ಅಭಿವೃದ್ಧಿ ನಿಗಮಕ್ಕೆ ‘ವೀರಶೈವ-ಲಿಂಗಾಯತ’ ಹೆಸರು

ಜಾಗತಿಕ ಲಿಂಗಾಯತ ಮಹಾಸಭಾ ಆಕ್ಷೇಪ

ದಾವಣಗೆರೆ, ಜು.2- ರಾಜ್ಯ ಸರ್ಕಾರ ‘ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ’ ಸ್ಥಾಪನೆಗೆ ಚಿಂತನೆ ನಡೆಸಿದೆ. ಇದಕ್ಕೆ ಜಾಗತಿಕ ಲಿಂಗಾಯತ ಮಹಾಸಭಾ ಸಿಎಂ ಯಡಿಯೂರಪ್ಪ ಅವರನ್ನು ಅಭಿನಂದಿಸುತ್ತಿದೆ. ಆದರೆ ‘ವೀರಶೈವ’ ಪದ ಸೇರ್ಪಡೆಗೆ ಆಕ್ಷೇಪವಿದೆ ಎಂದು ಮಹಾಸಭಾ ಅಧ್ಯಕ್ಷ ಎಂ. ಶಿವಕುಮಾರ್‌ ಹೇಳಿದ್ದಾರೆ.

ಈ ಹಿಂದೆ ಸರ್ಕಾರ ನೇಮಿಸಿದ್ದ ಹಾವನೂರು ಮತ್ತು ಚಿನ್ನಪ್ಪರೆಡ್ಡಿ ಆಯೋಗಗಳ ವರದಿಯ ಅನುಸಾರ ಮತ್ತು ರಾಜ್ಯ ಸರ್ಕಾರದ ನೋಟಿಫಿಕೇಷನ್‌ ಪ್ರಕಾರ ‘ವೀರಶೈವ-ಲಿಂಗಾಯತ’ ಎಂಬ ಶಬ್ದ ದಾಖಲೆಯಲ್ಲಿ ಇಲ್ಲ. ಕೇಂದ್ರದ ನೋಟಿಫಿಕೇಷನ್‌ನಲ್ಲೂ `ವೀರಶೈವ’ ಎಂದಿಲ್ಲ. ಅಲ್ಲಿರುವುದು `ಲಿಂಗಾಯತ’ ಮಾತ್ರ ಎಂದು ಸ್ಪಷ್ಟನೆ ನೀಡಿದ್ದಾರೆ.

2002 ರಲ್ಲಿ ಎಸ್‌.ಎಂ. ಕೃಷ್ಣ ಸಿಎಂ ಆಗಿದ್ದಾಗ ವೀರಶೈವ ಮಹಾಸಭಾದ ಒತ್ತಾಯದ ಮೇರೆಗೆ ಜಾತಿ ಪ್ರಮಾಣ ಪತ್ರದಲ್ಲಿ ‘ವೀರಶೈವ’ ಎನ್ನುವ ಶಬ್ಧವನ್ನು ‘ಲಿಂಗಾಯತ’ದೊಂದಿಗೆ ಅನಗತ್ಯವಾಗಿ ಸೇರ್ಪಡೆಯಾಗಿದೆ.  ಈ ಎರಡೂ ಪದಗಳನ್ನು ಒಟ್ಟಿಗೆ ಸೇರಿಸಲು ಹೊರಟರೆ ಕಾನೂನಾತ್ಮಕ ತಪ್ಪು ನಿರ್ಧಾರವಾಗುತ್ತದೆ ಎಂದು ಶಿವಕುಮಾರ್‌ ಸರ್ಕಾರದ ಗಮನ ಸೆಳೆದಿದ್ದಾರೆ. ಲಿಂಗಾಯತ ಅಭಿವೃದ್ಧಿ ನಿಗಮ ಎಂದೇ ನಾಮಕರಣ ಮಾಡುವಂತೆ ಒತ್ತಾಯಿಸಿದ್ದಾರೆ.

error: Content is protected !!