವೆ. ಇದೇ ಕಾರಣಕ್ಕೆ ಸಾಮಾಜಿಕ ಜಾಲತಾಣ ಮತ್ತು ಟಿವಿ ಯೂಟ್ಯೂಬ್ ನೋಡಿ ಸುದ್ದಿ ತಿಳಿದು ಕೊಂಡರು ಪತ್ರಿಕೆ ಓದಿದಷ್ಟು ತೃಪ್ತಿ ನೀಡುವು ದಿಲ್ಲ. ಅಷ್ಟರಮಟ್ಟಿಗೆ ಪತ್ರಿಕೆ ನಮ್ಮ ನಿತ್ಯ ಜೀವನದಲ್ಲಿ ಹಾಸುಹೊಕ್ಕಾಗಿದೆ ಎಂದರು.

ಈ ಸಂದರ್ಭದಲ್ಲಿ ಪತ್ರಕರ್ತರಾದ ಲೋಕೇಶ್ ಎಮ್. ಐಹೊಳೆ, ಸಿ.ಬಸವರಾಜ್,  ವಿ.ಕೆ.ಬಸವರಾಜ್,   ಬಾಬು ಹೆಚ್. ಮರೇನಹಳ್ಳಿ,  ಧನ್ಯಕುಮಾರ್, ರವಿಕುಮಾರ್, ಎಂ.ರಾಜಪ್ಪ, ಮಾದಿಹಳ್ಳಿ ಮಂಜುನಾಥ,  ಮಾರುತಿ, ವಾಸಿಮ್, ತಿಪ್ಪೇ ಸ್ವಾಮಿ, ಜಗದೀಶ್,  ರಕೀಬ್, ಮಾರುತಿ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

error: Content is protected !!